ಸಂಭಾವ್ಯ 3ನೇ ಅಲೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಮಹತ್ವದ ಸೂಚನೆ
ಬೆಂಗಳೂರು, ಆಗಸ್ಟ್ 28: ಅಕ್ಟೋಬರ್ ತಿಂಗಳಲ್ಲಿ ವ್ಯಾಪಕವಾಗಿ ಹರಡಲಿದೆ ಎಂದು ಹೇಳಲಾಗುತ್ತಿರುವ ಸಂಭಾವ್ಯ ಕೊರೊನಾ ಮೂರನೇ ಅಲೆಯ ವಿಚಾರದಲ್ಲಿ, ರಾಜ್ಯ ಉಚ್ಚ ನ್ಯಾಯಾಲಯ ಸರಕಾರಕ್ಕೆ ಮಹತ್ವದ ಆದೇಶವನ್ನು ನೀಡಿದೆ.
ಒಟ್ಟಾರೆಯಾಗಿ ಕರ್ನಾಟಕದಲ್ಲಿ ಕೊರೊನಾ ಹೊಸ ಸೋಂಕಿತರು, ಮೃತ ಪಡುತ್ತಿರುವವರ ಸಂಖ್ಯೆ ನಿಯಂತ್ರಣದಲ್ಲಿದೆ. ಆದರೂ, ಮೂರನೇ ಅಲೆಗೆ ಬೇಕಾದ ಪೂರ್ವಸಿದ್ದತೆಗಳನ್ನು ಈಗಿಂದಲೇ ಮಾಡಿಕೊಳ್ಲಿ ಎನ್ನುವ ಸೂಚನೆಯನ್ನು ಹೈಕೋರ್ಟ್ ನೀಡಿದೆ.
ಕೊರೊನಾ ಏಕಾಏಕಿ ಏರಿಕೆ; ಈ ಎರಡು ರಾಜ್ಯಗಳಿಗೆ ಕೇಂದ್ರದ ಸೂಚನೆ
ರಾಜ್ಯದಲ್ಲಿ ಸದ್ಯ 18,970 ಸಕ್ರಿಯ ಪ್ರಕರಣಗಳು ಇವೆ, ಸಾವಿನ ಪ್ರಮಾಣ ಶೇ. 1.30ರಷ್ಟಿದೆ. ಹತ್ತೊಂಬತ್ತು ಜಿಲ್ಲೆಗಳಲ್ಲಿ ಕಳೆದ ಒಂದು ದಿನದಲ್ಲಿ ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಇನ್ನು, ಉಳಿದ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಒಂದಕಿಗಿಂತ ಕಮ್ಮಿಯಿದೆ.
ಸತತ ಮೂರನೇ ದಿನ ಅತಿ ಹೆಚ್ಚು ಕೊರೊನಾ ಪ್ರಕರಣ; ಕೇರಳಕ್ಕೆ ಕೇಂದ್ರದಿಂದ ಪತ್ರ
ಆದರೆ, ಪಕ್ಕದ ಕೇರಳದಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಕೇಂದ್ರದ ಆರೋಗ್ಯ ಇಲಾಖೆ ಕೇರಳ ಸರಕಾರಕ್ಕೆ ಪತ್ರವನ್ನು ಬರೆದಿದೆ. ಓಣಂ ಹಬ್ಬದ ಆಚರಣೆಯ ನಂತರ, ಅಲ್ಲಿ ಗಣನೀಯವಾಗಿ ಸೋಂಕು ಹೆಚ್ಚುತ್ತಿದೆ. ಈ ನಡುವೆ, ಕರ್ನಾಟಕದಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕೆಂದು ವಿವಿಧ ಸಂಘಟನೆಗಳು ಭಾರೀ ಒತ್ತಡವನ್ನು ಹೇರುತ್ತಿದೆ.
