ಮತ್ತೆ ಮೋದಿಯನ್ನು ಹೊಗಳಿದ ಜಿಟಿ ದೇವೇಗೌಡ: ದಾಲ್ ಮೇ ಕಾಲಾ ಹೇ?
ಕಾಂಗ್ರೆಸ್ಸಿನ ಎರಡು ವಿಕೆಟ್ ಪತನಗೊಂಡ ನಂತರ, ಗಲ್ಲಿಗಲ್ಲಿಗೊಂದು ಸುದ್ದಿ ಹರಿದಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಮುಖ್ಯಮಂತ್ರಿಯಾಗಿ ಅಮೆರಿಕಾಗೆ ಹೋದ ಕುಮಾರಸ್ವಾಮಿ, ಬರುವಾಗ ಮಾಜೀ ಆಗಿರುತ್ತಾರೆ ಎನ್ನುವ ಮಟ್ಟಿಗೆ.
ಒಂದು ಕಡೆ, ಮುಖ್ಯಮಂತ್ರಿಯಾದಿಯಾಗಿ ಸಮ್ಮಿಶ್ರ ಸರಕಾರದ ಮುಖಂಡರು, ಸದ್ಯದ ರಾಜಕೀಯ ಬೆಳವಣಿಗೆಗಳಿಗೆ ಬಿಜೆಪಿಯನ್ನು ದೂರುತ್ತಿದ್ದರೆ, ಸಮ್ಮಿಶ್ರ ಸರಕಾರದ ಪ್ರಭಾವೀ ಸಚಿವ ಜಿ ಟಿ ದೇವೇಗೌಡ, ಬಿಜೆಪಿ ಪರ ಹೇಳಿಕೆ ನೀಡಿರುವುದು ಭಾರೀ ಆಶ್ಚರ್ಯವನ್ನು ಹುಟ್ಟುಹಾಕಿದೆ.
ಮೋದಿ, ಅಮಿತ್ ಶಾ ಪರ ಮಾತಾಡಿದ ಸಚಿವ ಜಿ.ಟಿ. ದೇವೇಗೌಡ
ಜಿಟಿಡಿ, ಪ್ರಧಾನಿ ಮೋದಿ ಪರ ಹೇಳಿಕೆ ನೀಡುತ್ತಿರುವುದು ಇದೇನು ಹೊಸದಲ್ಲ. ಈ ಹಿಂದೆ ಕೂಡಾ, ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮೋದಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ರಿವರ್ಸ್ ಆಪರೇಷನ್ ಮಾಡ್ತೀವಿ, ಹುಷಾರ್: ಬಿಜೆಪಿಗೆ ಎಚ್ಚರಿಕೆ
ಸಮ್ಮಿಶ್ರ ಸರಕಾರದ ಭವಿಷ್ಯದ ಕುರಿತು ದಿನಕ್ಕೊಂದು ರಗಳೆ ಸದ್ಯ ಏಳುತ್ತಿರುವುದರಿಂದ, ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಲ್ಲಿ, ಯಾರು ಬಿಜೆಪಿ, ಪಿಎಂ ಮೋದಿ, ಅಮಿತ್ ಶಾ ಬಗ್ಗೆ ಮಾತನಾಡಿದರೂ, ಅದಕ್ಕೆ ಇನ್ನೊಂದು ಅರ್ಥ ಸೃಷ್ಟಿಯಾಗುತ್ತಿದೆ. ಈಗ, ಜಿ ಟಿ ದೇವೇಗೌಡ, ಬಿಜೆಪಿ ಪರವಾಗಿ ಬ್ಯಾಟ್ ಬೀಸಿರುವುದರಿಂದ, ಅವರನ್ನೂ ಈಗ ಅನುಮಾನದಿಂದ ನೋಡುವಂತಾಗಿದೆ..
ನಮಗೂ ರಿವರ್ಸ್ ಆಪರೇಷನ್ ಮಾಡುವುದಕ್ಕೆ ಬರುತ್ತದೆ
ನ್ಯೂಜೆರ್ಸಿಯಲ್ಲಿರುವ ಮುಖ್ಯಮಂತ್ರಿಗಳು ಬಿಜೆಪಿಯದ್ದು 'ನಿರಂತರ ಹಗಲು ಕನಸು' ಎಂದು ಟ್ವೀಟ್ ಮಾಡಿದ್ದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಮಗೂ ರಿವರ್ಸ್ ಆಪರೇಷನ್ ಮಾಡುವುದಕ್ಕೆ ಬರುತ್ತದೆ. ಕಾಂಗ್ರೆಸ್ ಶಾಸಕರನ್ನು ಭಯಗೊಳಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಮಗೂ ಶಕ್ತಿ ಸಾಮರ್ಥ್ಯವಿದೆ, ಆದರೆ ಅದನ್ನು ಈ ವರೆಗೆ ಪ್ರಯತ್ನಿಸಿಲ್ಲ, ಇದೇ ರೀತಿ ಮುಂದುವರಿದರೆ ನಾವೂ ಅದಕ್ಕೆ (ರಿವರ್ಸ್ ಆಪರೇಷನ್) ಕೈಹಾಕಬೇಕಾಗುತ್ತದೆ ಎಂದು ದಿನೇಶ್ ಗುಂಡೂರಾವ್, ಬಿಜೆಪಿಗೆ ಎಚ್ಚರಿಕೆಯನ್ನು ನೀಡಿದ್ದರು.
ಬಿಜೆಪಿಯವರ ಮೇಲೆ ಯಾರೂ ಕೆಸರೆರೆಚೋ ಹಾಗಿಲ್ಲ, ಜಿಟಿಡಿ
ಮೈಸೂರು ನಗರ ವ್ಯಾಪ್ತಿಯ ಬಿಜೆಪಿ ಶಾಸಕರುಗಳ ಜೊತೆ ಅಭಿವೃದ್ದಿ ಕಾರ್ಯಗಳ ಪರಿಶೀಲನೆ ನಡೆಸಿದ ಸಚಿವ ಜಿ ಟಿ ದೇವೇಗೌಡ, ಮೋದಿ, ಅಮಿತ್ ಶಾ ಯಾರ ರಾಜೀನಾಮೆಯನ್ನು ಕೊಡಿಸೋಕೆ ಹೋಗಿಲ್ಲ. ಅವರು ಎದುರಾಳಿ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ. ಬಿಜೆಪಿಯವರ ಮೇಲೆ ಯಾರೂ ಕೆಸರೆರೆಚೋ ಹಾಗಿಲ್ಲ. ಮೋದಿ ಹಾಗೂ ಅಮಿತ್ ಶಾ ಬಜೆಟ್ ಹಾಗೂ ಅಧಿವೇಶನದ ಕಡೆ ಗಮನಹರಿಸಿದ್ದಾರೆ. ಕಾಶ್ಮೀರ ಸಮಸ್ಯೆ, ಅಮೆರಿಕ, ಚೀನಾ ಜೊತೆ ಮೋದಿ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಅವರು ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ ಎನ್ನುವ ಹೇಳಿಕೆಯನ್ನು ಜಿ ಟಿ ದೇವೇಗೌಡ ನೀಡಿದ್ದರು.
ಜಿ ಟಿ ದೇವೇಗೌಡರ ಹೇಳಿಕೆ ಈಗ ಹಲವು ಚರ್ಚೆಗೆ ನಾಂದಿ
ಜಿ ಟಿ ದೇವೇಗೌಡರ ಹೇಳಿಕೆ ಈಗ ಹಲವು ಚರ್ಚೆಗೆ ನಾಂದಿ ಹಾಡಿದೆ. ಜೆಡಿಎಸ್ - ಕಾಂಗ್ರೆಸ್ ಈಗಿನ ರಾಜಕೀಯ ವಿದ್ಯಮಾನಕ್ಕೆ ಬಿಜೆಪಿಯನ್ನು ದೂರುತ್ತಿದ್ದರೆ, ತಮ್ಮದೇ ಸರಕಾರದ ಸಚಿವರು ಬಿಜೆಪಿ ಪರ ಮಾತನಾಡಿರುವುದು ಮುಜುಗರದ ಜೊತೆಗೆ ಸಂಶಯವನ್ನೂ ಉಂಟು ಮಾಡುತ್ತಿದೆ. ಯಾಕೆಂದರೆ, ಈ ಹಿಂದೆ ಕೂಡಾ, ಜಿಟಿಡಿ, ಮೋದಿ ಕಾರ್ಯಶೈಲಿಯನ್ನು ಹೊಗಳಿದ್ದರು.
