ಪೂರ್ವ ಮುಂಗಾರು ಮಳೆ ಕೊರತೆಯ ವಿವರ, ರೈತರಿಗೆ ಸಲಹೆ
ಧಾರವಾಡ, ಮೇ 21 : ಮುಂಗಾರು ಮಳೆಯ ಮುನ್ಸೂಚನೆ, ಅತಿಯಾದ ತಾಪಮಾನ ಮತ್ತು ಮಳೆಯ ಅತಿಯಾದ ಅಭಾವ ರೈತರಲ್ಲಿ ಚಿಂತೆ ಉಂಟು ಮಾಡಿದೆ. ಅದರಲ್ಲೂ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರು ಕಂಗಾಲಾಗಿದ್ದಾರೆ.
ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹಿಂಗಾರು ಮಳೆಯ ವೈಫಲ್ಯದಿಂದ ಅತಿಯಾದ ನಷ್ಟವನ್ನು ರೈತರು ಅನುಭವಿಸಿದ್ದಾರೆ. ರೈತರಿಗೆ ಇತ್ತೀಚಿನ ದಿನಗಳಲ್ಲಿ ಬಂದಿರುವ ಮುಂಗಾರು ಮಳೆಯ ಮುನ್ಸೂಚನೆಯೂ ಆದಾದಾಯಕವಾಗಿ ಕಾಣುತ್ತಿಲ್ಲ.
ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ? ಮಾಹಿತಿ
'ಭಾರತದ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಮುಂಗಾರು ಮಳೆಯು ಕರ್ನಾಟಕವನ್ನು ವಾಡಿಕೆಗಿಂತ ಕನಿಷ್ಠ 6 ರಿಂದ 8 ದಿನಗಳಷ್ಟು ತಡವಾಗಿ ಬರಲಿದೆ. ಇದರ ಜೊತೆ ಆರಂಭದ ಮುಂಗಾರು ಮಳೆಗಳು ದುರ್ಬಲವಾಗಿರುವ ಸಾಧ್ಯತೆಯೂ ಹೆಚ್ಚಿದೆ' ಎಂದು ಧಾರವಾಡ ಕೃಷಿ ವಿಶ್ವದ್ಯಾಲಯದ ಕೃಷಿ ಹವಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಚ್.ಪಾಟೀಲ್ ಹೇಳಿದರು.
ಪೂರ್ವ ಮುಂಗಾರು ಮಳೆ ಕ್ಷೀಣ : ರೈತರಿಗೆ ಕೆಲವು ಸಲಹೆಗಳು
ಈ ಬಾರಿ ಮುಂಗಾರು ಮಳೆಯೂ ಕೈ ಕೊಡುವ ಮನ್ಸೂಚನೆ ಸಿಕ್ಕಿದೆ. ಆದ್ದರಿಂದ, ಕರ್ನಾಟಕ ಸರ್ಕಾರ ಮೋಡ ಬಿತ್ತನೆ ಮಾಡಲು ಮುಂದಾಗಿದೆ. ಜೂನ್ ಕೊನೆಯ ವಾರದಲ್ಲಿ ಮೋಡ ಬಿತ್ತನೆ ಮಾಡಲು ಈಗಾಗಲೇ ಸರ್ಕಾರ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.
ಮಳೆ ಮತ್ತು ಬೆಳಗಳ ಬಗ್ಗೆ ಮಾಹಿತಿ
ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಉತ್ತರ ಕರ್ನಾಟಕ ಹವಾಮಾನ ಮುನ್ಸೂಚನಾ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಆರ್.ಎಚ್.ಪಾಟೀಲ್ ಅವರು 2019ರ ಪೂರ್ವ ಮುಂಗಾರು ಋತುವಿನ ಮಳೆಯ ಹಂಚಿಕೆಯ ಕುರಿತು ಮಾಹಿತಿ ನೀಡಿದರು.
ವಾಡಿಕೆಯಂತೆ ದಕ್ಷಿಣ ಒಳನಾಡು ಭಾಗದಲ್ಲಿ 106.5 ಮಿ.ಮೀ, ಉತ್ತರ ಒಳನಾಡಿನಲ್ಲಿ 59.7 ಮಿ.ಮೀ. ಮಲೆನಾಡು ಭಾಗದಲ್ಲಿ 108.2 ಮಿ.ಮೀ ಮತ್ತು ಕರಾವಳಿಯಲ್ಲಿ 118.5 ಮಿ.ಮೀ.ಮಳೆಯಾಗಬೇಕಿತ್ತು.
