ನಿಖಿಲ್ ಹೆಗಲಿಗೆ ಯುವ ಘಟಕದ ಸಾರಥ್ಯ, ಪ್ರಜ್ವಲ್ ಹೇಳಿದ್ದೇನು?
ಬೆಂಗಳೂರು, ಜುಲೈ 04 : ಕರ್ನಾಟಕ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ನೇಮಕವಾದ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರಜ್ವಲ್ ರೇವಣ್ಣ ಅಭಿನಂದನೆ ಸಲ್ಲಿಸಿದರು. ಇಬ್ಬರೂ ಒಟ್ಟಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ದುಡಿಯುತ್ತೇವೆ ಎಂದು ಹೇಳಿದರು.
ನವದೆಹಲಿಯಲ್ಲಿ ಮಾತನಾಡಿದ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರು, 'ದಿಢೀರ್ ಬೆಳವಣಿಗೆಯಲ್ಲಿ ನಿಖಿಲ್ ಅವರನ್ನು ಯುವ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ' ಎಂದರು.
ನಿಖಿಲ್ ಕುಮಾರಸ್ವಾಮಿಗೆ ಸೋಲಿಗಿಂತಲೂ ತುಂಬಾ ನೋವು ಕೊಟ್ಟ ಸಂಗತಿ ಇದು
'ಶರಣಗೌಡ ಕಂದಕೂರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲು ಪಕ್ಷ ತೀರ್ಮಾನ ಕೈಗೊಂಡಿತ್ತು. ಆದರೆ, ಅವರು ಅಧ್ಯಕ್ಷರಾಗಲು ನಿರಾಕರಿಸಿದರು ಮತ್ತು ನಿಖಿಲ್ ಅವರನ್ನು ನೇಮಿಸುವಂತೆ ಮನವಿ ಮಾಡಿದ್ದರು' ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು.
ಜೆಡಿಎಸ್ ಶಾಸಕರಿಗೆ ಬಂಪರ್ ಉಡುಗೊರೆ ಕೊಡಲಿದ್ದಾರೆ ಕುಮಾರಸ್ವಾಮಿ!
'ಎಚ್.ಕೆ.ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರಾಗಿ, ಮಧು ಬಂಗಾರಪ್ಪ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡುವ ಬಗ್ಗೆ ಮಾಹಿತಿ ಇತ್ತು. ಆದರೆ, ನಿಖಿಲ್ ಕುಮಾರಸ್ವಾಮಿ ನೇಮಕದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ' ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ಗೆ ಹೊಸ ಅಧ್ಯಕ್ಷರ ನೇಮಕ : ಪಣ ತೊಟ್ಟಂತೆ ಮಾಡಿದ ದೇವೇಗೌಡ!
ಹಲವರು ಮನವಿ ಮಾಡಿದ್ದರು
'ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದಲ್ಲಿ ಜವಾಬ್ದಾರಿ ಕೊಡಿ ಎಂದು ಹಲವರು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಪಕ್ಷ ದಿಢೀರ್ ತೀರ್ಮಾನ ತೆಗೆದುಕೊಂಡಿದೆ. ನಿಖಿಲ್ ಕುಮಾರಸ್ವಾಮಿ ಅವರ ನೇಮಕದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ' ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ನಿಖಿಲ್ ಜೊತೆ ಕೈ ಜೋಡಿಸಿ ಕೆಲಸ ಮಾಡುವೆ
'ನಿಖಿಲ್ ಕುಮಾರಸ್ವಾಮಿ ಅವರ ನೇಮಕದ ಬಗ್ಗೆ ನನಗೆ ಬೇಸರ, ಅಸಮಾಧಾನವಿಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ನಿಖಿಲ್ ಜೊತೆಗೆ ನಾನು ಕೈ ಜೋಡಿಸಿ ಕೆಲಸ ಮಾಡುತ್ತೇನೆ' ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ನಿಖಿಲ್ ಕುಮಾರಸ್ವಾಮಿ ಹೇಳಿಕೆ
ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 'ಪಕ್ಷದ ನಾಯಕರು ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಪಕ್ಷ ಕಟ್ಟಲು ಅವರೇ ಸ್ಪೂರ್ತಿ' ಎಂದು ಹೇಳಿದರು.
ಜನರ ಪರವಾಗಿ ಕೆಲಸ ಮಾಡಬೇಕು
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, 'ಕುಟುಂಬ ರಾಜಕಾರಣ ಎಲ್ಲಿ ಇಲ್ಲ ಹೇಳಿ. ಎಲ್ಲಾ ಕಡೆ ಕುಟುಂಬ ರಾಜಕೀಯವಿದೆ. ಉತ್ತಮ ವಿಚಾರ ಇಟ್ಟುಕೊಂಡು ಜನರ ಪರವಾಗಿ ಕೆಲಸ ಮಾಡಬೇಕು. ಅಂತಹ ವ್ಯಕ್ತಿಗೆ ಎಲ್ಲರೂ ಬೆಂಬಲ ಕೊಡಬೇಕು, ಅವಕಾಶ ನೀಡಬೇಕು' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.