ವಿಧಾನ ಪರಿಷತ್ ಉಪ ಸಭಾಪತಿ ನಿಧನಕ್ಕೆ ಸಭಾಪತಿ ತೀವ್ರ ಸಂತಾಪ!
ಬೆಂಗಳೂರು, ಡಿ. 29: ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ನಿಧನಕ್ಕೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಪ ಸಭಾಪತಿ ಧರ್ಮೇಗೌಡ ಅವರು ಅಕಾಲಿಕವಾಗಿ ಇಂದು ನಮ್ಮನ್ನಗಲಿರುವ ವಿಷಯ ತಿಳಿದು ನನಗೆ ದಿಗ್ಬ್ರಮೆ ಆಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಂಬನಿ ಮಿಡಿದಿದ್ದಾರೆ.
ಅವರು ಸಹಕಾರಿ ಕ್ಷೇತ್ರದಲ್ಲಿ ಗ್ರಾಮೀಣ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಜಕೀಯ ಜೀವನದಲ್ಲಿ ಮಂಡಲ ಪಂಚಾಯತಿ ಪ್ರಧಾನ ಹುದ್ದೆಯಿಂದ ಇತ್ತೀಚಿನ ವಿಧಾನ ಪರಿಷತ್ತಿನ ಉಪ ಸಭಾಪತಿಯವರೆಗೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಸಂತಾಪ ಸಂದೇಶದಲ್ಲಿ ಸಭಾಪತಿಗಳು ತಿಳಿಸಿದ್ದಾರೆ.
ಧರ್ಮೇಗೌಡರ ಅಂತಿಮ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿಗಳು
ಎಸ್.ಎಲ್. ಧರ್ಮೇಗೌಡ ಅವರ ಅಕಾಲಿಕ ಮರಣದಿಂದ ವಿಧಾನ ಪರಿಷತ್ ಸೇರಿದಂತೆ ರಾಜ್ಯದ ಜನತೆಗೆ ತುಂಬಲಾರದ ನಷ್ಟವಾಗಿದೆ. ಅಗಲಿದ ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಮತ್ತು ಅವರ ಕುಟುಂಬ ವರ್ಗಕ್ಕೆ, ಅಭಿಮಾನಿ ಮತ್ತು ಸ್ನೇಹಿತರ ಬಳಗಕ್ಕೆ ಈ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ಡಿಸೆಂಬರ್ 15 ರಂದು ವಿಧಾನ ಪರಿಷತ್ ವಿಶೇಷ ಅಧಿವೇಶನ ಕರೆದಿತ್ತು. ಅವತ್ತು ನಡೆದ ಘಟನೆಯಿಂದಲೇ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಂದು ಎಲ್ಲ ಸದಸ್ಯರ ನಡುವಳಿಕೆಯಿಂದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೂ ಸಾಕಷ್ಟು ಮುಜುಗುರವಾಗಿತ್ತು.