ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ವಿಫಲ: ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ ಎಂದ ಹೈಕೋರ್ಟ್
ಬೆಂಗಳೂರು,ಜೂ.28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶದನಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಚೀಫ್ ಎಂಜಿನಿಯರ್ ಎಂ.ಲೋಕೇಶ್ ಹೈಕೋರ್ಟ್ ಮುಂದೆ ಹಾಜರಾದರು.
ಮೊನ್ನೆ ಮಂಗಳವಾರ ಹೈಕೋರ್ಟ್ ಚಾಟಿ ಬೀಸಿದ್ದ ಹಿನ್ನೆಲೆಯಲ್ಲಿ ಹಾಜರಾದ ಹಿರಿಯ ಅಧಿಕಾರಿಗಳು, ಪೈಥಾನ್ ಯಂತ್ರದ ಮೂಲಕ ಗುಂಡಿ ಮುಚ್ಚಲು ಕಾರ್ಯಾದೇಶ ನೀಡಿರುವ ಬಗ್ಗೆ ವಕೀಲರ ಮೂಲಕ ವಿವರ ನೀಡಿ ಛೀಮಾರಿ ಹಾಕಿಸಿಕೊಳ್ಳುವುದರಿಂದ ಪಾರಾದಾರು.
ಬಿಬಿಎಂಪಿ ಆಯುಕ್ತರ ಯಲಹಂಕ ರೌಂಡ್ಸ್, ಕಾಮಗಾರಿ ಪೂರ್ಣಗೊಳಿಸಲು ಗಡುವು
ಆದರೆ 2015ರಿಂದ ಬಾಕಿ ಇರುವ ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತ ಪಿಐಎಲ್ ವಿಚಾರಣೆ ನಡೆಸುತ್ತಿರುವ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ಆಯುಕ್ತರು ಮತ್ತು ಚೀಫ್ ಎಂಜಿನಿಯರ್ ಗೂ ಕ್ಲಾಸ್ ತೆಗೆದುಕೊಂಡಿತು.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸಿಜೆ, "ಮಿಸ್ಟರ್ ಕಮಿಷನರ್, ರಸ್ತೆ ಗುಂಡಿ ಸರಿಪಡಿಸಲು ಏನಾದರೂ ಕಷ್ಟಗಳಿವೆಯೇ ?ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು," ಎಂದರು.
ಅಲ್ಲದೆ, ಪ್ರಧಾನಿ ಮಾಡಿದ ಸರಿಪಡಿಸಿದ್ದ ರಸ್ತೆಗಳು ಹಾಳಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಿವೆ ಬಂದಿವೆಯೆಲ್ಲಾ ನಿಜವೇ ಎಂದು ಬಿಬಿಎಂಪಿ ಮುಖ್ಯ ಆಯುಕ್ತರನ್ನು ಪ್ರಶ್ನಿಸಿದರು.
ಪಾಲಿಕೆ ಪರ ವಕೀಲರು. ಪ್ರಧಾನಿ ಬಂದಾಗ ಬಳಸಿದ ರಸ್ತೆಗಳು ಹಾಳಾಗಿಲ್ಲ, ಒಳಚರಂಡಿ ಸಮಸ್ಯೆಯಿಂದ ಹಾಳಾದ ರಸ್ತೆಯನ್ನು ದುರಸ್ತಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
847 ಕಿಲೋಮೀಟರ್ ರಸ್ತೆ ಗುಂಡಿ:
ಇದೇ ವೇಳೇ ನ್ಯಾಯಾಲಯದ ನಿರ್ದೇಶದನಂತೆ ಬಿಬಿಎಂಪಿ ಮತ್ತು ಪೈಥಾನ್ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸುವ ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್ಟಿಎಸ್) ಸಂಸ್ಥೆ ಜಂಟಿಯಾಗಿ ನಡೆಸಿದ ಸರ್ವೆ ಪ್ರಕಾರ 847.56 ಕಿ.ಮೀ ರಸ್ತೆಗುಂಡಿ ಸರಿಪಡಿಸಬೇಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್ಟಿಎಸ್) ಸಂಸ್ಥೆಗೆ ಪೈಥಾನ್ ಯಂತ್ರ ಬಳಸಿ ನಗರದ 397 ಕಿಲೋಮೀಟರ್ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು
ಕಾರ್ಯಾದೇಶ ನೀಡಲಾಗಿದೆ. ಇನ್ನುಳಿದ 576 ಕಿ.ಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ.ಜು.15 ರಂದು ಟೆಂಡರ್ ಓಪನ್ ಮಾಡಲಾಗುವುದು ಎಂದು ವಿವರಿಸಿದರು.
ರಸ್ತೆ ಗುಂಡಿ ಮುಚ್ಚುವ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಸಲಹೆ ನೀಡಿದ ಸಿಜೆ, ರಸ್ತೆ ಸರಿಪಡಿಸುವವರೆಗೆ ಪಿಐಎಲ್ ಮುಕ್ತಾಯಗೊಳಿಸುವುದಿಲ್ಲ ಎಂದು ವಿಚಾರಣೆ ಜು.27 ಕ್ಕೆ ನಿಗದಿಪಡಿಸಿದ ಅಷ್ಟರಲ್ಲಿ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಆಗಿರುವ ಪ್ರಗತಿಯ ಕುರಿತು ವಿವರ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿತು.
1 ದಿನ ಗಡುವು: ಮಂಗಳವಾರ ನ್ಯಾಯಪೀಠ, ಪೈಥಾನ್ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್ಟಿಎಸ್) ಸಂಸ್ಥೆಯೊಂದಿಗೆ ಈವರೆಗೂ ಒಪ್ಪಂದ ಮಾಡಿಕೊಳ್ಳದ ಹಾಗೂ ಕಾರ್ಯಾದೇಶ ಹೊರಡಿಸದ ಬಿಬಿಎಂಪಿಯ ಕ್ರಮವನ್ನು ತರಾಟೆ ತೆಗೆದುಕೊಂಡಿತ್ತು.
ಕೊನೆಗೆ ಅಂತಿಮವಾಗಿ ಒಂದು ದಿನ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಕಾರ್ಯಾದೇಶ ಹೊರಡಿಸಿ ಕೋರ್ಟ್ಗೆ ದಾಖಲೆಗಳನ್ನು ಸಲ್ಲಿಸಬೇಕು. ಇಲ್ಲವಾದರೆ ಬಿಬಿಎಂಪಿ ವಿರುದ್ಧ ಕಠಿಣ ಆದೇಶ ಹೊರಡಿಸಲು ನ್ಯಾಯಾಲಯ ಯಾವುದೇ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿ, ಪಾಲಿಕೆ ಮುಖ್ಯ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್ ಖುದ್ದು ಹಾಜರಾಗಬೇಕು ಎಂದು ಖಡಕ್ ಆದೇಶ ನೀಡಿತು.
Recommended Video