ಬೆಂಗಳೂರು ಬೆಂಬಿಡದ ಮಾನ್ಸೂನ್ ಪೂರ್ವ ಮಳೆ!
ಬೆಂಗಳೂರು, ಮೇ 18: ಅರಬ್ಬಿ ಸಮುದ್ರದಲ್ಲಿ ನೈಋತ್ಯ ಭಾಗದಲ್ಲಿ ಗಲ್ಫ್ ಆಫ್ ಏಡನ್ನಲ್ಲಿ ನಿರ್ಮಾಣವಾಗಿರುವ ಸಾಗರ್ ಚಂಡ ಮಾರುತದಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮೇ 21ರವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಈಗಾಗಲೇ ಶುಕ್ರವಾರ 5ಗಂಟೆಯಿಂದ ಬೆಂಗಳೂರಿನ ಹಲವೆಡೆ ಬಿರುಗಾಳಿ ಸಹಿತ ಮಳೆ ಅರಂಭವಾಗಿದೆ. ಮಲ್ಲೇಶ್ವರ, ವಿಧಾನಸೌಧ, ಕೆಂಗೇರಿ, ಮೈಸೂರು ರಸ್ತೆ, ವಿಜಯನಗರ, ಯಲಹಂಕ, ರೇಸ್ಕೋರ್ಸ್ ರಸ್ತೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.
ಮೇಲ್ಮೈ ಸುಳಿಗಾಳಿ: ರಾಜ್ಯದಲ್ಲಿ ಇಂದು ಮಳೆ ಸಾಧ್ಯತೆ
ಚಂಡ ಮಾರುತದ ಪ್ರಭಾವದಿಂದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಕೆಲವೆಡೆ ಮೇ 22ರವರೆಗೂ ಮಳೆಯಾಗಲಿದೆ.
ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು, ಬಿರುಸಾದ ಗಾಳಿ ಸಹಿತ ಮಳೆಯಬ್ಬರದ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ಕೆಲ ಪ್ರದೇಶಗಳಲ್ಲಷ್ಟೇ ತುಂತುರು ಮಳೆ ಮುನ್ಸೂಚನೆ ಇದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಗರಿಷ್ಠ 30.8ಡಿಗ್ರಿ ಸೆಲ್ಸಿಯಸ್ ಕನಿಷ್ಠ 22.3ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ ಗರಿಷ್ಠ 32.3ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.5ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ 30.8ಡಿಗ್ರಿ ಸೆಲ್ಸಿಯಸ್ ಕನಿಷ್ಠ 22ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.