ಬಿಜಾಪುರ: ಮುಸ್ಲಿಂ ಗರ್ಭಿಣಿಗೆ ಬೆಂಕಿ ಹಚ್ಚಿ ಕೊಂದ ಪಾಪಿಗಳು
ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಗರ್ಭಿಣಿಯಾಗಿದ್ದ ಮುಸ್ಲಿಂ ಮಹಿಳೆಯನ್ನು ಬೆಂಕಿ ಹಚ್ಚಿ ಆಕೆಯ ಮನೆಯವರೇ ಕೊಂದಿದ್ದಾರೆ.
ಬಿಜಾಪುರ, ಜೂನ್ 5: ದಲಿತನೊಬ್ಬನನ್ನು ಮದುವೆಯಾಗಿದ್ದಳೆಂಬ ಕಾರಣಕ್ಕೆ ಮುಸ್ಲಿಂ ಯುವತಿಯೊಬ್ಬಳ ಕುಟುಂಬದ ಸದಸ್ಯರು ಆಕೆಯನ್ನು ಜೀವಂತವಾಗಿ ದಹಿಸಿದ ಘಟನೆ ಜಿಲ್ಲೆಯ ಗುಂಡಕನಾಳ ಹಳ್ಳಿಯಲ್ಲಿ ಶನಿವಾರ (ಜೂನ್ 3) ರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದ ನಿವಾಸಿಗಳಾದ ಬಾನು ಬೇಗಂ (21) ಹಾಗೂ ಸಾಯಬಣ್ಣ ಶರಣಪ್ಪ (24) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ಬಗ್ಗೆ ತಮ್ಮ ಮನೆಯಲ್ಲಿ ಹೇಳಿರಲಿಲ್ಲ.
ಆದರೆ, ಈ ವಿಚಾರ ಇದೇ ವರ್ಷ ಜನವರಿಯಲ್ಲಿ ಗೊತ್ತಾಗಿ ದೊಡ್ಡ ರಂಪಾಟವೇ ನಡೆಯಿತು. ಮದುವೆಗೆ ಎರಡೂ ಮನೆಯವರು ಒಪ್ಪಲಿಲ್ಲ. ಜನವರಿ 23ರಂದು ಎರಡೂ ಕುಟುಂಬಗಳ ಮಧ್ಯೆ ಗಲಾಟೆಯಾಗಿ, ಸಾಯಬಣ್ಣ ಹಾಗೂ ಬಾನುವನ್ನು ಚೆನ್ನಾಗಿ ಹೊಡೆಯಲಾಗಿತ್ತು.
ಅಲ್ಲದೆ, ಅಂದೇ ಠಾಣೆಗೆ ಹೋಗಿ ಸಾಯಬಣ್ಣ ವಿರುದ್ಧ ಪೊಕ್ಸೋ ಕಾಯ್ದೆಯಡಿ ದೂರು ದಾಖಲಿಸಬೇಕು. ನಮ್ಮ ಮನೆ ಹುಡುಗಿ (ಬಾನು) ಇನ್ನೂ ಅಪ್ರಾಪ್ತೆ ಎಂದು ತಿಳಿಸಿ ದೂರನ್ನೂ ದಾಖಲಿಸಿದ್ದರು.
ಇದಾದ ನಂತರ, 24ರಂದು ಬಾನು ಹಾಗೂ ಸಾಯಬಣ್ಣ ಇಬ್ಬರೂ ಓಡಿಹೋಗಿಬಿಟ್ಟರು. ಅವರೆಲ್ಲಿದ್ದಾರೆಂದು ಯಾರಿಗೂ ತಿಳಿಯಲಿಲ್ಲ. ಗೋವಾಕ್ಕೆ ತೆರಳಿದ್ದ ಈ ಜೋಡಿ, ಅಲ್ಲಿ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆಯಾದರು. ಆನಂತರ, ಪುಟ್ಟದೊಂದು ಮನೆ ಮಾಡಿಕೊಂಡು ಸಂಸಾರ ಹೂಡಿತು ಈ ಜೋಡಿ.
