ಗಿರೀಶ್ ಕಾರ್ನಾಡರ ನಿಧನಕ್ಕೆ ಟ್ವಿಟ್ಟರ್ನಲ್ಲಿ ಗಣ್ಯರ ಸಂತಾಪ
ಬೆಂಗಳೂರು, ಜೂನ್ 10: ಸಾಹಿತಿ, ನಾಟಕಕಾರ, ನಿರ್ದೇಶಕ, ನಟ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ್ (81) ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ವಿವಿಧ ರಂಗಗಳಲ್ಲಿ ಸಕ್ರಿಯರಾಗಿದ್ದ ಗಿರೀಶ ಕಾರ್ನಾಡ್ ಅವರ ಒಡನಾಟ ಹೊಂದಿದ್ದ ವರ್ಗ ಅಪಾರ. ಸಾಹಿತ್ಯ ಪ್ರೇಮಿಗಳು, ರಂಗಭೂಮಿ ಪ್ರಿಯರು, ಸಿನಿಮಾ ಒಲವುಳ್ಳವರು, ಸಮಾನ ಮನಸ್ಕ ಚಿಂತಕ ಬಳಗ- ಹೀಗೆ ಅವರ ಕ್ಷೇತ್ರ ಬಹು ವಿಸ್ತಾರವಾಗಿತ್ತು. ರಾಜಕೀಯದ ಮುಖಂಡರ ಗೆಳೆತನವೂ ಇತ್ತು. ತಮ್ಮ ಚಿಂತನೆಗಳ ಮೂಲಕ ಪರ-ವಿರೋಧ ವಲಯವನ್ನು ಸೃಷ್ಟಿಸಿಕೊಂಡಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ
ತಮ್ಮ ಸಾಹಿತ್ಯದ ಜತೆಗೆ ಬಣ್ಣದ ಬದುಕು ಹಾಗೂ ಸೈದ್ಧಾಂತಿಕ ನಿಲುವುಗಳ ಮೂಲಕ ದೇಶದ ಮೂಲೆ ಮೂಲೆಯಲ್ಲಿಯೂ ತಮ್ಮದೇ ಪ್ರಭಾವಳಿ ಹುಟ್ಟುಹಾಕಿದ್ದರು. ಹಾಗೆಯೇ ಅಭಿಮಾನಿಗಳ ಸಂಖ್ಯೆಯೂ ಹಿರಿದಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡರ ಗುಣಗಾನ ಮಾಡುವ ಅನೇಕ ಬರಹಗಳು ಕಾಣಿಸುತ್ತಿವೆ. ಅವರನ್ನು ಭೇಟಿಯಾದ ಕ್ಷಣ, ವಿವಿಧ ರಂಗಗಳಿಗೆ ಅವರು ನೀಡಿದ ಕೊಡುಗೆಗಳು, ಅವರ ಬೌದ್ಧಿಕ, ಪ್ರಗತಿಪರ ನಿಲುವು ಮುಂತಾದವುಗಳ ಬಗ್ಗೆ ಸಮಾನ ಅಭಿಪ್ರಾಯವುಳ್ಳವರು, ಅವರ ಗೆಳೆಯರು, ಸೈದ್ಧಾಂತಿಕ ವಿರೋಧಿಗಳು ಕೂಡ ಕಾರ್ನಾಡರ ಸಾಧನೆಯನ್ನು ಸ್ಮರಿಸಿ ಅವರಿಗೆ ಗೌರವ ಅರ್ಪಿಸಿದ್ದಾರೆ.
ಕಾರ್ನಾಡರ ನಿಧನದ ಕುರಿತು ಟ್ವಿಟ್ಟರ್ನಲ್ಲಿ ವ್ಯಕ್ತವಾಗಿರುವ ಕೆಲವು ಸಂತಾಪ, ಅಭಿಪ್ರಾಯಗಳು ಇಲ್ಲಿವೆ.
ಎಚ್ ಡಿ ದೇವೇಗೌಡದುಃಖವನ್ನು ಭರಿಸುವ ಶಕ್ತಿಕೊಡಲಿ
ಕನ್ನಡಕ್ಕೆ 7 ನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಅಭಿಮಾನಿ ವರ್ಗ ಹಾಗೂ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಸಾಂಸ್ಕೃತಿಕ ರಾಯಭಾರಿ
ಜ್ಞಾನಪೀಠ ಪುರಸ್ಕೃತ ಸಾಹಿತಿ ಮತ್ತು ಖ್ಯಾತ ನಟ/ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ಅಗಲುವಿಕೆಯ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಅವರ ಸಾಹಿತ್ಯಿಕ, ರಂಗಭೂಮಿ ಮತ್ತು ಸಿನಿಮಾ ರಂಗಕ್ಕೆ ಅವರ ಅಭೂತಪೂರ್ವ ಕೊಡುಗೆ ಸದಾ ಸ್ಮರಣೀಯ. ಅವರ ಸಾವಿನ ಮೂಲಕ ನಾವು ಸಾಂಸ್ಕೃತಿಕ ರಾಯಭಾರಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಗಿರೀಶ್ ಕಾರ್ನಾಡ್ ಅಗಲುವಿಕೆಗೆ ಹಿರಿಯ ಸಾಹಿತಿಗಳ ಸಂತಾಪ
ಕಾರ್ನಾಡರ ಸಾವು ದುಃಖಕರ
ಹಿರಿಯ ನಟ-ನಾಟಕಕಾರ ಮತ್ತು ಜ್ಞಾನಪೀಠ ಪುರಸ್ಕೃತ ಗಿರೀಶ ಕಾರ್ನಾಡ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರ ಮಗ ರಘು ಕಾರ್ನಾಡ್ ಮತ್ತು ಅವರ ಕುಟುಂಬದವರಿಗೆ ನನ್ನ ಸಂತಾಪಗಳು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದರಾರೆ.
