ಶನಿವಾರ 15 ನೇ ವಿಧಾನಸಭೆ ಅಸ್ತಿತ್ವದ ಜತೆಗೆ ಬಹುಮತ ಸಾಬೀತು!
ಬೆಂಗಳೂರು, ಮೇ 18: ಮೇ 19ರಂದು ಶನಿವಾರ 15 ನೇ ವಿಧಾನಸಭೆ ಅಧಿವೇಶನ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ಮತಯಾಚನೆ ಕುರಿತು ಮಾಹಿತಿ ನೀಡಿದರು. ರಾಜ್ಯಪಾಲರು 14ನೇ ವಿಧಾನಸಭೆಯನ್ನು ಮೇ 17ರಂದು ವಿಸರ್ಜಿಸಿದ್ದಾರೆ. 15 ನೇ ವಿಧಾನಸಭೆ ಮೇ 19ರಂದು ಬೆಳಗ್ಗೆ 11 ಕ್ಕೆ ಸಮಾವೇಶಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಹಂಗಾಮಿ ಸ್ಪೀಕರ್ ಆಯ್ಕೆ ಬಿಜೆಪಿಯ ಕೆ.ಜಿ. ಬೋಪಯ್ಯ ನೇಮಕ
ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಇಂದು ಅಧಿಕೃತ ಮಾಹಿತಿ ರವಾನೆಯಾಗಲಿದೆ.180 ಮತ್ತು 188 ಅನುಚ್ಛೇದ ಪ್ರಕಾರ ಕೆ.ಜಿ. ಬೋಪಯ್ಯ ಅವರನ್ನು ರಾಜ್ಯಪಾಲರು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಮೂರು ಅಂಶಗಳಿವೆ. ಮೊದಲು ಹಂಗಾಮಿ ಸ್ಪೀಕರ್ ಅನ್ವಯ ಸದನ ನಡೆಯಬೇಕು. ಎರಡನೆಯದಾಗಿ ಬೆಳಗ್ಗೆ 11ರಿಂದ 4 ಗಂಟೆಯ ಒಳಗೆ ಹೊಸ ಶಾಸಕರು ಪ್ರಮಾಣ ಸ್ವೀಕರಿಸಬೇಕು ಮೂರನೆಯದಾಗಿ ಸಂಜೆ 4ಕ್ಕೆ ಬಹುಮತ ಸಾಬೀತುಪಡಿಸಬೇಕು ಎಂದು ಮಾಹಿತಿ ನೀಡಿದರು.
ಎಲ್ಲ ಶಾಸಕರಿಗೆ ಇಂದೇ ನೋಟಿಸ್ ನೀಡಿ ಬಹುಮತ ಸಾಬೀತು ಪಡಿಸಲು ಹಾಜರಾಗಲು ಸೂಚನೆ ನೀಡಲಾಗಿದೆ. ಎಲ್ಲ ಶಾಸಕರು ಸರ್ಟಿಫಿಕೇಟ್ ಜತೆ ಬರಬೇಕು ಹಾಗೂ ನಮ್ಮ ನೋಟಿಸ್ ತರಬೇಕು.ಶಾಸಕರು ಪ್ರಮಾಣ ವಚನ ಪಡೆದ ನಂತರ ಆಯಾ ಪಕ್ಷಗಳು ವ್ಹಿಪ್ ನೀಡಬಹುದು.
ಪಕ್ಷದ ಅಧ್ಯಕ್ಷರು ನೀಡಬಹುದು, ಸದನ ಆರಂಭವಾದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಸದಸ್ಯರನ್ನುದ್ದೇಶಿಸಿ ಬಹುಮತಕ್ಕೆ ಪ್ರಸ್ತಾವ ಮಂಡಿಸುವರು. ಮತಕ್ಕೆ ಹಾಕಿದಾಗ ಪ್ರತಿಯೊಂದು ಸಾಲಿಗೆ ಹೋಗಿ ಹೇಳಿಕೆ ದಾಖಲಿಸುತ್ತೇವೆಪ್ರಸ್ತಾವದ ಪರ ಮತ್ತು ವಿರೋಧ ಇರುವವರನ್ನು ಪ್ರತ್ಯೇಕ ನಿಲ್ಲಿಸಿ ದಾಖಲು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.