ವಾಡಿಕೆ ಮಳೆಯ ಕೊರತೆ
ಆದರೆ ಪೂರ್ವ ಮುಂಗಾರು ಮಳೆ ಬೀಳಬೇಕಾದ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ದಕ್ಷಿಣ ಒಳನಾಡಿಲ್ಲಿ 80.3 ಮಿ.ಮೀ, ಉತ್ತರ ಒಳನಾಡಿನಲ್ಲಿ 25.5 ಮಿ.ಮೀ, ಮಲೆನಾಡಿನಲ್ಲಿ 31.4 ಮಿ.ಮೀ, ಕರಾವಳಿ ಭಾಗದಲ್ಲಿ 52.4 ಮಿ.ಮೀ. ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.61.6ರಷ್ಟು ಮಳೆ ಕೊರತೆ ಉಂಟಾಗಿದೆ.
ಮುಂಗಾರು ಮಳೆ ಮುನ್ಸೂಚನೆ
ಹವಾಮಾನ ಇಲಾಖೆಯ ಪ್ರಕಾರ 2019ರ ವಾರ್ಷಿಕ ಮಳೆಯ ಪ್ರಮಾಣವು ಸಾಮಾನ್ಯಕ್ಕೆ ಹತ್ತಿರ ಶೇ 93 ರಿಂದ 96ರಷ್ಟು ಇರುತ್ತದೆ. ಆದರೆ, ಬೇಸಿಗೆಯಲ್ಲಿ ಕನಿಷ್ಠ ಮಳೆಯಾಗಿದ್ದರಿಂದ ಬಹುಪಾಲು ರೈತರು ಮಣ್ಣಿನ ತೇವಾಂಶದ ಕೊರತೆಯಿಂದ ಅದರಲ್ಲೂ ಪ್ರಮುಖವಾಗಿ ಒಣಬೇಸಾಯ ರೈತರು ಕೃಷಿ ಭೂಮಿಯನ್ನು ಮಾಗಿ ಉಳಿಮೆ ಮಾಡದೆ ಹಾಗೆ ಬಿಟ್ಟಿದ್ದಾರೆ. ಮುಂಗಾರು ಮಳೆಯ ವಿಳಂಬ ಹಾಗೂ ದುರ್ಬಲ ಮುನ್ಸೂಚನೆಯು ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ಋತುವಿಗೆ ತಕ್ಕ ಬೆಳೆ
ರೈತರು ಮುಂಗಾರು ಋತುವಿಗೆ ಕೃಷಿ ಭೂಮಿ ತಯಾರಿಕೆಗೆ ಹಾಗೂ ಪರ್ಯಾಯ ಬೆಳೆ ಯೋಜನೆಗಳನ್ನು ತಯಾರು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ತೇವಾಂಶ ರಕ್ಷಣೆಯನ್ನು ಹೆಚ್ಚಿಸಲು ಚೌಕು ಮಡಿಗಳನ್ನು ಮಾಡುವದು ಅತೀ ಅವಶ್ಯಕ. ಇದರಿಂದ ಬಿದ್ದ ಮಳೆಯು ರೈತರ ಕೃಷಿ ಭೂಮಿಯಲ್ಲಿಯೇ ಶೇಖರಣೆಯಾಗಿ, ನಿಧಾನವಾಗಿ ಇಂಗಿ ಮಣ್ಣಿನ ತೇವಾಂಶವನ್ನು ಹೆಚ್ಚಿಸುತ್ತದೆ.
ಬದುಗಳನ್ನು ನಿರ್ಮಿಸಿ
ರೈತರು ಉಳಿದ ಒಂದೆರಡು ವಾರದಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ಹಾಕಿಕೊಳ್ಳುವುದು ಮತ್ತು ಕೊಟ್ಟಿಗೆ ಗೊಬ್ಬರವನ್ನು ಹಾಕಿ ತೆಳುವಾಗಿ ಉಳುಮೆ ಮಾಡಿ ಬಿದ್ದ ಮಳೆಯನ್ನು ಹೆಚ್ಚಿಗೆ ಇಂಗಿಸುವಲ್ಲಿ ಅನುಕೂಲ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಲಾಗಿದೆ.