ಕೊಯ್ನಾ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಹರಿಸಿ: ಮಹರಾಷ್ಟ್ರಕ್ಕೆ ಕೋರೆ ಪತ್ರ
ಬೆಂಗಳೂರು, ಮೇ 03: ಕೊಯ್ನಾ ಅಣೆಕಟ್ಟೆಯಿಂದ ರಾಜ್ಯದ ಕೃಷ್ಣಾ ನದಿಗೆ ಟಿಎಂಸಿ ನೀರು ಹರಿಸಬೇಕೆಂದು ಮಹಾರಾಷ್ಟ್ರ ಮುಖ್ಯ ಮಂತ್ರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಮನವಿ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಜನರು ನೀರಿಗೆ ಪಡುತ್ತಿರುವ ಬವಣೆಯನ್ನು ಪತ್ರದ ಮೂಲಕ ವಿವರಿಸಿರುವ ಪ್ರಭಾಕರ ಕೋರೆ ಅವರು, ಉತ್ತರ ಕರ್ನಾಟಕವು ನಲವತ್ತು ವರ್ಷದಲ್ಲೇ ಕಾಣದಿರುವ ಬರ ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ಮಳೆಯ ಅಭಾವದಿಂದಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ಬರದಿಂದ ತೀವ್ರವಾಗಿ ತತ್ತರಿಸಿದ್ದು, ಜಾನುವಾರಿಗಳಿಗೆ ಕುಡಿಯುವ ನೀರಿಗೂ ಆಹಾಕಾರ ಎದ್ದಿದೆ ಎಂದು ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ಗೆ ಪತ್ರದಲ್ಲಿ ವಿವರಿಸಿದ್ದಾರೆ.
ಕೃಷ್ಣ ನದಿ ಪಾತ್ರದ ಜನರು ನೀರಿಗಾಗಿ ತೀವ್ರ ತಾಪತ್ರೆಯ ಪಡುತ್ತಿದ್ದು, ಈ ಹಿಂದೆ ಈ ರೀತಿಯ ಸಂದರ್ಭಗಳು ಬಂದಾಗ ಮಹಾರಾಷ್ಟ್ರವು ಕೋಯ್ನಾ ಡ್ಯಾಂ ನಿಂದ ನೀರು ಬಿಟ್ಟು ಸಹಾಯ ಮಾಡಿದೆ, ಅದನ್ನೇ ಈಗ ಮತ್ತೆ ಪುನಾರವರ್ತಿಸಬೇಕು ಎಂಬುದು ಪತ್ರದ ಒಕ್ಕಣೆ.
ಕೋಯ್ನಾ ಡ್ಯಾಂ ನಿಂದ ನಾಲ್ಕು ಟಿಎಂಸಿ ನೀರು ಕೃಷ್ಣಾ ನದಿಗೆ ಹರಿಸಿದರೆ ನಾಲ್ಕು ಜಿಲ್ಲೆಯ ನದಿ ಪಾತ್ರದ ಜನರಿಗೆ ಸಹಾಯವಾಗುತ್ತದೆ ಎಂದು ಪ್ರಭಾಕರ್ ಕೋರೆ ಮನವಿ ಮಾಡಿದ್ದಾರೆ. ಪ್ರಭಾಕರ್ ಕೋರೆ ಅವರು ಬರೆದಿರುವ ಪತ್ರಕ್ಕೆ ಕುಡಚಿ ಶಾಸಕ ಸೇರಿದಂತೆ ಹಲವು ಉತ್ತರ ಕರ್ನಾಟಕ ಭಾಗದ ಶಾಸಕರು ಸಹಿ ಹಾಕಿದ್ದಾರೆ.
ಇದೇ ವರ್ಷದ ಜನವರಿ ತಿಂಗಳಲ್ಲಿ ಪ್ರಭಾಕರ್ ಕೋರೆ ನೇತೃತ್ವದಲ್ಲಿ ಸಮಿತಿಯೊಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಕೋಯ್ನಾ ಡ್ಯಾಂ ನಿಂದ ಕೃಷ್ಣ ನದಿಗೆ ನೀರು ಹರಿಸುವಂತೆ ಮನವಿ ಸಲ್ಲಿಸಿತ್ತು.