ಇದಾಗಿ, ಮೂರ್ನಾಲ್ಕು ತಿಂಗಳಲ್ಲಿ ಬಾನು ಗರ್ಭವತಿಯಾಗಿದ್ದಾಳೆ. ಆಗ, ಆ ದಂಪತಿಯಲ್ಲಿ ಮೂಡಿದ ಆಲೋಚನೆಯೇನೆಂದರೆ, ಗರ್ಭಿಣಿಯಾಗಿರುವುದು ಗೊತ್ತಾದರೆ ಬೇರೆ ವಿಧಿಯಿಲ್ಲದೆ ತಮ್ಮ ಮದುವೆಯನ್ನು ಎರಡೂ ಮನೆಯವರು ಒಪ್ಪುತ್ತಾರೆ ಎಂದುಕೊಂಡ ಆ ಜೋಡಿ ಮರಳಿ ತಮ್ಮ ಹಳ್ಳಿಗೆ ಬಂದಿದೆ.
ಆದರೆ, ಅವರಂದುಕೊಂಡಂತೆ ಎರಡೂ ಮನೆಯವರು ಅವರಿಬ್ಬರ ಮದುವೆಯನ್ನು ಒಪ್ಪಿಕೊಂಡಿಲ್ಲ. ಬದಲಾಗಿ, ಸಾಯಬಣ್ಣನನ್ನು ಬಿಟ್ಟು ಬರುವಂತೆ ಬಾನು ಮನೆಯವರು ತಾಕೀತು ಮಾಡಿದ್ದಾರೆ. ಆದರೆ, ಇದಕ್ಕೆ ಇಬ್ಬರೂ ಒಪ್ಪಿಲ್ಲ. ಆಗ ಭಾರೀ ದೊಡ್ಡ ಗಲಾಟೆಯೇ ನಡೆದಿದೆ. ಸಂಜೆವರೆಗೂ ಗಲಾಟೆಗಳು, ಸಣ್ಣಗೆ ಹೊಡೆದಾಟಗಳಾಗಿವೆ. ಸಂಜೆಯಾಗುವಷ್ಟರಲ್ಲಿ ಮತ್ತೆ ತಾರಕಕ್ಕೆ ಹೋದ ಈ ಗದ್ದಲದಿಂದಾಗಿ ಸಾಯಬಣ್ಣನನ್ನು ಬಾನು ಮನೆಯವರು ಚೆನ್ನಾಗಿ ಚಚ್ಚಿದ್ದಾರೆ. ಕಲ್ಲಿನಿಂದ ಹೊಡೆದಿದ್ದಾರೆ. ಮೈಯ್ಯೆಲ್ಲಾ ಗಾಯಗಳಾದ ಸಾಯಬಣ್ಣ ರಕ್ಷಣೆಗಾಗಿ ದೂರದ ಪೊಲೀಸ್ ಠಾಣೆಯತ್ತ ಓಡಿದ್ದಾನೆ.
ಇತ್ತ, ಬಾನುವನ್ನು ಎಳೆದಾಡಿ, ಬಡಿದಾಡಿದ ಆ ಜನ, ಬಾನುವಿಗೆ ಬೆಂಕಿ ಹಚ್ಚಿದ್ದಾರೆ. ಸಾಯಬಣ್ಣ ಠಾಣೆ ತಲುಪಿ 10 ನಿಮಿಷದಲ್ಲೇ ಪೊಲೀಸರನ್ನು ಕರೆದು ಕೊಂಡು ಬಂದರೂ, ಅಷ್ಟರಲ್ಲಾಗಲೇ ಬಹುತೇಕ ಬೆಂದು ಹೋಗಿದ್ದ ಬಾನು ಸ್ಥಳದಲ್ಲೇ ಅಸುನೀಗಿದ್ದಾಳೆ. ಆಕೆಯನ್ನು ಬೆಂಕಿಯ ಉರಿಯಿಂದ ಪಾರು ಮಾಡಲು ಯತ್ನಿಸಿದ ಸಾಯಬಣ್ಣನಿಗೂ ಗಾಯಗಳಾಗಿವೆ ಎಂದು ತಾಳಿಕೋಟೆ ಡಿವೈಎಸ್ ಪಿ ಪಿ.ಕೆ. ಪಾಟೀಲ್ ಹೇಳಿದ್ದಾರೆ.