ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಟಿಪ್ಪು' ಜಪದಲ್ಲಿ ಕಳೆದುಕೊಂಡಿದ್ದೇ ಹೆಚ್ಚು: ರಾಜಕಾರಣಿಗಳಲ್ಲಿ ಕಾಡುತ್ತಿದೆಯೇ ಭಯ?

|
Google Oneindia Kannada News

ಬೆಂಗಳೂರು, ನವೆಂಬರ್ 10: 'ಟಿಪ್ಪು' ಎಂದು ಹಿಂದೆ ಹೋದವರೆಲ್ಲ ತಮ್ಮ ಅಧಿಕಾರ, ಸಂಪತ್ತನ್ನೆಲ್ಲಾ ಕಳೆದುಕೊಳ್ಳುತ್ತಾರೆಯೇ? ಹೀಗೊಂದು ಭಯಮಿಶ್ರಿತ ನಂಬಿಕೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಜನರಲ್ಲಿ ದೇವರು, ಒಳಿತು-ಕೆಡಕುಗಳ ಪ್ರಭಾವಳಿಗಳ ಬಗ್ಗೆ ಎಷ್ಟು ನಂಬಿಕೆ ಇದೆಯೋ, ರಾಜಕೀಯ ವಲಯದಲ್ಲಿಯೂ ಅಷ್ಟೇ ತೀವ್ರವಾಗಿದೆ. ಕೆಲವು ಕಾಕತಾಳೀಯವಾದ ಘಟನೆಗಳು ಅಂತಹ ನಂಬಿಕೆಗಳನ್ನು ಸತ್ಯ ಎನಿಸುವಂತೆ ಮಾಡುತ್ತವೆ.

ಟಿಪ್ಪು ಸುಲ್ತಾನ್ ನಿಜ ಇತಿಹಾಸ, ರಾಜಕಾರಣ ಹಾಗೂ ಸತ್ಯಾನ್ವೇಷಣೆಟಿಪ್ಪು ಸುಲ್ತಾನ್ ನಿಜ ಇತಿಹಾಸ, ರಾಜಕಾರಣ ಹಾಗೂ ಸತ್ಯಾನ್ವೇಷಣೆ

ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದಂತೆಯೂ ಇಂತಹ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಶತಮಾನಗಳ ಹಿಂದೆ ಬದುಕಿದ್ದ ಟಿಪ್ಪುವಿನ ಬಗ್ಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ರೀತಿಯ ಕಥೆಗಳಿವೆ. ಟಿಪ್ಪು ಜಯಂತಿ ಆಚರಣೆಯನ್ನು ಸಮರ್ಥಿಸುವವರು ಆತನ ಸಾಧನೆಗಳ ಬಗ್ಗೆ ವಿವರಿಸುತ್ತಿದ್ದಾರೆ. ಆತನನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸುತ್ತಾರೆ.

ಆದರೆ, ಆಚರಣೆ ವಿರೋಧಿಸಲೂ ಅನೇಕ ಕಾರಣಗಳನ್ನು ಮುಂದಿಡಲಾಗುತ್ತಿದೆ. ಟಿಪ್ಪು ಮೈಸೂರು ಹುಲಿ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಪರಾಕ್ರಮಿ, ರಾಜ್ಯಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ ಎಂಬ ಇತಿಹಾಸದ ಕಥೆಗಳೆಲ್ಲವೂ ಸುಳ್ಳು ಎಂದೂ ಆರೋಪಿಸಲಾಗುತ್ತಿದೆ.

ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?

ಹಾಗೆಯೇ ಟಿಪ್ಪುವಿನಿಂದ ಆತ ಅನಾಹುತಗಳೇ ಹೆಚ್ಚು. ಆತನಿಂದ ಜನತೆಗೆ ಒಳಿತಾಗಲಿಲ್ಲ. ಆತ ಮತಾಂಧನಾಗಿದ್ದ ಎಂಬೆಲ್ಲ ಆರೋಪಗಳನ್ನೂ ಮಾಡಲಾಗುತ್ತಿದೆ. ಈಗ ಅವುಗಳಿಗೆ ಹೊಸ ಆಯಾಮವನ್ನು ನೀಡಲಾಗುತ್ತಿದೆ.

ಟಿಪ್ಪು ಕಾಲದಲ್ಲಿ ಜನರ ನಂಬಿಕೆ ಹೇಗಿತ್ತೋ ತಿಳಿದಿಲ್ಲ. ಇತ್ತೀಚಿನವರೆಗೂ ಟಿಪ್ಪು ಅಷ್ಟಾಗಿ ಚರ್ಚೆಗೆ ಒಳಪಟ್ಟಿರಲಿಲ್ಲ. ಆದರೆ, ಈಗಿನ ರಾಜಕೀಯ ನಾಯಕರ ವಿಶ್ಲೇಷಣೆ ಪ್ರಕಾರ ಟಿಪ್ಪುವನ್ನು ಬೆಂಬಲಿಸುವವರು ನಷ್ಟ ಅನುಭವಿಸುತ್ತಾರಂತೆ.

ಚಾಮರಾಜನಗರ ಶಾಪ

ಚಾಮರಾಜನಗರ ಶಾಪ

ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಈಗಲೂ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಇದಕ್ಕೆ ಪೂರಕ ಎನಿಸುವಂತಹ ಅನೇಕ ಉದಾಹರಣೆಗಳಿವೆ. ಹೀಗಾಗಿ ಜಿಲ್ಲೆಯ ಬೇರೆ ಭಾಗಕ್ಕೆ ಬಂದ ಹಿಂದಿನ ಮುಖ್ಯಮಂತ್ರಿಗಳು, ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡದೆ ವಾಪಸಾಗುತ್ತಿದ್ದರು.

ಈ ನಂಬಿಕೆಯನ್ನು ಸುಳ್ಳು ಮಾಡಲು ಸಿದ್ದರಾಮಯ್ಯ ಹತ್ತಾರು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದರು. ಅಲ್ಲಿಗೆ ಬಂದಾಗಲೆಲ್ಲ 'ನನ್ನ ಕುರ್ಚಿ ಇನ್ನಷ್ಟು ಗಟ್ಟಿಯಾಗಿದೆ' ಎಂದು ತಮಾಷೆ ಮಾಡುತ್ತಿದ್ದರು.

ಚಾಮರಾಜನಗರಕ್ಕೆ ಭೇಟಿ ನೀಡಿಯೂ ಐದು ವರ್ಷದ ಅಧಿಕಾರ ಪೂರ್ಣಗೊಳಿಸುವ ಮೂಲಕ ಸಿದ್ದರಾಮಯ್ಯ ಚಾಮರಾಜನಗರದ 'ರಾಜಕೀಯ ಶಾಪ'ಕ್ಕೆ ಮುಕ್ತಿ ನೀಡಿದರು. ಆದರೆ, ಎರಡನೆ ಬಾರಿ ಅವರ ಮತ್ತೆ ಮುಖ್ಯಮಂತ್ರಿ ಆಗಲಿಲ್ಲ. ಇದು ಚಾಮರಾಜನಗರದ ಶಾಪವೇ ಹೌದು ಎಂಬ ಮಾತು ಚಾಲ್ತಿಯಲ್ಲಿದೆ.

ಟಿಪ್ಪು ಜಯಂತಿ ಕಾರಣವೇ?

ಟಿಪ್ಪು ಜಯಂತಿ ಕಾರಣವೇ?

ಇದೇ ಭಯ ಈಗ ಟಿಪ್ಪು ವಿಚಾರದಲ್ಲಿಯೂ ಮೂಡಿದೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲು ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದ್ದೂ ಕಾರಣ ಎಂದು ಬಿಜೆಪಿ ಅನೇಕ ನಾಯಕರು ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಅನುಭವಿಸಿದ್ದರು. ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದವರು ತಾವು ದ್ವೇಷಿಸುತ್ತಿದ್ದ ಜೆಡಿಎಸ್ ಜತೆಗೇ ಅನಿವಾರ್ಯವಾಗಿ ಕೈಜೋಡಿಸಬೇಕಾಯಿತು. ಮತ್ತೆ ಹುದ್ದೆಗೆ ಏರುವ ಅವಕಾಶವೇ ಕೈತಪ್ಪಿ ಹೋಯಿತು. ವಿರೋಧದ ನಡುವೆಯೂ ಹಠ ಹಿಡಿದು ಟಿಪ್ಪು ಜಯಂತಿ ಆಚರಣೆ ಮಾಡಿದ್ದೇ ಇದಕ್ಕೆಲ್ಲ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕೋಮುವಾದದ ಕನ್ನಡಕ ಕಳಚಿಟ್ಟು ಟಿಪ್ಪುವನ್ನು ನೋಡಿ: ಬಿಜೆಪಿಗೆ ಸಿದ್ದರಾಮಯ್ಯ ಸಲಹೆಕೋಮುವಾದದ ಕನ್ನಡಕ ಕಳಚಿಟ್ಟು ಟಿಪ್ಪುವನ್ನು ನೋಡಿ: ಬಿಜೆಪಿಗೆ ಸಿದ್ದರಾಮಯ್ಯ ಸಲಹೆ

ಟಿಪ್ಪು ಖಡ್ಗ ಎಲ್ಲಿದೆ?

ಟಿಪ್ಪು ಖಡ್ಗ ಎಲ್ಲಿದೆ?

ಮದ್ಯ ಉದ್ಯಮಿ ವಿಜಯ್ ಮಲ್ಯ 2004ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜನತಾಪಕ್ಷದ ಅಧ್ಯಕ್ಷರಾಗಿದ್ದರು. ಆಗ ಅವರು ಲಂಡನ್‌ನ ಖಾಸಗಿ ಮ್ಯೂಸಿಯಂನಲ್ಲಿದ್ದ ಟಿಪ್ಪು ಸುಲ್ತಾನನ ಖಡ್ಗಕ್ಕೆ ಹರಾಜಿನಲ್ಲಿ 1.5 ಕೋಟಿ ನೀಡಿ ಖರೀದಿಸಿದ್ದರು. ಆ ಚುನಾವಣೆಯಲ್ಲಿ ಮಲ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲು ಅನುಭವಿಸಿದರು.

ನಂತರ ಅವರ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿತು. ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ ಸಾಲ ಪಡೆದು ವಂಚನೆ ಮಾಡಿದ ಆರೋಪ ಅವರ ಮೇಲಿದೆ. ಅವರು ಬೆಳೆಸಿದ ಬೃಹತ್ ಉದ್ಯಮ ನೆಲಕಚ್ಚಿದೆ. ದೇಶಬಿಟ್ಟು ಪರಾರಿಯಾಗಿ ಲಂಡನ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಅವರು ತಂದ ಖಡ್ಗವೇ ಅವರ ಎಲ್ಲ ದುರದೃಷ್ಟಗಳಿಗೆ, ನಷ್ಟಕ್ಕೆ ಕಾರಣ ಎಂದು ಅವರ ಕುಟುಂಬ ಅಭಿಪ್ರಾಯಪಟ್ಟಿತ್ತು ಎನ್ನಲಾಗಿದೆ. ಈಗ ಆ ಖಡ್ಗ ಎಲ್ಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅವರ ಮನೆಯನ್ನು ತಪಾಸಣೆ ಮಾಡಿದ್ದ ಇಡಿ, ಸಿಬಿಐ ಅಧಿಕಾರಿಗಳಿಗೂ ಖಡ್ಗ ದೊರೆತಿಲ್ಲ. ಅದರ ಬಗ್ಗೆ ಮಲ್ಯ ಅವರನ್ನೇ ಕೇಳಬೇಕಿದೆ.

ಧಾರಾವಾಹಿಯಲ್ಲಿ ಅವಘಡ ದುರಂತ

ಧಾರಾವಾಹಿಯಲ್ಲಿ ಅವಘಡ ದುರಂತ

ಹಿಂದಿ ಚಿತ್ರರಂಗದ ನಟ, ನಿರ್ದೇಶಕ ಸಂಜಯ್ ಖಾನ್ 1990ರಲ್ಲಿ ದೂರದರ್ಶನಕ್ಕಾಗಿ 'ದಿ ಸೋರ್ಡ್ ಆಫ್ ಟಿಪ್ಪು ಸುಲ್ತಾನ್' ಎಂಬ 60 ಕಂತುಗಳ ಧಾರಾವಾಹಿ ನಿರ್ದೇಶಿಸಿದ್ದರು. ಮಾತ್ರವಲ್ಲ, ಅದರ ಮುಖ್ಯ ಪಾತ್ರದಲ್ಲಿ ಸ್ವತಃ ನಟಿಸಿದ್ದರು.