ನ್ಯಾ. ಎ.ಎಸ್.ಓಕ್ ಮತ್ತು ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ
ಕೊರೊನಾ ಎರಡನೇ ಅಲೆ ಆರಂಭಿಕ ವೇಳೆ ನಿರ್ವಹಣೆಯಲ್ಲಿ ಆದ ಲೋಪದೋಷಗಳು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ ಎನ್ನುವ ಆದೇಶವನ್ನು ರಾಜ್ಯ ಹೈಕೋರ್ಟ್ ನೀಡಿದೆ. ಅದರಲ್ಲೂ ಪ್ರಮುಖವಾಗಿ ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಈಗಲೇ ಪ್ಲ್ಯಾನ್ ಮಾಡಿಕೊಳ್ಳಿ ಎಂದು ನ್ಯಾ. ಎ.ಎಸ್.ಓಕ್ ಮತ್ತು ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ. (ಚಿತ್ರದಲ್ಲಿ: ನ್ಯಾ. ಅರವಿಂದ್ ಕುಮಾರ್)
ಮೂರನೇ ಅಲೆಗೆ ಎಷ್ಟು ಆಮ್ಲಜನಕ ಬೇಕಾಗಬಹುದು ಎನ್ನುವುದರ ಬಗ್ಗೆ ಕಾರ್ಯೋನ್ಮುಖರಾಗಿ
ಕೂರೊನಾ ಎರಡನೇ ಅಲೆಯ ವೇಳೆ ಬೇಡಿಕೆಯಲ್ಲಿದ್ದ ಆಕ್ಸಿಜನ್ ಪ್ರಮಾಣವೆಷ್ಟು, ಉತ್ಪಾದನೆಯಾಗುತ್ತಿದ್ದದ್ದು ಎಷ್ಟು, ಬೇರೆ ರಾಜ್ಯಗಳಿಂದ ಸರಬರಾಜು ಆಗುತ್ತಿದ್ದ ಆಮ್ಲಜನಕ ಎಷ್ಟು ಎನ್ನುವುದನ್ನು ಲೆಕ್ಕಹಾಕಿ, ಸಂಭಾವ್ಯ ಮೂರನೇ ಅಲೆಗೆ ಎಷ್ಟು ಆಮ್ಲಜನಕ ಬೇಕಾಗಬಹುದು ಎನ್ನುವುದರ ಬಗ್ಗೆ ಈಗಲೇ ಕಾರ್ಯೋನ್ಮುಖರಾಗಿ ಎನ್ನುವ ಆದೇಶವನ್ನು ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೀಡಿದೆ.
ರಾಜ್ಯ ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ
ಹೊಸದಾಗಿ 245 ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದೆ, ಸುಮಾರು ನೂರರಷ್ಟು ಘಟಕಗಳು ಈಗಾಗಲೇ ಕಾರ್ಯ ಆರಂಭ ಮಾಡಿದೆ. ಪಿಎಂ ಕೇರ್ಸ್ ನಿಧಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಉಳಿದ ಘಟಕಗಳನ್ನು ಆದಷ್ಟು ಬೇಗ ಕಾರ್ಯಾರಂಭಗೊಳಿಸಲಾಗುವುದು. ರಾಜ್ಯದಲ್ಲಿ ಲಸಕೀಕರಣ ತೀವ್ರಗೊಳ್ಳುತ್ತಿದ್ದ ಕೇಂದ್ರ ಸರಕಾರದಿಂದ ಉತ್ತಮ ಪ್ರಮಾಣದಲ್ಲಿ ಲಸಿಕೆ ಸರಬರಾಜು ಆಗುತ್ತಿದೆ ಎಂದು ರಾಜ್ಯ ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೈಕೋರ್ಟಿನ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
Recommended Video
ಕೊರೊನಾ ಹರಡುವಿಕೆ ತಡೆಯ ಪ್ರಯತ್ನ, ಎರಡು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ
ಗುರುವಾರ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸೋಂಕಿತರ ಸಂಪರ್ಕ ಪತ್ತೆ ಕಾರ್ಯ, ಲಸಿಕೆ ಹಾಗೂ ಕೊರೊನಾ ನಿಯಮಗಳ ಮೇಲೆ ಕಣ್ಣಿಡುವ ಮೂಲಕ ಕೊರೊನಾ ಹರಡುವಿಕೆ ತಡೆಯ ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಎಂದು ಈ ಎರಡೂ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ.