ಬಿರುಕುಬಿಟ್ಟ ಸೇತುವೆ ಸುರಸ್ತಿ ಮಾಡಿ ಮಾನವೀಯತೆ ಮೆರೆದ ಪೊಲೀಸರು!
ತರೀಕೆರೆ, ಜನವರಿ 27: ಪೊಲೀಸರೆಂದರೆ ಕೇವಲ ಕಳ್ಳರನ್ನು ಹಿಡಿಯುವುದು, ಜೂಜುಕೋರರನ್ನು ಬಂಧಿಸುವುದು, ಅತಿ ಹೆಚ್ಚೆಂದರೆ ಗದ್ದಲ ಗಲಾಟೆ ಸಂದರ್ಭದಲ್ಲಿ ಲಾಠಿ ಬೀಸುವುದು ಎಂಬ ಭಾವನೆ ಇದೆ. ಆದರೆ ಬಿರುಕು ಬಿಟ್ಟ ಸೇತುವೆ ದುರಸ್ತಿ ಮಾಡಿ ನೂರಾರು ಜನರಿಗೆ ಉಪಕಾರ ಮಾಡಿದ ಪೊಲೀಸರೂ ಇದ್ದಾರೆ ಎಂಬ ವಿಶೇಷ ಸುದ್ದಿ ಚಿಕ್ಕಮಗಳೂರಿನಿಂದ ಬಂದಿದೆ.
ಪೊಲೀಸರೆಂದರೆ ಕಾನೂನು ಪಾಲನೆ, ಭಯದ ವಾತಾವರಣ, ಖಡಕ್ ಎಚ್ಚರಿಕೆ ಸೇರಿದಂತೆ ಹಿಂಸೆಯ ಮುಖವೇ ಕಾಣುವ ಹಲವು ಸಂದರ್ಭದಲ್ಲಿ ಪೊಲೀಸರಲ್ಲೂ ಮಾನವೀಯತೆ ಇದೆ ಎಂಬುಂದು ಮತ್ತೊಮ್ಮೆ ಸಾಬೀತಾಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪ ಬೇಗೂರು ಹಾಗೂ ತಮ್ಮಟದಹಳ್ಳಿ ಮಾರ್ಗ ಮಧ್ಯೆ ದೊಡ್ಡ ಸೇತುವೆ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟಿತ್ತು.
ಈ ವೇಳೆ ಸ್ವತಃ ಅಜ್ಜಂಪುರ ಪಿಎಸ್ ಐ ರಮೇಶ್, ಯಗಟಿ ಪಿಎಸ್ ಐ ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಬಿರುಕು ಬಿಟ್ಟ ಸೇತುವೆಗೆ ಪುಡಿ ಕಲ್ಲುಗಳನ್ನ ತುಂಬಿ, ಸಿಮೆಂಟಿನಿಂದ ಸಾರಿಸಿ ನಂತರ ಪುಡಿ ಮಣ್ಣನ್ನ ಹಾಕಿ ಬಿರುಕನ್ನ ಮುಚ್ಚಿ ಮಾನವೀಯತೆ ಮೆರೆದಿದ್ದಾರೆ.
ಸದ್ಯ ಕಳೆದ ಒಂದು ವಾರದಿಂದ ಅಜ್ಜಂಪುರ ಸಮೀಪದ ಅಂತರಗಟ್ಟೆ ದುರ್ಗಾಂಬ ದೇವಿ ಜಾತ್ರಾ ಮಹೊತ್ಸವ ನಡೆಯುತ್ತಿದ್ದು ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿ ಹರಕೆ ತೀರಿಸೋದು ಇಲ್ಲಿನ ಪ್ರತೀತಿ, ಹಾಗಾಗಿ ರೈತರ ಅತಿವೇಗದಲ್ಲಿ ಎತ್ತಿನ ಗಾಡಿಯನ್ನ ಓಡಿಸಿಕೊಂಡು ಬರುವಾಗ ಬಿರುಕಿನೊಳಗೆ ರಾಸಿನ ಕಾಲಿ ಸಿಕ್ಕಿಕೊಂಡು ಅಪಘಾತವಾಗೋ ಸಂಭವ ಇತ್ತು,ಆದರೆ ಪೊಲೀಸರ ಸಮಯ ಪ್ರಜ್ಞಯಿಂದ ಅಪಘಾತವಾಗುವುದನ್ನು ತಡೆದಂತಾಗಿದ್ದು ಸಾರ್ವಜನಿಕರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.