ಖಾತೆ ಹಂಚಿಕೆ ವಿಳಂಬ, ಯಾವುದೇ ನಿರೀಕ್ಷೆಯಿಲ್ಲ ಎಂದ ಶಂಕರ್
ಬೆಂಗಳೂರು, ಜೂನ್ 18: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆ ಮಾಡಿ ನಾಲ್ಕು ದಿನ ಕಳೆದರೂ ನೂತನ ಸಚಿವರಿಬ್ಬರಿಗೆ ಯಾವುದೇ ಖಾತೆ ಹಂಚಿಕೆಯಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಕರ್, ಯಾವುದೇ ಖಾತೆ ನೀಡಿದರೂ ಸರಿ, ಹೆಚ್ಚಿನ ನಿರೀಕ್ಷೆ ಹೊಂದಿಲ್ಲ ಎಂದಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಪ್ರಮುಖರಾದ ಸಿಎಂ ಕುಮಾರಸ್ವಾಮಿ ಅವರು ಇಂದು ಮಂಡ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸದಲ್ಲಿದ್ದಾರೆ.
ಸುಧಾಕರ್ ಗೆ ರಾಹುಲ್ ಕೊಟ್ಟ ಭರವಸೆ ಹುಸಿಯಾಯ್ತು, ಸಚಿವ ಸ್ಥಾನ ಕೈತಪ್ಪಿತು!
ಪಕ್ಷೇತರ ಶಾಸಕರಿಗೆ ಯಾವುದೇ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುವುದಿಲ್ಲ. ಆರ್.ಶಂಕರ್ ಅವರು ಕೆಪಿಜೆಪಿ ಯಿಂದ ಆಯ್ಕೆ ಆಗಿದ್ದರೂ ಸಹ ಅವರ ಪಕ್ಷಕ್ಕೆ ಅವರೇ ನಾಯಕರಾದ್ದರಿಂದ ಪಕ್ಷದ ಯಾವುದೇ ನಿಬಂಧನೆಗಳು ಅವರಿಗೆ ಅನ್ವಯವಾಗುವುದಿಲ್ಲ ಹಾಗಾಗಿ ಈ ಇಬ್ಬರೂ ಸುಲಭವಾಗಿ ಬಿಜೆಪಿ ಸೇರುವ ಸಾಧ್ಯತೆ ಇತ್ತು. ಇದೆಲ್ಲವನ್ನು ಮನಗಂಡ ಕುಮಾರಸ್ವಾಮಿ ಅವರು ಜಾಣತನದ ನಡೆ ಇಟ್ಟು, ಇಬ್ಬರೂ ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.
ಕ್ಷೇತ್ರ ಪ್ರವಾಸದಲ್ಲಿ ನೂತನ ಸಚಿವ: ಮತದಾರರಿಗೆ ಧನ್ಯವಾದ ಅರ್ಪಿಸುವುದು, ಹಳ್ಳಿಗಳಲ್ಲಿ ಸುತ್ತಾಡಿ ಸಮಸ್ಯೆ ಆಲಿಸುವುದು, ಕ್ಷೇತ್ರದ ಅಭಿವೃದ್ಧಿಗಾಗಿ ಅಹವಾಲು ಸ್ವೀಕರಿಸುವುದು ಸದ್ಯ ಶಂಕರ್ ಅವರ ಕಾರ್ಯಕ್ರಮ ಪಟ್ಟಿಯಲ್ಲಿದೆ.
ಸಚಿವರಾದ ಬಳಿಕ ಶಂಕರ್ ರಿಂದ ಕ್ಷೇತ್ರ ಪ್ರವಾಸ
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕೆಪಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆರ್ ಶಂಕರ್ ಅವರು ಒಲ್ಲದ ಮನಸ್ಸಿನಿಂದಲೆ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿಕೊಂಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದ ಸಚಿವರಾದ ಬಳಿಕ ಮೊದಲ ಬಾರಿಗೆ ತಮ್ಮ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ.
ಮುಳುಬಾಗಲಿನ ಎಚ್ ನಾಗೇಶ್
ಇನ್ನು ಮುಳುಬಾಗಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್ ನಾಗೇಶ್ ಅವರು ಸಚಿವರಾದ ಬಳಿಕ ತಮ್ಮ ಕ್ಷೇತ್ರಕ್ಕೆ ಹೋಗಿಲ್ಲ. ಖಾತೆ ಹಂಚಿಕೆ ಬಗ್ಗೆ ತಲೆಕೆಡಿಸಿಕೊಂಡು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಸದ್ಯಕ್ಕೆ ಮತದಾರರಿಗೆ ಧನ್ಯವಾದ ಅರ್ಪಿಸುವ ಕಾರ್ಯಕ್ರಮವೂ ನಿಗದಿಯಾಗಿಲ್ಲ. ಉತ್ತಮ ಖಾತೆ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯಿದೆ.
ಖಾತೆ ಹಂಚಿಕೆ ಯಾವಾಗ?
ಯಾವಾಗ ನಿರೀಕ್ಷಿಸಬಹುದು: ದೆಹಲಿಯಿಂದ ಮಂಗಳವಾರದಂದು ಸಿದ್ದರಾಮಯ್ಯ ಅವರು ಹಿಂತಿರುಗುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯ, ಚನ್ನಪಟ್ಟಣ ಕ್ಷೇತ್ರಗಳ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಬೆಂಗಳೂರಿಗೆ ಬಂದ ಬಳಿಕ ಇಬ್ಬರು ನಾಯಕರು, ಖಾತೆ ಹಂಚಿಕೆ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಸದ್ಯಕ್ಕೆ ಈ ವಾರಾಂತ್ಯದೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ.
ಕಾಂಗ್ರೆಸ್ ನಾಯಕರ ಅಸಮಾಧಾನ
ಸಚಿವ ಸಂಪುಟದಲ್ಲಿ ಖಾಲಿ ಇದ್ದ ಮೂರು ಸ್ಥಾನಗಳ ಪೈಕಿ 2 ಸ್ಥಾನಗಳನ್ನು ಶುಕ್ರವಾರ(ಜೂನ್ 14) ಭರ್ತಿ ಮಾಡಲಾಗಿದೆ. ಕಾಂಗ್ರೆಸ್ ಕೋಟಾದಲ್ಲಿ ಖಾಲಿ ಇದ್ದ ಒಂದು ಸ್ಥಾನವನ್ನು ಪಕ್ಷೇತರ ಶಾಸಕರಿಗೆ ನೀಡಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಸಂಪುಟ ವಿಸ್ತರಣೆ ಬಳಿಕ ಮೊದಲ ಅಸಮಾಧಾನದ ಹೊಗೆ ಎದ್ದಿದೆ. ಕಾಂಗ್ರೆಸ್ ನಾಯಕರಿಗೆ ಒಂದು ಸ್ಥಾನದ ಕೈ ತಪ್ಪಿದ್ದಕ್ಕಿಂತ, ಪಕ್ಷೇತರರಿಬ್ಬರಿಗೆ ಸ್ಥಾನ ಕಲ್ಪಿಸಿರುವುದನ್ನು ಸಹಿಸಲು ಆಗುತ್ತಿಲ್ಲ ಎಂಬ ಸುದ್ದಿಯಿದೆ