ಯಮಕನಮರಡಿ ಕ್ಷೇತ್ರ : ಸತೀಶ್ v/s ಲಖನ್ ಜಟಾಪಟಿ
ಬೆಳಗಾವಿ, ಮಾರ್ಚ್ 22 : ಸಹೋದರರ ನಡುವಿನ ಸ್ಪರ್ಧೆಯ ಕಾರಣಕ್ಕಾಗಿ ಕುತೂಹಲ ಕೆರಳಿಸಿರುವ ಕ್ಷೇತ್ರ ಬೆಳಗಾವಿ ಜಿಲ್ಲೆಯ ಯಮಕನಮರಡಿ. 2008ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಮೂರನೇ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ.
ಜಾರಕಿಹೊಳಿ ಕುಟುಂಬ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಹಾಗೂ ಪ್ರಭಾವಿ ಕುಟುಂಬ. ಕುಟುಂಬದಲ್ಲಿ ಮೂವರು ಶಾಸಕರಿದ್ದಾರೆ. ಇಬ್ಬರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ, ಒಬ್ಬರು ಬಿಜೆಪಿ ಜೊತೆಗಿದ್ದಾರೆ. ಈಗ ಮತ್ತೊಬ್ಬರು ಬಿಜೆಪಿ ಸೇರಲು ವೇದಿಕೆ ಸಿದ್ಧವಾಗಿದೆ.
ಲಖನ್ ಜಾರಕಿಹೊಳಿ ಬಿಜೆಪಿಗೆ, ಸತೀಶ್ ಜಾರಕಿಹೊಳಿ ವಿರುದ್ಧ ಸ್ಪರ್ಧೆ?
ಯಮಕನಮರಡಿ ಕ್ಷೇತ್ರದ ಹಾಲಿ ಶಾಸಕರು ಸತೀಶ್ ಜಾರಕಿಹೊಳಿ. ಮಾಜಿ ಸಚಿವ, ಎಐಸಿಸಿ ಕಾರ್ಯದರ್ಶಿ ಆಗಿರುವ ಅವರು, 2018ರ ಚುನಾವಣೆಯಲ್ಲಿಯೂ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಟಿಕೆಟ್ ನಿರಾಕರಿಸಲು ಕಾಂಗ್ರೆಸ್ ಪಕ್ಷದ ಬಳಿ ಕಾರಣವೂ ಇಲ್ಲ.
ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲು 'ಮಿಷನ್ 12' ತಂತ್ರ!
ಮೊದಲ ಬಾರಿ ಚುನಾವಣಾ ಕಣಕ್ಕಿಳಿಯುತ್ತಿರುವ ಸತೀಶ್ ಜಾರಕಿಹೊಳಿ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ಪಕ್ಷವನ್ನು ಸೇರಿ ಸಹೋದರನ ವಿರುದ್ಧವೇ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಸಹೋದರರ ಸವಾಲ್ ಕಾರಣದಿಂದಲೇ ಕ್ಷೇತ್ರದ ಚುನಾವಣಾ ಕುತೂಹಲ ಹೆಚ್ಚಿಸಿದೆ.
ಸತೀಶ್ ಜಾರಕಿಹೊಳಿ 2 ಸಲ ಗೆದ್ದಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಏಕೈಕ ಕ್ಷೇತ್ರ ಯಮಕನಮರಡಿ. 2008ರಲ್ಲಿ ಕ್ಷೇತ್ರ ಅಸ್ತತ್ವಕ್ಕೆ ಬಂದಿತು. ನಂತರ ನಡೆದ ಎರಡು ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.
2008ರಲ್ಲಿ 46,132 ಮತಗಳನ್ನು ಪಡೆದು ಜೆಡಿಎಸ್ ಪಕ್ಷದ ಮಾಲಗೌಡ ಪಾಟೀಲ್ ವಿರುದ್ಧ ಜಯಗಳಿಸಿದರು. 2013ರ ಚುನಾವಣೆಯಲ್ಲಿ 70,726 ಮತಗಳನ್ನು ಪಡೆದು ಬಿಜೆಪಿಯ ಮಾರುತಿ ಅಷ್ಟಗಿ ವಿರುದ್ಧ ಜಯಗಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿಯೂ ಅವರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಣೆ ಮಾಡಲು ಕಾರಣವೂ ಇಲ್ಲ.
ಲಖನ್ ಜಾರಕಿಹೊಳಿ ಸ್ಪರ್ಧೆ
ಯಮಕನಮರಡಿ ಕ್ಷೇತ್ರದಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಮೊದಲ ಬಾರಿಗೆ ