ಐತಿಹಾಸಿಕ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್
Recommended Video
ಬೆಂಗಳೂರು, ಅಕ್ಟೋಬರ್ 25: ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟಿಪ್ಪು ಸುಲ್ತಾನ್ ರನ್ನು ಸ್ಮರಿಸಿದರು.
ಜಂಟಿ ಅಧಿವೇಶನದಲ್ಲಿ ರಾಜ್ಯದ ಇತಿಹಾಸದ ನೆನಪು
ವಿಧಾನಸೌಧ ವಜ್ರ ಮಹೋತ್ಸವ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, "ಬ್ರಿಟೀಷರ ವಿರುದ್ಧ ಹೊರಾಡಿ ಟಿಪ್ಪು ಸುಲ್ತಾನ್ ಐತಿಹಾಸಿಕ ಮರಣವನ್ನಪ್ಪಿದ್ದಾರೆ. ಯುದ್ಧದಲ್ಲಿ ಮೈಸೂರು ರಾಕೆಟ್ ಗಳನ್ನು ಬಳಸಿದ ಪ್ರವರ್ತಕರು ಅವರು," ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಹೆಸರನ್ನು ಭಾಷಣದಲ್ಲಿ ರಾಮನಾಥ್ ಕೋವಿಂದ್ ಉಲ್ಲೇಖಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸಂಭ್ರಮಿಸಿದರು. ಈ ಸಂದರ್ಭ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದರು.
ಇದು ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳೇ ಸಿದ್ದಪಡಿಸಿಕೊಟ್ಟ ಭಾಷಣ ಎಂಬ ಆರೋಪ ಕೇಳಿ ಬಂದಿದೆ. ಆದರೆ ಭಾಷಣ ಸಿದ್ಧಪಡಿಸಿದ್ದು ನಾವಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಸಂಬಂಧ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ನಡುವೆ ಕೆಸರೆರೆಚಾಟ ನಡೆಯುತ್ತಿದೆ. ಈ ಸಂದರ್ಭದಲ್ಲೇ ರಾಷ್ಟ್ರಪತಿ ಈ ಹೇಳಿಕೆ ನೀಡಿದ್ದು ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ.