ಕೆಂಗಲ್ ಹನುಮಂತಯ್ಯ ಅವರ ಕೂಸು, ವಿಧಾನಸೌಧಕ್ಕೀಗ ಅರುವತ್ತು !
ಬೆಂಗಳೂರು, ಅಕ್ಟೋಬರ್ 10 : ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ವಿಶೇಷ ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದೆ. ಅ.25ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಕೆಂಗಲ್ ಹನುಮಂತಯ್ಯ ನಿರ್ಮಿಸಿದ ವಿಧಾನಸೌಧಕ್ಕಿಗ ಅರವತ್ತರ ಸಂಭ್ರಮ.
ಸ್ಪೀಕರ್ ಕೆ.ಬಿ.ಕೋಳಿವಾಡ ನೇತೃತ್ವದ ನಿಯೋಗ ರಾಷ್ಟ್ರಪತಿಗಳಿಗೆ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದೆ. ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ರಾಮನಾಥ ಕೋವಿಂದ್ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ವಿಧಾನಸೌಧಕ್ಕೆ 60: ಸಂಭ್ರಮಕ್ಕೆ ಅಣಿಯಾಗಿ, ಸಿದ್ದರಾಮಯ್ಯ
ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿಯೇ ಜಂಟಿ ಅಧಿವೇಶನ ನಡೆಯಲಿದೆ. ಅಕ್ಟೋಬರ್ 25ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
'ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿಗಳಿಗೆ ಸರ್ಕಾರದ ಪರವಾಗಿ ಆಹ್ವಾನ ನೀಡಲಾಗಿದೆ. ರಾಷ್ಟ್ರಪತಿಗಳು ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಂಟಿ ಅಧಿವೇಶನದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದಾರೆ' ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಅಕ್ಟೋಬರ್ 25ರಂದು ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಆರಂಭವಾಗಲಿದ್ದು, ಮೊದಲು ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ಬಳಿಕ ರಾಜ್ಯಪಾಲರು, ಮುಖ್ಯಮಂತ್ರಿಗಳು ಭಾಷಣ ಮಾಡಲಿದ್ದಾರೆ. ಪ್ರತಿಪಕ್ಷಗಳ ನಾಯಕರು ಅಧಿವೇಶನದಲ್ಲಿ ಮಾತನಾಡಲಿದ್ದಾರೆ.
ವಿಧಾನಸೌಧಕ್ಕೆ 60 : ಕರ್ನಾಟಕ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ. ದೇಶದ ವಿವಿಧ ರಾಜ್ಯಗಳ ಆಡಳಿತ ಶಕ್ತಿ ಕೇಂದ್ರಗಳಲ್ಲಿ ಕರ್ನಾಟಕದ ವಿಧಾನಸೌಧ ವಿಶೇಷ ಆಕರ್ಷಣೆಯಾಗಿದೆ. ವಿಧಾನಸೌಧ ನಿರ್ಮಾಣಗೊಂಡು 6 ದಶಕಗಳು ಕಳೆದಿವೆ.
1951ರಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. 1956ರಲ್ಲಿ ಕಟ್ಟಡ ಪೂರ್ಣಗೊಂಡಿತ್ತು. ವಿಧಾನಸೌಧ ಉದ್ಘಾಟನೆಗೊಂಡಿದ್ದು ಯಾವಾಗ? ಎಂಬ ಬಗ್ಗೆ ಅಧಿಕೃತ ದಿನಾಂಕದ ಮಾಹಿತಿ ಇಲ್ಲ.
1956-57ರಲ್ಲಿ ಉದ್ಘಾಟನೆಗೊಂಡಿರಬಹುದು. ಕರ್ನಾಟಕ ಸರ್ಕಾರ ವಿಧಾನಸೌಧದ ವಜ್ರ ವಹೋತ್ಸವನ್ನು ಆಚರಣೆ ಮಾಡುತ್ತಿದ್ದು, ಇದಕ್ಕಾಗಿ ವಿಶೇಷ ಜಂಟಿ ಅಧಿವೇಶನವನ್ನು ಆಯೋಜಿಸಿದೆ. ವಿಧಾನಸೌಧದ ನಿರ್ಮಾಣ ಕುರಿತ ಸಾಕ್ಷ್ಯಚಿತ್ರವನ್ನು ತಯಾರು ಮಾಡಲಾಗುತ್ತಿದೆ.