ಸಾಂಸ್ಕೃತಿಕ ಲೋಕ ಬಡವಾಯಿತು
ಸಾಹಿತಿ, ನಟ ಮತ್ತು ಭಾರತೀಯ ರಂಗಭೂಮಿಯ ಗೌರವಾನ್ವಿತ ವ್ಯಕ್ತಿ ಗಿರೀಶ್ ಕಾರ್ನಾಡ್ ಅವರ ನಿಧನದ ಸಂಗತಿ ತಿಳಿದು ದುಃಖವಾಯಿತು. ಇಂದು ನಮ್ಮ ಸಾಂಸ್ಕೃತಿಕ ಪ್ರಪಂಚ ಬಡವಾಯಿತು. ಅವರ ಕುಟುಂಬಕ್ಕೆ ಮತ್ತು ಅವರ ಕಾರ್ಯಗಳನ್ನು ಅನುಸರಿಸಿದವರಿಗೆ ನನ್ನ ಸಂತಾಪಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
ತೀಕ್ಷ್ಣ ಬುದ್ಧಿಜೀವಿ
ಗಿರೀಶ ಕಾರ್ನಾಡ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಪ್ರತಿಭಾವಂತ ಹಾಸ್ಯ ಮತ್ತು ತೀಕ್ಷ್ಣ ಬೌದ್ಧಿಕತೆಯನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ನಟಿ ಶ್ರುತಿ ಹಾಸನ್ ಸಂತಾಪ ಸೂಚಿಸಿದ್ದಾರೆ.
ಬೆಳಗಿನ ದುರ್ವಾರ್ತೆ
ಹಿರಿಯ, ಖ್ಯಾತ ನಟ ಮತ್ತು ನಾಟಕಕಾರ ಗಿರೀಶ ಕಾರ್ನಾಡ್ ಅವರ ನಿಧನದ ದುಃಖಕರ ಸುದ್ದಿ ಬೆಳಿಗ್ಗೆ ತಿಳಿಯಿತು. ಗಿರೀಶ್ ಅವರ ದೃಷ್ಟಿಕೋನಗಳು ಮತ್ತು ಕಲಾವಿದನಾಗಿ ನೀಡಿದ ಕೊಡುಗೆಗಳನ್ನು ದೇಶ ಮಿಸ್ ಮಾಡಿಕೊಳ್ಳಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದುಃಖಿಸಿದ್ದಾರೆ.
ಶ್ರೀಮಂತಗೊಳಿಸಿದ ಅದಮ್ಯ ಚೇತನ
ಕನ್ನಡವನ್ನು, ಕನ್ನಡಿಗರನ್ನು ಕರ್ನಾಟಕವನ್ನು ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ. ನೀವು ಮುನ್ನಡೆಸಿದ ಸಮೃದ್ಧಗೊಳಿಸುವ, ಸಬಲೀಕರಣದ, ಸ್ಫೂರ್ತಿದಾಯಕ ಬದುಕಿಗಾಗಿ ಧನ್ಯವಾದಗಳು. ನಿಮ್ಮೊಂದಿಗೆ ಜೀವಿಸಿದ ಪ್ರತಿ ಕ್ಷಣವೂ ಜೀವಂತ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಪರಂಪರೆಯನ್ನು ಉಳಿಸಿಹೋಗಿದ್ದಾರೆ
ಪದ್ಮಭೂಷಣ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರೊಬ್ಬ ಪ್ರಮುಖ ನಾಟಕಕಾರ, ನಿರ್ದೇಶಕ, ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ. ಬಹುದೊಡ್ಡ ಪರಂಪರೆಯನ್ನು ಅವರು ಉಳಿಸಿ ಹೋಗಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಅವರು ಸ್ಮರಣೀಯರು
ಈ ದುಃಖದ ಸಂದರ್ಭದಲ್ಲಿ ಗಿರೀಶ ಕಾರ್ನಾಡ್ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಸಂತಾಪಗಳು. ಅವರ ಸಮೃದ್ಧ ಬರಹಗಳು, ಭಾರತೀಯ ಸಂಸ್ಕೃತಿಗೆ ಅವರ ಕೊಡುಗೆ ಮತ್ತು ಸಾಮಾಜಿಕ ನ್ಯಾಯದ ಅವರ ಹೋರಾಟಕ್ಕಾಗಿ ಅವನ್ನು ಸದಾ ಸ್ಮರಿಸಿಕೊಳ್ಳುತ್ತೇವೆ ಎಂದು ಭಾರತೀಯ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
ಕಲಾ ಜಗತ್ತಿಗೆ ಅಪಾರ ನಷ್ಟ
ಗಿರೀಶ್ ಕಾರ್ನಾಡ್ ಅವರ ದುಃಖಕರ ಸಾವಿನ ಸುದ್ದಿ ಕೇಳಿ ತೀವ್ರ ಬೇಸರವಾಯಿತು. ಅವರೊಬ್ಬ ಪ್ರತಿಭಾನ್ವಿತ ಕಲಾವಿದ. ಅವರ ನಿಧನದಿಂದ ಕಲಾ ಜಗತ್ತಿಗೆ ದೊಡ್ಡ ನಷ್ಟ ಎಂದು ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಸಂತಾಪ ಸೂಚಿಸಿದ್ದಾರೆ.