ಗಣರಾಜ್ಯೋತ್ಸವಕ್ಕೆ ರಾಜ್ಯದಲ್ಲಿ ಸಕಲ ಸಿದ್ಧತೆ: ಬೆ.9ಕ್ಕೆ ರಾಜ್ಯಪಾಲರಿಂದ ಧ್ವಜಾರೋಣ
ಬೆಂಗಳೂರು, ಜ.26: ರಾಜ್ಯದಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರದ ಎಂ.ಜಿ. ರಸ್ತೆಯಲ್ಲಿರುವ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಬೆಳಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತರಿರಲಿದ್ದಾರೆ.
ಕೋವಿಡ್ 3ನೇ ಅಲೆಯ ಆತಂಕದ ಕಾರಣದಿಂದಾಗಿ ಬಿಬಿಎಂಪಿ ಈ ಬಾರಿ ಸರಳ ಗಣರಾಜ್ಯೋತ್ಸವ ಹಮ್ಮಿಕೊಂಡಿದೆ. ಕೇವಲ 200 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕಾರ್ಯಕ್ರಮದಲ್ಲಿ ಪೊಲ್ಗೊಳ್ಳುವ ಎಲ್ಲರಿಗೂ ಎರಡು ಡೋಸ್ ಕೋವಿಡ್ ಲಸಿಕೆ ಆಗಿರಬೇಕು ಎಂದು ಸೂಚಿಸಲಾಗಿದೆ.
ರಾಜ್ಯಪಾಲರ ಧ್ವಜಾರೋಹಣ ನೆರವೇರಿಸಿದ ನಂತರ ರಾಜ್ಯದ ಜನತೆಗೆ ಸಂದೇಶ ನೀಡಲಿದ್ದಾರೆ. ಬಳಿಕ ಗೌರವ ರಕ್ಷೆ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮದ ಆಹ್ವಾನಿತರಿಗಾಗಿ ಬಿಳಿ ಹಾಗೂ ಗುಲಾಬಿ ಬಣ್ಣದ ಪಾಸ್ಗಳನ್ನು ವಿತರಣೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಹೊಸ ಸಂಪ್ರದಾಯವೊಂದನ್ನು ಅಳವಡಿಸಿಕೊಳ್ಳಲಾಗಿದೆ. ಧ್ವಜಾರೋಹಣದ ಬಳಿಕ ಆಂಧ್ರಪ್ರದೇಶ ತುಕಡಿ ವಿಶೇಷ ಕವಾಯತ್ನಲ್ಲಿ ಪಾಲ್ಗೊಳ್ಳಲಿದೆ.
ಗಣರಾಜ್ಯೋತ್ಸವಕ್ಕೆ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆ ಅಹಿತಕರ ಘಟನೆ ಸಂಭವಿಸುವ ಮುನ್ಸೂಚನೆ ಇರುವುದರಿಂದ ಮಾಣಿಕ್ಷಾ ಪರೇಡ್ ಮೈದಾನದ ಸುತ್ತ ವಿಶೇಷ ಭದ್ರತೆ ಒದಗಿಸಲಾಗಿದೆ . ಮಾಣೆಕ್ ಷಾ ಪರೇಡ್ ಮೈದಾನದ ಸುತ್ತ ಕಳೆದ 15 ದಿನಗಳಿಂದ ವಿಶೇಷ ನಿಗಾ ವಹಿಸಲಾಗಿದೆ.
ಭದ್ರತೆಗೆ 1400 ಸಿಬ್ಬಂದಿ:
ಪೊಲೀಸ್ ಇಲಾಖೆ ಗಣರಾಜ್ಯೋತ್ಸವ ಭದ್ರತೆಗಾಗಿ 1400 ಸಿಬ್ಬಂದಿಯನ್ನು ನಿಯೋಜಿಸಿದೆ. ಸಿವಿಲ್ ಮತ್ತು ಸಂಚಾರ ಸೇರಿ 11 ಡಿಸಿಪಿ, 20 ಎಸಿಪಿ, 60 ಪೊಲೀಸ್ ಇನ್ಸ್ಪೆಕ್ಟರ್ಗಳು, 125 ಸಬ್ ಇನ್ಸ್ಪೆಕ್ಟರ್ಗಳು ಸೇರಿದ್ದಾರೆ. ತುರ್ತು ಸಂದರ್ಭಕ್ಕಾಗಿ ಅಗ್ನಿಶಾಮಕ ವಾಹನ, ಆ್ಯಂಬ್ಯುಲೆನ್ಸ್, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೈದಾನದ ಸುತ್ತ 62 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸಂಚಾರ ನಿರ್ಬಂಧ:
ಗಣರಾಜ್ಯೋತ್ಸವದಿಂದಾಗಿ ಬುಧವಾರ ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯ ಬಿಆರ್ವಿ ಜಂಕ್ಷನ್ನಿಂದ ಕಾಮರಾಜ ಜಂಕ್ಷನ್ ರಸ್ತೆವರೆಗೆ ಎರಡೂ ಮಾರ್ಗದ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಜಿಲ್ಲಾ ಉಸ್ತುವಾರಿಗಳಿಂದ ಧ್ವಜಾರೋಹಣ
ಇನ್ನು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಇತ್ತೀಚೆಗೆ ಎಲ್ಲ ಜಿಲ್ಲೆಗಳಿಗೂ ಉಸ್ತುವಾರಿಗಳ ನೇಮಕ ಮಾಡಲಾಗಿದ್ದು, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಎಲ್ಲ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದಾರೆ.