ಕರ್ನಾಟಕದಲ್ಲಿ ಇ-ಆಡಳಿತ : ಇಬ್ಬರಿಗೆ ಬಿಟ್ಟು ಒಬ್ಬರಿಗೂ ಇಷ್ಟ ಇಲ್ಲ
ಬೆಂಗಳೂರು, ಫೆಬ್ರವರಿ 6: ಕರ್ನಾಟಕ ವಿಧಾನಸಭೆಯ 224 ಶಾಸಕರ ಪೈಕಿ ಒಬ್ಬರು ಮಾತ್ರ ತಮ್ಮ ಪ್ರಶ್ನೆಯನ್ನು ವಾಟ್ಸ್ ಅಪ್ ಮೂಲಕ ಕಳಿಸಿದ್ದರೆ, ಇನ್ನೊಬ್ಬ ಶಾಸಕರು ಇ ಮೇಲ್ ಹಾಗೂ ವಾಟ್ಸ್ ಅಪ್ ಮೂಲಕ ಪ್ರಶ್ನೆಯನ್ನು ಕಳಿಸಿದ್ದಾರೆ. ಇದೇನು ವಾಟ್ಸ್ ಅಪ್, ಇ ಮೇಲ್ ಅಂತ ಕೇಳ್ತೀರಾ?
ಜನವರಿ 4ರಂದು ಅಧಿಸೂಚನೆ ಹೊರಡಿಸಿ, ವಿಧಾನಸಭೆಯ ಪ್ರಶ್ನಾವಳಿ ವೇಳೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ವಾಟ್ಸ್ ಅಪ್ ಮೂಲಕ ಕಳಿಸಬಹುದು ಎಂದು ತಿಳಿಸಲಾಗಿತ್ತು. ಯಾವುದೇ ಇಲಾಖೆಗೆ ಸಂಬಂಧಿಸಿದ, ಕೆಲಸಕ್ಕೆ ಸಂಬಂಧಿಸಿದ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗ್ಗೆ ಪ್ರಶ್ನೆಗಳಿದ್ದಲ್ಲಿ ಅಥವಾ ಸರಕಾರದ ನೀತಿ ಅಥವಾ ನಿರ್ಧಾರದ ಬಗ್ಗೆ ಪ್ರಶ್ನೆಯನ್ನು ವಾಟ್ಸ್ ಅಪ್ ಮೂಲಕ ಕೇಳಬಹುದು ಎಂದು ಎರಡು ಮೊಬೈಲ್ ಸಂಖ್ಯೆ ಕೂಡ ನೀಡಲಾಗಿತ್ತು.[ಏನಿದು ಆಧಾರ್ ಆಧಾರಿತ ಪೇಮೆಂಟ್ App? ಹೇಗೆ ಕಾರ್ಯ ನಿರ್ವಹಿಸುತ್ತೆ?]
ಇದರ ಜೊತೆಗೆ ಈ ಹಿಂದೆ ಇದ್ದಂತೆ ಯಾವುದೇ ಪ್ರಶ್ನೆಗಳನ್ನು ಫ್ಯಾಕ್ಸ್ ಮೂಲಕ ಕಳಿಸಬಹುದು ಅಥವಾ ನಿರ್ದಿಷ್ಟ ರೀತಿಯಲ್ಲಿ ಪ್ರಶ್ನೆಗಳನ್ನು ಬರೆದು, ವಿಧಾನ ಸೌಧದಲ್ಲಿ ಇಟ್ಟಿರುವ ಬಾಕ್ಸ್ ನಲ್ಲಿ ಹಾಕಬಹುದು. ಸಾಂಪ್ರದಾಯಿಕ ಪದ್ಧತಿ ಪ್ರಕಾರ ಅಧಿವೇಶನ ಶುರುವಾಗುವ ಹದಿನೈದು ದಿನಕ್ಕೆ ಮುಂಚಿತವಾಗಿಯೇ ಪ್ರಶ್ನೆಗಳನ್ನು ಕಳುಹಿಸಬೇಕು.[ನರಗುಂದ ರಾಜ್ಯದ ಪ್ರಥಮ ಕಾಗದರಹಿತ ತಾಲ್ಲೂಕು ಪಂಚಾಯಿತಿ]
ಅದರೆ, ವಾಟ್ಸ್ ಅಪ್ ನಲ್ಲೋ, ಈ ಮೇಲ್ ಮೂಲಕವೋ ಪ್ರಶ್ನೆಗಳನ್ನು ಕಳುಹಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಎರಡು ವಾರಕ್ಕೆ ಮುಂಚೆ ತಲುಪಿದರೆ ಆಯಿತು. ಒಂದು ದಿನ ಒಬ್ಬ ಸದಸ್ಯರು ಐದು ಪ್ರಶ್ನೆಗಳನ್ನು ಕೇಳಬಹುದು. ಈ ಹೊಸ ವಿಧಾನವನ್ನು ಹಿರೇಕೆರೂರಿನಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಬಿ.ಬಣಕಾರ್ ಹಾಗೂ ಚಿಂತಾಮಣಿಯಿಂದ ಆಯ್ಕೆಯಾಗಿರುವ ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ಬಳಸಿದ್ದಾರೆ.
ಬಣಕಾರ್ ಎಂಟು ಪ್ರಶ್ನೆಗಳನ್ನು ಇ ಮೇಲ್ ಮೂಲಕ ಕಳಿಸಿದ್ದಾರೆ. ಇನ್ನು ರೆಡ್ಡಿ ಅವರು ಇಪ್ಪತ್ತು ಸಮಸ್ಯೆಗಳನ್ನು ವಾಟ್ಸ್ ಅಪ್ ಮೂಲಕ ಕಳಿಸಿದ್ದಾರೆ. ಆ ಪೈಕಿ ಬಹುತೇಕ ತಮ್ಮ ಕಚೇರಿ ಸಹಾಯಕರ ಮೂಲಕವೇ ಕಳುಹಿಸಿದ್ದಾರೆ. ಶಾಸಕರಿಗೆಲ್ಲ ಐ ಪ್ಯಾಡ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ನೀಡಲಾಗಿದೆ. ಅವರ ಫೋನ್ ಬಿಲ್ ಕೂಡ ಸರಕಾರವೇ ಭರಿಸುತ್ತದೆ.[ಮೊಬೈಲ್ನಲ್ಲಿ ಇಡೀ ಜಗತ್ತು, ಇದು ಮೋದಿ ಕನಸು]
ವಿಚಿತ್ರ ಅಂದರೆ ಈ ಪ್ರಶ್ನೆಗಳನ್ನು ಸ್ವೀಕರಿಸುವ ಅಧಿಕಾರಿಗಳಿಗೇ ಯಾವುದೇ ಮೊಬೈಲ್ ಫೋನ್, ಸಿಮ್ ಕಾರ್ಡ್ ನೀಡಿಲ್ಲ. ಅಧಿಕಾರಿಗಳಿಗೆ ವೈಯಕ್ತಿಕ ಮೊಬೈಲ್ ಫೋನ್ ಬಳಸುವಂತೆ ಸೂಚಿಸಲಾಗಿದೆ. ಇನ್ನು ಇ-ಸಂವಹನವನ್ನು ಪರಿಣಾಮಕಾರಿಯಾಗಿ ಬಳಸಿದರೆ, ಕಾಗದಕ್ಕೆ ಖರ್ಚಾಗುವ ಲಕ್ಷಾಂತರ ರುಪಾಯಿ ಉಳಿತಾಯ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.