ಅಧಿಕಾರ ಹೊಸ್ತಿಲಲ್ಲಿ ಆಮ್ ಆದ್ಮಿಯಲ್ಲಿ ಅದಾಗಲೇ ಬಿರುಕು
ಈ ಮಧ್ಯೆ, ಆಮ್ ಆದ್ಮಿ ಪಕ್ಷದ ಮುಖಂಡ, ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತು ಮಾಜಿ ಐಪಿಎಸ್ ಕಿರಣ್ ಬೇಡಿ ಅವರು ಆ ಪಕ್ಷದ ಅಧಿಕಾರ ಲಾಲಸೆಯನ್ನು ಝಾಡಿಸಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರಕಾರ ರಚನೆಗೆ ಕಾಂಗ್ರೆಸ್ ಬಾಹ್ಯ ಬೆಂಬಲ ಖಾತ್ರಿಪಡಿಸಿಕೊಂಡಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ AAP ಪಕ್ಷವೇನೂ ಸರಕಾರ ರಚಿಸುತ್ತದೆ. ಆದರೆ, ಕಾಂಗ್ರೆಸ್ ಬೆಂಬಲದ ಬಗ್ಗೆ ಗ್ಯಾರಂಟಿ ಇಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೂಕ್ಷ್ಮವಾಗಿ ಹೇಳಿದ್ದಾರೆ.
ಜನಸಂಗ್ರಾಮ ಪರಿಷತ್ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಚುನಾವಣಾ ಸುಧಾರಣೆಗಳು ಮತ್ತು ರಾಜಕಾರಣ ಜನತಂತ್ರೀಕರಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಈ ರಾಜಕೀಯ ಸೂಕ್ಷ್ಮತೆಯನ್ನು ವಿವರಿಸಿದ್ದಾರೆ.
'ಸರಳ ಬಹುಮತ ಇರುವ ಪಕ್ಷ ಸರಕಾರ ರಚಿಸಬೇಕು. ಆದರೆ ಇಲ್ಲಿ, 28 ಸ್ಥಾನ ಹೊಂದಿರುವ ಆಮ್ ಆದ್ಮಿ ಪಕ್ಷವು ಸರಕಾರ ರಚಿಸುತ್ತಿದ್ದು, 34 ಸ್ಥಾನ ಹೊಂದಿರುವ ಬಿಜೆಪಿಗೆ ಅಧಿಕಾರ ಇಲ್ಲದಂತಾಗಿದೆ. ಇದು ನಿಜವಾದ ಪ್ರಜಾಪ್ರಭುತ್ವ ಅಲ್ಲ. ರಾಜಕೀಯ ಪಕ್ಷಗಳು ಗಳಿಸುವ ಮತ ಪ್ರಮಾಣಕ್ಕೆ ಅನುಗುಣವಾಗಿ ಅಧಿಕಾರ ಸಿಗುವಂತಿರಬೇಕು.
ಅಂದರೆ ಸ್ವಿಟ್ಜರ್ಲ್ಯಾಂಡಿನಲ್ಲಿರುವ ವ್ಯವಸ್ಥೆಯಂತೆ ಪಕ್ಷಗಳು ಪಡೆದ ಮತಗಳ ಅನುಪಾತ ಆಧಾರಿತ ಅಧಿಕಾರ ವ್ಯವಸ್ಥೆ ಇರಬೇಕು. ಆಗಷ್ಟೆ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ' ಎಂದು ಪ್ರಶಾಂತ್ ಭೂಷಣ್ ತಮ್ಮ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೆ ನೋಡಿದರೆ, ದೇಶದ ಜನತೆ ಬರೀ ಪ್ರಜಾಪ್ರಭತ್ವದ ನೆರಳಿನಲ್ಲಿ ಬದುಕುತ್ತಿದ್ದಾರೆಯೇ ಹೊರತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಲ್ಲ. ಪ್ರಜಾಪ್ರಭುತ್ವ ಎಂದರೆ, ಜನರ ಅಗತ್ಯತೆಗಳು ಜನರಿಂದ ನಿರ್ಧಾರಗೊಳ್ಳಬೇಕು. ಆದರೆ, ಇಲ್ಲಿ ಜನರ ಬೇಕು, ಬೇಡಗಳನ್ನು ಜನಪ್ರತಿನಿಧಿಗಳು ನಿರ್ಧರಿಸುತ್ತಿದ್ದಾರೆ.
ಒಮ್ಮೆ ಆಯ್ಕೆಯಾದರೆ 5 ವರ್ಷಗಳವರೆಗೂ ಜನರನ್ನು ಕೇಳದೆಯೇ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಇದೊಂದು ರೀತಿ ದುಷ್ಟ ವ್ಯವಸ್ಥೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಬಲ ಜನ ಲೋಕಪಾಲ್ ಮಸೂದೆ ಯಥಾವತ್ ಜಾರಿ ಮಾಡಿದ್ದರೆ, ಕೇಂದ್ರ ಯುಪಿಎ ಸರಕಾರದ ಬಹುತೇಕ ಸಚಿವರು ಜೈಲು ಸೇರುತ್ತಿದ್ದರು. ಆದರೆ ಜಾಣ ಸರಕಾರ ಅಹಿತಕರ ಅಂಶಗಳನ್ನೆಲ್ಲಾ ತೆಗೆದು ದುರ್ಬಲ ಕಾಯ್ದೆ ರೂಪಿಸುತ್ತಿದೆ ಎಂದು ಪ್ರಶಾಂತ್ ಭೂಷಣ್ ವಿಷಾದಿಸಿದರು.
ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ, ಸಮಾಜ ಪರಿವರ್ತನಾ ಸಂಸ್ಥೆ ಅಧ್ಯಕ್ಷ ಎಸ್ ಆರ್ ಹಿರೇಮಠ, ಮಾಜಿ ಶಾಸಕ ಎಟಿ ರಾಮಸ್ವಾಮಿ, ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಉಪಾಧ್ಯ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಸಭೆಯಲ್ಲಿ ಹಾಜರಿದ್ದರು.