ಮೋದಿಯಂತೆ ಹೆತ್ತವರನ್ನು ಗೌರವಿಸಿ ನಮಿಸಿದರೆ ಶಿಕ್ಷಣ, ಸಂಸ್ಕಾರವೂ ಮೈಗೂಡುತ್ತದೆ
ಪ್ರಧಾನಿ ಮೋದಿ ಅವರು ದೇಶ ಸೇವೆಗಾಗಿ ತಮ್ಮನೇ ಸಮರ್ಪಿಸಿಕೊಂಡಿದ್ದಾರೆ. ಅವರಿಗೆ ಸ್ವಂತ ಆಸಕ್ತಿಗಳಿಲ್ಲ. ಯಾವಾಗಲೂ ದೇಶದ ಬಗ್ಗೆ ಮಾತನಾಡುತ್ತಾರೆ. ಈ ಕಾರಣಕ್ಕಾಗಿಯೇ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ತಂದೆ ತಾಯಿಗೆ ಗೌರವ ನೀಡಬೇಕು. ಮೋದಿ ಅವರು ತಮ್ಮ ತಾಯಿಗೆ ನಮಸ್ಕರಿಸುವುದನ್ನು ಮಾಧ್ಯಮಗಳಲ್ಲಿ ತೋರಿಸುತ್ತಾರೆ. ಅವರ ನಡತೆಯಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ವಿನಯತೆ ಇದೆ. ಮೋದಿ ಅವರಂತೆಯೇ ಹೆತ್ತವರನ್ನು ಗೌರವಿಸಿ ನಮಿಸಿದರೆ ಶಿಕ್ಷಣದ ಜತೆ ಸಂಸ್ಕಾರವೂ ಮೈಗೂಡುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಜಿ ಟಿ ದೇವೇಗೌಡ ಹೇಳಿದ್ದರು.
ಜಿ ಟಿ ದೇವೇಗೌಡರ ಹೇಳಿಕೆಯಿಂದಾಗಿ ಸ್ವಾಭಾವಿಕವಾಗಿ ಅವರತ್ತ ಅನುಮಾನದ ಹುತ್ತ
ಕೆಲವು ದಿನಗಳ ಕೆಳಗೆ, ಜಿ ಟಿ ದೇವೇಗೌಡ, ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಸಚಿವರೇ ಖುದ್ದು ಸ್ಪಷ್ಟನೆಯನ್ನು ನೀಡಿ, ನಾನು ಹಿಂದೆ ಐದು ವರ್ಷ ಬಿಜೆಪಿಯಲ್ಲಿದ್ದೆ. ಆ ಪಕ್ಷದ ಮುಖಂಡರು ಹೇಗೆ ಎನ್ನುವುದು ನನಗೆ ಗೊತ್ತಿದೆ. ನನಗೆ ಎಲ್ಲಾ ಪಕ್ಷದಲ್ಲಿ ಸ್ನೇಹಿತರಿದ್ದಾರೆಂದು ಹೇಳಿದ್ದರು. ಆದರೆ, ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಜಿ ಟಿ ದೇವೇಗೌಡರ ಹೇಳಿಕೆಯಿಂದಾಗಿ ಸ್ವಾಭಾವಿಕವಾಗಿ ಅವರತ್ತ ಅನುಮಾನದ ಹುತ್ತ ನೆಟ್ಟಿದೆ.