ಆದರೆ, ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಧಾರಾವಾಹಿ ಸೆಟ್‌ನ ಅನೇಕ ವಸ್ತುಗಳು ಭಸ್ಮವಾದವು. 62 ಮಂದಿ ಇದರಲ್ಲಿ ಜೀವ ಕಳೆದುಕೊಂಡರು. ಸಂಜಯ್ ಖಾನ್ ಕೂಡ ಸುಟ್ಟ ಗಾಯಗಳಿಂದಾಗಿ 13 ತಿಂಗಳು ಆಸ್ಪತ್ರೆಯಲ್ಲಿದ್ದು, 72 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರು.

ಇಂದು ಟಿಪ್ಪು ಜಯಂತಿ: ಪ್ರತಿಭಟನೆ, ನಿಷೇಧಾಜ್ಞೆ, ಕೊಡಗು ಬಂದ್ಇಂದು ಟಿಪ್ಪು ಜಯಂತಿ: ಪ್ರತಿಭಟನೆ, ನಿಷೇಧಾಜ್ಞೆ, ಕೊಡಗು ಬಂದ್

ಬಿಜೆಪಿಗೂ ಟಿಪ್ಪು ಕಾಟ

ಬಿಜೆಪಿಯ ನಾಯಕರೂ ಟಿಪ್ಪು ಸುಲ್ತಾನ್ ವೇಷ ಧರಿಸಿದ ಖಡ್ಗ ಹಿಡಿದು ಝಳಪಿಸಿದ ಫೋಟೊಗಳು ಈಗಲೂ ಚಾಲ್ತಿಯಲ್ಲಿವೆ. ಪ್ರತಿ ಬಾರಿ ಟಿಪ್ಪು ವಿವಾದ ಮುನ್ನೆಲೆಗೆ ಬಂದಾಗ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗುತ್ತವೆ.

ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್, ಸಿ.ಪಿ. ಯೋಗೇಶ್ವರ್ ಎಲ್ಲರೂ ಟಿಪ್ಪುವಿನಂತೆ ವೇಷ ಧರಿಸಿದ್ದರು. ಬಳಿಕ ಮತ್ತೆ ಅಧಿಕಾರಕ್ಕೆ ಏರಲು ಅವರಿಗೆ ಸಾಧ್ಯವಾಗಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಬೇಕಾಯಿತು. ಜಗದೀಶ್ ಶೆಟ್ಟರ್ ಅಧಿಕಾರದಲ್ಲಿ ಉಳಿಯಲಿಲ್ಲ. ಸಿಪಿ ಯೋಗೇಶ್ವರ್ ಕೂಡ ಸೋಲು ಕಂಡರು. ಆರ್. ಅಶೋಕ್ ಗೆದ್ದರೂ, ಪಕ್ಷ ವಹಿಸಿದ ಚುನಾವಣಾ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ಎಡವಿ ಮುಖಭಂಗ ಅನುಭವಿಸಿದರು.

ಎಚ್‌ಡಿಕೆ ಉಭಯ ಸಂಕಟ

ಎಚ್‌ಡಿಕೆ ಉಭಯ ಸಂಕಟ

ಇದೇ ಭಯ ಎಚ್ ಡಿ ಕುಮಾರಸ್ವಾಮಿ ಮತ್ತು ಡಾ.ಜಿ. ಪರಮೇಶ್ವರ್ ಅವರನ್ನು ಸಹ ಕಾಡುತ್ತಿದೆ ಎನ್ನಲಾಗಿದೆ.

ಟಿಪ್ಪು ಜಯಂತಿ ಆಚರಣೆ ವೇಳೆ ಕೊಡಗಿನಲ್ಲಿ ನಡೆದ ಘರ್ಷಣೆಯಲ್ಲಿ ಬಲಿಯಾದ ಕುಟ್ಟಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ, ತಾವು ಮುಖ್ಯಮಂತ್ರಿ ಆದರೆ ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಹೇಳಿದ್ದರು.

ಆದರೆ, ಸಮ್ಮಿಶ್ರ ಸರ್ಕಾರದ ಉಭಯ ಸಂಕಟಕ್ಕೆ ಸಿಲುಕಿರುವ ಅವರು, ಸರ್ಕಾರದ ವತಿಯಿಂದಲೇ ಆಚರಣೆ ಮುಂದಿವರಿಸಿದ್ದಾರೆ. ಈ ಕಾರಣಕ್ಕಾಗಿ ಅವರು ಅನಾರೋಗ್ಯದ ನೆಪವೊಡ್ಡಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಧಾರ್ಮಿಕ ನಂಬಿಕೆಯುಳ್ಳ ಕುಮಾರಸ್ವಾಮಿ ಟಿಪ್ಪು ಜಯಂತಿಯಿಂದ ದೂರ ಉಳಿಯಲು ಆ ನಕಾರಾತ್ಮಕ ಅಂಶವೂ ಒಂದು ಕಾರಣ ಎಂದು ಹೇಳಲಾಗಿದೆ.

