ಜೆಡಿಎಸ್- ಕಾಂಗ್ರೆಸ್ ಲೋಕಸಭಾ ಮೈತ್ರಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಸ್ಥಿತಿ ಹರೋಹರ?
ಕಾಂಗ್ರೆಸ್ ಮತ್ತು ಜೆಡಿಎಸ್ ಸಚಿವರು ಅದೆಷ್ಟು ಆತ್ಮವಿಶ್ವಾಸದಿಂದ ಐದು ವರ್ಷದ ಅಧಿಕಾರದ ಬಗ್ಗೆ ಮಾತನ್ನಾಡುತ್ತಿದ್ದಾರೋ ಗೊತ್ತಿಲ್ಲ, ಸದ್ಯಕ್ಕಂತೂ ಐದು ವರ್ಷ ನಮ್ಮದೇ ಸರಕಾರ, ಕುಮಾರಣ್ಣನೇ ಸಿಎಂ ಎಂದು ಮಾಧ್ಯಮದವರು ಕೇಳದಿದ್ದರೂ ಹೇಳುತ್ತಿದ್ದಾರೆ.
ಈಗಾಗಲೇ ಹಲವು ಬಾರಿ ಸಮ್ಮಿಶ್ರ ಸರಕಾರದ ಹಿಂದೆ ರಾಹುಲ್ ಗಾಂಧಿಯವರ ಉದ್ದೇಶ ಏನು ಎನ್ನುವುದು ಬಹಳ ಚರ್ಚೆಯಾಗಿರುವುದರಿಂದ, ಸದ್ಯದ ರಾಜಕೀಯ ಲೆಕ್ಕಾಚಾರದ ಪ್ರಕಾರ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವುದು ಬಹುತೇಕ ಖಚಿತ.
ಅವಧಿಗೂ ಮುನ್ನ ಲೋಕಸಭಾ ಚುನಾವಣೆ: ನಿಜವಾದೀತೇ ದೇವೇಗೌಡರ ಭವಿಷ್ಯ?
ಚುನಾವಣೆಗೆ ಇನ್ನೂ ಬಹಳಷ್ಟು ಸಮಯವಿದ್ದರೂ, ದೇವೇಗೌಡ್ರು ಈಗಾಗಲೇ ತಮ್ಮ ರಾಜಕೀಯ ದಾಳವನ್ನು ಕಾಂಗ್ರೆಸ್ ಹೈಕಮಾಂಡ್ ಮುಂದೆ ಉರುಳಿಸಿಯಾಗಿದೆ ಎನ್ನುವ ಸುದ್ದಿ ಎರಡೂ ಪಕ್ಷಗಳ ಪಡಶಾಲೆಯಲ್ಲಿ ಓಡಾಡುತ್ತಿದೆ. ಇದು ಹಾಲೀ ಕಾಂಗ್ರೆಸ್ ಸಂಸದರನ್ನು ಚಿಂತೆಗೀಡು ಮಾಡಿದೆ.
ಸದ್ಯ, ಕಾಂಗ್ರೆಸ್ ಸಂಸದರು ಇರುವ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ, ಒಂದು ವೇಳೆ ಜೆಡಿಎಸ್ ಬಯಸಿದಷ್ಟು ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಡಲು ಒಪ್ಪಿಕೊಂಡರೆ, ತಮಗೆ ಸೀಟು ತಪ್ಪುತ್ತೆ ಎನ್ನುವ ಭಯ ಹಿರಿಯ ಕಾಂಗ್ರೆಸ್ ಮುಖಂಡರಲ್ಲಿದೆ.
ಲೋಕಸಭಾ ಚುನಾವಣೆ: ಜೆಡಿಎಸ್- ಕಾಂಗ್ರೆಸ್ 'ಸೀಟು' ಚೌಕಾಸಿ ಆಗಲೇ ಆರಂಭ?
ಒಟ್ಟು 28ಕ್ಷೇತ್ರಗಳ ಪೈಕಿ ಹತ್ತು ಕ್ಷೇತ್ರ ತಮಗೆ ಬಿಟ್ಟುಕೊಡಬೇಕು ಎನ್ನುವ ಒಂದು ಹಂತದ ಚರ್ಚೆಯನ್ನು ದೇವೇಗೌಡ್ರು, ಕಾಂಗ್ರೆಸ್ ಅಧ್ಯಕ್ಷರ ಜೊತೆ ನಡೆಸಿದ್ದಾರೆ ಎನ್ನುವ ಸುದ್ದಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹರಿದಾಡುತ್ತಿದೆ. ಜೆಡಿಎಸ್ ಬಯಸಿದ ಕ್ಷೇತ್ರ ಸಿಕ್ಕಿದರೆ, ಯಾವ ಹಾಲೀ ಕಾಂಗ್ರೆಸ್ ಸಂಸದರು ಸೀಟು ತ್ಯಾಗ ಮಾಡಬೇಕಾಗಿಬರಬಹುದು, ಮುಂದೆ ಓದಿ..
