ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಎಸ್ಟಿ ನಾಯಕರಿಗೆ ಬುಲಾವ್
ಬೆಂಗಳೂರು,ಜೂ. 23: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಸುಮುದಾಯದ ದ್ರೌಪದಿ ಮುರ್ಮು ಕಣಕ್ಕೆ ಇಳಿಯಲಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಸ್ಟಿ ಸಮುದಾಯದ ನಾಯಕರೊಂದಿಗೆ ದೆಹಲಿಗೆ ತೆರಳಿದ್ದಾರೆ.
ಕೇಂದ್ರ ವರಿಷ್ಠರ ಕರೆ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಚಿವ ಬಿ. ಶ್ರೀರಾಮುಲು, ಶಾಸಕ ರಾಜುಗೌಡ ಅವರೊಂದಿಗೆ ದೆಹಲಿಗೆ ತೆರಳಿದ್ದಾರೆ. ಎಸ್ಟಿ ಸಮುದಾಯಕ್ಕೆ ಸೇರಿದ ರಾಜುಗೌಡ ಮತ್ತು ಬಿ. ರಾಮುಲು ಅವರು ರಾಷ್ಟ್ರಪತಿ ಅಭ್ಯರ್ಥಿ ದ್ರೌಪತಿ ಮುರ್ಮು ಅವರಿಗೆ ಸೂಚಕರಾಗಿ ಸಹಿ ಹಾಕಲಿದ್ದಾರೆ. ವಿವಿಧ ರಾಜ್ಯಗಳ ಬಿಜೆಪಿಯ ಎಸ್ ಟಿ ಸಮುದಾಯದ ಶಾಸಕರು, ಮಂತ್ರಿಗಳನ್ನು ದೆಹಲಿ ಬಿಜೆಪಿ ವರಿಷ್ಠರು ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಸ್ ಟಿ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ ಬಿ. ಶ್ರೀರಾಮುಲು ಹಾಗೂ ರಾಜುಗೌಡ ಅವರನ್ನು ಕರೆದುಕೊಂಡು ಬರುವಂತೆ ಬೊಮ್ಮಾಯಿಗೆ ದೆಹಲಿ ನಾಯಕರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಎಸ್ಟ ಸಿ ಸಮುದಾಯದ ನಾಯಕರೊಂದಿಗೆ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಒಡಿಶಾ ಮೂಲದ ಬುಡಕಟ್ಟು ಸಮುದಾಯದ ದ್ರೌಪತಿ ಮುರ್ಮು ಅವರನ್ನು ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇ ದೇಶದಲ್ಲಿಯೇ ಚರ್ಚೆಗೆ ಗ್ರಾಸವಾಗಿದೆ. ಇದರ ಜತೆಗೆ ದೇಶದಲ್ಲಿರುವ ಬಿಜೆಪಿಯ ಎಸ್ ಟಿ ಸಮುದಾಯದ ಎಲ್ಲಾ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಬಿಜೆಪಿ ವರಿಷ್ಠರು ಮಾತುಕತೆ ನಡೆಸುತ್ತಿದ್ದಾರೆ. ದ್ರೌಪತಿ ಮುರ್ಮು ಅವರಿಗೆ ಸೂಚಕರಾಗಿ ಸೂಚಿಸುವ ಜತೆಗೆ ಗೆಲುವಿನ ಬಗ್ಗೆಯೂ ಮಹತ್ವದ ಮಾತುಕತೆ ನಡೆಸಲು ಶ್ರೀರಾಮುಲು ಹಾಗೂ ರಾಜುಗೌಡ ಅವರನ್ನು ರಾಜ್ಯದಿಂದ ಕರೆಸಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಮಧ್ಯಾಹ್ನ ನಾಲ್ಕು ಗಂಟೆ ವೇಳೆಗೆ ದೆಹಲಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಅವರ ಮನೆಗೆ ಭೇಟಿ ನೀಡಿದ ಸಿಎಂ ರಾಷ್ಟ್ರಪತಿ ಅಭ್ಯರ್ಥಿಗೆ ಸೂಚಕರಾಗಿ ಸಹಿ ಹಾಕಿದ್ದಾರೆ. ಇದೇ ವೇಳೆ ಸಚಿವ ಶ್ರಿರಾಮುಲು ಮತ್ತು ಶಾಸಕ ರಾಜೂಗೌಡ ಕೂಡ ಸಹ ಸಹಿ ಹಾಕಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಂಪುಟದ ವಿಸ್ತರಣೆ ಕನಸು ಕನಸೇ:
ಬೊಮ್ಮಾಯಿ ದೆಹಲಿ ಪ್ರಯಾಣ ಬೆಳೆಸಿದ ಕೂಡಲೇ ರಾಜ್ಯದಲ್ಲಿ ಸಂಪುಟ ವಿಸ್ತರಣೆ ವಿಚಾರ ಮುನ್ನೆಲೆಗೆ ಬರುತ್ತಿತ್ತು. ಹತ್ತು ಸಲ ಬೊಮ್ಮಾಯಿ ದೆಹಲಿ ಭೇಟಿ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಅದರ ಪ್ರಸ್ತಾಪವೇ ಇಲ್ಲದಂತಾಗಿದೆ. ರಾಷ್ಟ್ರಪತಿ ಚುನಾವಣೆ ಬಳಿಕ ರಾಜ್ಯ ಸಂಪುಟದಲ್ಲಿ ಬದಲಾವಣೆ ತಂದರೂ ಅಚ್ಚರಿ ಪಡಬೇಕಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಎರಡು ದಿನಗಳ ಭೇಟಿ ಯಶಸ್ವಿಯಾಗಿದೆ. ಯಾವುದೇ ಕುಂದುಕೊರತೆ, ವಿವಾದ ರಹಿತವಾಗಿ ನಿಭಾಯಿಸಿದ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಇದೀಗ ವರಿಷ್ಠರ ಭೇಟಿ ಮಾಡಿ ರಾಜ್ಯ ಆಡಳಿತ ಯಂತ್ರದ ಬಗ್ಗೆ ಸಮಗ್ರ ವಿವರಗಳನ್ನು ಹೈಕಮಾಂಡ್ ಗೆ ನೀಡಲಿದ್ದಾರೆ.