ಸಿಎಂ ಯಡಿಯೂರಪ್ಪ ಎದುರು ಮಹತ್ವದ ಬೇಡಿಕೆ ಇಟ್ಟ ಅನರ್ಹ ಶಾಸಕ!
ಬೆಂಗಳೂರು, ನ. 10: ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದಾಗ ಅದು ಆಕಸ್ಮಿಕ ಗೆಲವು ಬಿಜೆಪಿಯಲ್ಲಿನ ಕೆಲವರು ಮಾತನಾಡಿಕೊಂಡಿದ್ದರು. ಜೆಡಿಎಸ್ ಭದ್ರಕೋಟೆಗೆ ನುಗ್ಗಿ ಅಲ್ಲಿ ಕಮಲ ಅರಳಿಸುವುದು ಸುಲಭದ ಮಾತಾಗಿರಲಿಲ್ಲ. ಆದರೂ ಅದೊಂದು ಆಕಸ್ಮಿಕ ಗೆಲವು ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಹೀಗಾಗಿಯೇ ಶಿರಾ ಉಪಚುನಾವಣೆಯ ಉಸ್ತುವಾರಿಯನ್ನು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಕೊಟ್ಟಾಗ ಕಾಂಗ್ರೆಸ್, ಜೆಡಿಎಸ್ ನಾಯಕರು, ಇದು ಕೆಆರ್ ಪೇಟೆ ಅಲ್ಲ. ಇದು ಶಿರಾ ಕ್ಷೇತ್ರ. ಇಲ್ಲಿ ವಿಜಯೇಂದ್ರ ಆಟ ನಡೆಯಲ್ಲ ಎಂದೇ ಪ್ರಚಾರದಲ್ಲಿ ಹೇಳುತ್ತಿದ್ದರು.
ಆದರೆ ಇದೀಗ ಶಿರಾ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗೆಲ್ಲಿಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ಬಿಜೆಪಿಗೆ ಮರಭೂಮಿಯಂತಾಗಿದ್ದ ಶಿರಾ ಕ್ಷೇತ್ರದ ಗೆಲವು ನಮಗೆ ಮಹತ್ವದ್ದು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಬಿಜೆಪಿಗೆ ವಿಜಯೇಂದ್ರ ಅವರಲ್ಲಿನ ಸಂಘಟನಾ ಶಕ್ತಿ ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿಯೇ ಬಹಿರಂಗವಾಗಿತ್ತು. ಹೀಗಾಗಿ ಇದೀಗ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಸಿಎಂ ಯಡಿಯೂರಪ್ಪ ಅವರ ಬಳಿಕ ಮಹತ್ವದ ಬೇಡಿಕೆಯನ್ನಿಟ್ಟಿದ್ದಾರೆ.
ಜೊತೆಗೆ ಶಿರಾ ಕ್ಷೇತ್ರದ ಗೆಲುವಿನ ಮೂಲಕ ಅಪ್ಪ ಯಡಿಯೂರಪ್ಪ ಅವರಿಗೆ ಪುತ್ರ ವಿಜಯೇಂದ್ರ ಅವರು ಬಹುದೊಡ್ಡ ಗಿಫ್ಟ್ ಕೊಟ್ಟಿದ್ದಾರೆ, ಏನದು?
ವಿಜಯೇಂದ್ರ ನಮ್ಮ ಬಾಹುಬಲಿ
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಸಾಧನೆ ಬಣ್ಣಿಸಿರುವ ಸಮಾಜಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ವಿಜಯೇಂದ್ರ ಅವರನ್ನು ಕೊಂಡಾಡಿದ್ದಾರೆ. ವಿಜಯೇಂದ್ರ ಅವರು ಹೋದಲ್ಲೆಲ್ಲ ಬಿಜೆಪಿ ಗೆಲ್ಲುತ್ತದೆ. ಶಿರಾದಲ್ಲಿಯೂ ಅದೇ ಸಾಧನೆಯನ್ನು ಮುಂದುವರೆಸುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ವಿಜಯೇಂದ್ರ ಬಿಜೆಪಿಯ ಬಾಹುಬಲಿ ಎಂದು ಶ್ರೀರಾಮುಲು ಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಯಡಿಯೂರಪ್ಪ ಅವರ ಎದುರು ಮಹತ್ವದ ಬೇಡಿಕೆ ಇಟ್ಟಿದ್ದಾರೆ.
ವಿಜಯೇಂದ್ರಗೆ ಉಸ್ತುವಾರಿ ಕೊಡಿ
ಉಪ ಚುನಾವಣೆ ಮತಎಣಿಕೆ ನೋಡಿರುವ ಮಸ್ಕಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಆರ್.ಆರ್. ನಗರದಲ್ಲಿ ಭಾರಿ ಅಂತರದಿಂದ ನಾವು ಗೆದ್ದಿದ್ದೇವೆ. ಶಿರಾದಲ್ಲೂ ಗೆಲುವು ಸಾಧಿಸಿದ್ದೇವೆ. ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದೆಯೂ ಎಲ್ಲಾ ಚುನಾವಣೆಗಳನ್ನು ನಾವು ಗೆಲ್ಲುತ್ತೇವೆ. ಹೀಗಾಗಿ ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ನೇತೃತ್ವವನ್ನೂ ಬಿ.ವೈ. ವಿಜೇಯಂದ್ರ ಅವರಿಗೆ ಕೊಡುವಂತೆ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇವೆ ಎಂದಿದ್ದಾರೆ.
ವಿಜಯೇಂದ್ರ ಮಾಸ್ಟರ್ ಮೈಂಡ್
ಉಪ ಚುನಾವಣೆಯಲ್ಲಿ ಗೆಲವು ತಂದು ಕೊಡುತ್ತಿರುವ ವಿಜಯೇಂದ್ರ ಅವರಿಗೆ ಉಸ್ತುವಾರಿ ಕೊಡಿ ಎಂಬ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಮಸ್ಕಿ ಉಪಚುನಾವಣೆ ಉಸ್ತುವಾರಿಯನ್ನೂ ವಿಜಯೇಂದ್ರ ಅವರಿಗೆ ಕೊಡಿ ಎಂದು ಪ್ರತಾಪಗೌಡ ಹೇಳಿಕೆ ನೀಡಿದ್ದಾರೆ. ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತರು ಇದ್ದಾರೆ. ಹೀಗಾಗಿ ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಿದರೆ ಉತ್ತಮ ಎಂದು ಸಿಎಂ ಬಳಿ ಕೇಳಿ ಕೊಂಡಿದ್ದೇವೆ ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಹೇಳಿದ್ದಾರೆ.
Recommended Video
ಶಿರಾ ಗೆಲವು ಯಡಿಯೂರಪ್ಪ ಕುರ್ಚಿ ಸೇಫ್?
ಬಿಜೆಪಿಗೆ ಶಿರಾ ಕ್ಷೇತ್ರವನ್ನು ಗೆಲ್ಲಿಸಿಕೊಡುವ ಮೂಲಕ ತಮ್ಮ ತಂದೆಯ ಕುರ್ಚಿಯನ್ನೂ ವಿಜಯೇಂದ್ರ ಅವರು ಬಲಪಡಿಸಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಇಳಿಸುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಹೇಳಿಕೆ ಕೊಟ್ಟಿದ್ದರು.
ಜೊತೆಗೆ ಬಿಜೆಪಿ ಹಿರಿಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸುತ್ತಾರೆ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದರು.
ಇದೀಗ ಶಿರಾ ಉಪ ಚುನಾವಣೆಯಲ್ಲಿನ ಸಾಧನೆಯಿಂದ ಸ್ವಪಕ್ಷ ಹಾಗೂ ವಿರೋಧ ಪಕ್ಷಗಳಲ್ಲಿನ ವಿರೋಧಿಗಳ ಬಾಯನ್ನು ವಿಜಯೇಂದ್ರ ಅವರು ಉಪ ಚುನಾವಣೆ ಫಲಿತಾಂಶದ ಮೂಲಕ ಮುಚ್ಚಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರೆಯುವುದು ಅಬಾಧಿತ ಎನ್ನಲಾಗುತ್ತಿದೆ.