ಆಕಾಶವಾಣಿಯಲ್ಲಿ ಪ್ರಾದೇಶಿಕ ಕಾರ್ಯಕ್ರಮಕ್ಕೆ ಕಡಿವಾಣ ಇಲ್ಲ: ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 16: ''ಆಕಾಶವಾಣಿಯಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳ ಪ್ರಸಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ, ಹೊಸ ನೀತಿ ತುಳು, ಕೊಂಕಣಿ ಭಾಷಾ ಕಾರ್ಯಕ್ರಮಕ್ಕೆ ಪ್ರಸಾರ ಭಾರತಿ ಸಂಸ್ಥೆ ಕುತ್ತು ತರಲಿದೆ'' ಎಂದು ಮಂಗಳೂರು ಆಕಾಶವಾಣಿ ಕೇಂದ್ರದ ಸಿಬ್ಬಂದಿಗಳು ಮಾಡಿರುವ ಆರೋಪವನ್ನು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ತಳ್ಳಿ ಹಾಕಿದ್ದಾರೆ.
''ಆಕಾಶವಾಣಿ ಪ್ರಾದೇಶಿಕತೆಗೆ ಕುತ್ತು ಉಂಟಾಗುತ್ತಿದೆ. 1976ರಿಂದ ಮಂಗಳೂರು ಆಕಾಶವಾಣಿ ಕಾರ್ಯನಿರ್ವಹಿಸುತ್ತಿದ್ದು, ಯುವವಾಣಿ, ಕಿಸಾನ್ ವಾಣಿ, ಬಾಲವೃಂದ, ಯಕ್ಷಗಾನ ಮತ್ತಿತರ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ, ಪ್ರಸಾರ ಭಾರತಿ ಹೊಸ ನೀತಿ ಜಾರಿಗೊಳಿಸಲು ಮುಂದಾಗಿದ್ದು, ಇದರಿಂದ ಪ್ರಾದೇಶಿಕ ಕಾರ್ಯಕ್ರಮ ಪ್ರಸಾರಕ್ಕೆ ಕಡಿವಾಣ ಬೀಳಲಿದೆ, ನಿರೂಪಕರ ಕೆಲಸಕ್ಕೂ ಆತಂಕ ಎದುರಾಗಿದೆ'' ಎಂದು ಆಕಾಶವಾಣಿ ಕೇಂದ್ರದ ಸಿಬ್ಬಂದಿ ಸುದ್ದಿಗೋಷ್ಠಿ ನಡೆಸಿ ಕಳವಳ ವ್ಯಕ್ತಪಡಿಸಿದ್ದರು.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಇಒ ಶಶಿ ಶೇಖರ್, ಈ ವರದಿ ಸತ್ಯಕ್ಕೆ ದೂರವಾಗಿದ್ದು, ಇಂಥ ಯಾವುದೇ ಪ್ರಸ್ತಾವನೆ ಪ್ರಸಾರ ಭಾರತಿ ಮುಂದಿಲ್ಲ, ಈ ಬಗ್ಗೆ ಯಾವುದೇ ಚರ್ಚೆ, ತೀರ್ಮಾನವಾಗಿಲ್ಲ ಅಥವಾ ನಿರ್ದೇಶನ ನೀಡಿಲ್ಲ ಎಂದರು. ಸರ್ಕಾರಿ ಅನುದಾನದ ಸದುಪಯೋಗ ಹಾಗೂ ಉತ್ತಮ ಗುಣಮಟ್ಟದ ವಿಷಯ, ವಸ್ತು ವರದಿ ಪ್ರಸಾರದ ಬಗ್ಗೆ ಆಕಾಶವಾಣಿ ನಿರಂತರವಾಗಿ ತನ್ನ ಗಮನ ಕೇಂದ್ರಿಕೃತಗೊಳಿಸಲಾಗುತ್ತಿದೆ. ದುರುದ್ದೇಶಪೂರ್ವಕವಾಗಿ ಕೆಲ ಮಾಧ್ಯಮಗಳಲ್ಲಿ ತಪ್ಪು ವರದಿ ಪ್ರಕಟಿಸಿ, ಅನಗತ್ಯ ಆತಂಕ ಉಂಟು ಮಾಡಲಾಗಿದೆ. ಸ್ಥಳೀಯ ಭಾಷೆ, ಸೊಗಡು, ಪ್ರತಿಭೆಗಳಿಗೆ ಆಕಾಶವಾಣಿ ಸದಾ ಮನ್ನಣೆ ನೀಡಲಿದೆ ಎಂದಿದ್ದಾರೆ.
ಭಾಷಾ ವೈವಿಧ್ಯತೆಯಿಂದಲೇ ಆಕಾಶವಾಣಿ ಕಾರ್ಯಕ್ರಮಗಳು ಹೆಚ್ಚು ವ್ಯಾಪಿಸಲು ಸಾಧ್ಯವಾಗಿದ್ದು, ನೂರಾರು ಭಾಷೆ ಹಾಗೂ ನುಡಿಗಟ್ಟುಗಳನ್ನು ಬಳಸಿಕೊಂಡು ತನ್ನ ಜಾಲವನ್ನು ವಿಸ್ತರಿಸುತ್ತಾ ಬಂದಿದೆ ಎಂದರು.
ಭಾರತದಲ್ಲಿ ಸುಮಾರು 400ಕ್ಕೂ ಅಧಿಕ ಆಕಾಶವಾಣಿ ಕೇಂದ್ರಗಳಿವೆ. ದೇಶದ ಮೂಲೆ ಮೂಲೆಗಳಿಗೂ ಆಕಾಶವಾಣಿ ತಲುಪಿದೆ, ಖಾಸಗಿ ವಾಹಿನಿಗಳು ತಲುಪದ ಸ್ಥಳಗಳಲ್ಲೂ AIR ಬಿತ್ತರವಾಗುತ್ತಿವೆ. ತಂತ್ರಜ್ಞಾನ ಬೆಳೆದಂತೆ ಆಕಾಶವಾಣಿ ಕೂಡಾ ಆಧುನಿಕತೆಗೆ ಒಗ್ಗಿಕೊಂಡು ತನ್ನ ಕೇಂದ್ರ, ಪ್ರಸಾರ, ಜಾಲವನ್ನು ವಿಸ್ತರಿಸಿಕೊಂಡಿದೆ. ಉಪಗ್ರಹ ತಂತ್ರಜ್ಞಾನದ ಮೂಲಕ 40ಕ್ಕೂ ಅಧಿಕ AIR ರೇಡಿಯೋ ಸೇವೆಗಳನ್ನು ನೇರವಾಗಿ ಪಡೆದುಕೊಳ್ಳಬಹುದು.
ಡಿಡಿ ಫ್ರೀಡಿಶ್ ಡಿಟಿಎಚ್ ವೇದಿಕೆ ಮೂಲಕ ಭಾರತದೆಲ್ಲೆಡೆ ಇದು ಸಾಧ್ಯವಾಗಿದೆ. ಇದಲ್ಲದೆ ನ್ಯೂಸ್ಆನ್ಏರ್ ಅಪ್ಲಿಕೇಷನ್ ಬಳಸಿಕೊಂಡು 200ಕ್ಕೂ ಅಧಿಕ ರೇಡಿಯೋ ಲೈವ್ ಸ್ಟ್ರೀಮಿಂಗ್ ವಿಶ್ವದೆಲ್ಲೆಡೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಈ ಮುಂಚೆ ಒಂದು ಪ್ರದೇಶ ಅಥವಾ ನಗರಕ್ಕೆ ಸೀಮಿತವಾಗಿದ್ದ ಆಕಾಶವಾಣಿ ಕಾರ್ಯಕ್ರಮಗಳು ಇಂದು ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿವೆ. ಯುವಪ್ರತಿಭೆ, ಬಾಲಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳಸುವಲ್ಲಿ AIR ಎಂದೂ ಹಿಂದೆ ಬಿದ್ದಿಲ್ಲ, ಜೊತೆಗೆ ಯೂಟ್ಯೂಬ್ ಮೂಲಕ ಆನ್ ಡಿಮ್ಯಾಂಡ್ ಕಾರ್ಯಕ್ರಮಗಳನ್ನು ಯಾವಾಗ ಬೇಕಾದರೂ ಅಲಿಸುವ ವ್ಯವಸ್ಥೆಯೂ ಇಂದು ಸಾಧ್ಯವಾಗಿದೆ ಎಂದರು.
ಆಕಾಶವಾಣಿಯ ಕಾರ್ಯ ನಿರ್ವಹಣೆ ಪಾರದರ್ಶಕವಾಗಿದ್ದು, ಅನಗತ್ಯ ತಪ್ಪು ಮಾಹಿತಿ ವರದಿಯನ್ನು ಯಾರೂ ನಂಬಬಾರದು, ತಂತ್ರಜ್ಞಾನದ ಜೊತೆಜೊತೆಗೆ ಆಕಾಶವಾಣಿಯಲ್ಲಿ ಕೆಲವು ಬದಲಾವಣೆಗಳಾದರೂ ಪ್ರಾದೇಶಿಕ ಸಮಾನತೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ವಂಚನೆ ಎಂದಿಗೂ ಆಗುವುದಿಲ್ಲ, ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಹೇಳಿದರು.
Recommended Video
ಸಾರ್ವಜನಿಕ ವಲಯದ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲು ಐಟಿ ಅಪ್ಲಿಕೇಷನ್ ಬಳಸಿ ಕಾರ್ಯಕ್ರಮಗಳ ಡಿಜಿಟಲೀಕರಣ ಮಾಡಲಾಗಿದೆ, ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.