ಎಚ್ಡಿಕೆ ತಾವು ಸಿಎಂ ಆದ್ರೆ ಟಿಪ್ಪು ಜಯಂತಿ ಆಚರಿಸೊಲ್ಲ ಎಂದಿದ್ರು: ಈಶ್ವರಪ್ಪಎಚ್ಡಿಕೆ ತಾವು ಸಿಎಂ ಆದ್ರೆ ಟಿಪ್ಪು ಜಯಂತಿ ಆಚರಿಸೊಲ್ಲ ಎಂದಿದ್ರು: ಈಶ್ವರಪ್ಪ

ನಾಯಕರಲ್ಲಿ ವಿರೋಧ

ನಾಯಕರಲ್ಲಿ ವಿರೋಧ

ಡಾ. ಜಿ. ಪರಮೇಶ್ವರ್ ಸೇರಿದಂತೆ ಅನೇಕರು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರೂ, ಅವರಲ್ಲಿ ಈಗ ಬೆಳೆಯುತ್ತಿರುವ ನಂಬಿಕೆ ಸಣ್ಣನೆ ಭಯಬಿತ್ತುತ್ತಿದೆ. ಮಾತ್ರವಲ್ಲ, ಪ್ರತಿ ಬಾರಿಯೂ ಟಿಪ್ಪು ಜಯಂತಿಯನ್ನು ನಿಷೇಧಾಜ್ಞೆ ವಿಧಿಸಿ ಪೊಲೀಸ್ ಭದ್ರತೆಯನ್ನು ಆಯೋಜಿಸುವ ಪ್ರಯೋಜನವೇನು? ಅದರ ಅಗತ್ಯವೇನಿದೆ ಎಂಬ ಪ್ರಶ್ನೆಗಳನ್ನೂ ಮುಂದಿಡುತ್ತಿದ್ದಾರೆ.

ರೇವಣ್ಣ ಹೇಳಿದ್ದೇನು?

ರೇವಣ್ಣ ಹೇಳಿದ್ದೇನು?

ಟಿಪ್ಪು ಜಯಂತಿ ಆಚರಣೆ ಮತ್ತು ಅದರ ಶಾಪದ ಬಗ್ಗೆ ಸಚಿವ ಎಚ್ ಡಿ ರೇವಣ್ಣ ಇನ್ನೊಂದು ಆಯಾಮದ ವಿಚಾರ ಮಂಡಿಸಿದ್ದಾರೆ.

104 ಸೀಟುಗಳನ್ನು ಗೆದ್ದಿದ್ದರೂ ಬಿಜೆಪಿಗೆ ಅಧಿಕಾರ ಸಿಗದೆ ಇರಲು ಟಿಪ್ಪು ಸುಲ್ತಾನ್ ಶಾಪವೇ ಕಾರಣ ಎಂದು ರೇವಣ್ಣ ವಿಶ್ಲೇಷಿಸಿದ್ದಾರೆ. ಟಿಪ್ಪು ಜಯಂತಿ ಆಚರಿಸುತ್ತಿರುವುದರಿಂದ ಕಾಂಗ್ರೆಸ್ ಮತ್ತೆ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಲ್ಲಿದೆ ಎಂದು ರೇವಣ್ಣ ಹೇಳಿದ್ದಾರೆ.

ಬಿಜೆಪಿಗೆ ಅಧಿಕಾರ ತಪ್ಪಲು ಟಿಪ್ಪು ಸುಲ್ತಾನ್ ಶಾಪವೇ ಕಾರಣ, ರೇವಣ್ಣಬಿಜೆಪಿಗೆ ಅಧಿಕಾರ ತಪ್ಪಲು ಟಿಪ್ಪು ಸುಲ್ತಾನ್ ಶಾಪವೇ ಕಾರಣ, ರೇವಣ್ಣ

English summary
Celebrating Tippu could be a curse? Siddaramaiah loses his constituency, Vijay Mallya became bankrupt, Sanjay Khan's serial set burnt, even BJP leaders faced crisis. There is a fear among political party leaders on celebrating Tippu Jayanti?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X