ರಾಹುಲ್ ಪ್ರಯತ್ನಕ್ಕೆ ನಿರೀಕ್ಷಿತ ಫಲಿತಾಂಶ ಸಿಗದೇ ಇರುವ ಹಿನ್ನಲೆ
ಮೋದಿ ನೇತೃತ್ವದ ಬಿಜೆಪಿ ವಿರುದ್ದ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಬೇಕು ಎನ್ನುವ ರಾಹುಲ್ ಪ್ರಯತ್ನಕ್ಕೆ ನಿರೀಕ್ಷಿತ ಫಲಿತಾಂಶ ಸದ್ಯದ ಮಟ್ಟಿಗೆ ಸಿಗದೇ ಇರುವ ಹಿನ್ನಲೆಯಲ್ಲಿ, ಈಗಾಗಲೆ ಹೊಂದಾಣಿಕೆ ಮಾಡಿಕೊಂಡಿರುವ ಪಕ್ಷಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಇಲ್ಲ. ತೃತೀಯ ರಂಗ ಮತ್ತು ಎಡಪಕ್ಷಗಳು ರಾಹುಲ್ ನೇತೃತ್ವದಲ್ಲಿ ಚುನಾವಣಾಪೂರ್ವ ಮೈತ್ರಿ ಯಾಕೆ ಎನ್ನುವ ನಿಲುವನ್ನು ತಾಳುವ ಸಾಧ್ಯತೆಯಿರುವುದರಿಂದ, ಜೆಡಿಎಸ್ ಡಿಮಾಂಡಿಗೆ ರಾಹುಲ್ ಗಾಂಧಿ ಅಸ್ತು ಅನ್ನಬಹುದು.
ಹತ್ತು ಸೀಟು ಬೇಕೆಂದು ಜೆಡಿಎಸ್ ಪಟ್ಟು ಹಿಡಿದು ಕೂತಿದೆ
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹತ್ತು ಸೀಟು ಬೇಕೆಂದು ಜೆಡಿಎಸ್ ಪಟ್ಟು ಹಿಡಿದು ಕೂತಿದೆ, ಆದರೆ, ಕಾಂಗ್ರೆಸ್ ಎಂಟು ಕ್ಷೇತ್ರ ಬಿಟ್ಟು ಕೊಡಲು ಮಾತ್ರ ಸಾಧ್ಯ ಎನ್ನುವ ಸುದ್ದಿಯಿತ್ತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್ಸಿಗೆ ಬಿಟ್ಟುಕೊಡಲು ಸಿದ್ದವಿದ್ದರೂ, ಜೆಡಿಎಸ್ಸಿಗೆ ಅದು ಬೇಕಾಗಿಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2ಕ್ಷೇತ್ರದಲ್ಲಿ ಗೆದ್ದಿತ್ತು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ವಿಧಿಯಿಲ್ಲದೇ ಸುಮ್ಮನಾಗಬೇಕಾಗುತ್ತದೆ
ಜೆಡಿಎಸ್ ಡಿಮಾಂಡ್ ಮಾಡುತ್ತಿರುವ ಹತ್ತು ಕ್ಷೇತ್ರಗಳ ಪೈಕಿ ಎರಡು ಸೀಟು ಈಗಾಗಲೇ ತನ್ನ ಸುಪರ್ದಿಯಲ್ಲಿರುವ ಮಂಡ್ಯ ಮತ್ತು ಹಾಸನ. ಇನ್ನುಳಿದ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನವನ್ನು ಕಳೆದ ಚುನಾವಣೆಯಲ್ಲಿ ಗೆದ್ದಿತ್ತು. ಹಾಗಾಗಿ, ಒಂದು ವೇಳೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಮಾಡಿಕೊಂಡರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ವಿಧಿಯಿಲ್ಲದೇ ಸುಮ್ಮನಾಗಬೇಕಾಗುತ್ತದೆ.
ಕೋಲಾರದಲ್ಲಿ ಕೆ ಎಚ್ ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ
ಕೋಲಾರದಲ್ಲಿ ಕೆ ಎಚ್ ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ, ತುಮಕೂರಿನಲ್ಲಿ ಮುದ್ದಹನುಮೇಗೌಡ ಮತ್ತು ಚಿತ್ರದುರ್ಗದಲ್ಲಿ ಬಿ ಎನ್ ಚಂದ್ರಪ್ಪ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿದ್ದರು. ಈ ನಾಲ್ಕು ಕ್ಷೇತ್ರವನ್ನು ತಮಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಡಿಮಾಂಡ್ ಮಾಡಿದೆ ಎನ್ನುವ ಸುದ್ದಿಯಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ
ಇದರ ಜೊತೆಗೆ, ಬೆಂಗಳೂರು ಉತ್ತರ, ಶಿವಮೊಗ್ಗ, ಮೈಸೂರು ಮತ್ತು ಬೀದರ್ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಉತ್ಸುಕವಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದರೂ, ವಿಧಾನಸಭಾ ಚುನಾವಣೆಯ ನಂತರ, ಬದಲಾದ ರಾಜಕೀಯ ಲೆಕ್ಕಾಚಾರದಿಂದ ಜೆಡಿಎಸ್ ಈ ದಾಳ ಉರುಳಿಸಿದೆ ಎನ್ನುವ ಸುದ್ದಿಯಿದೆ.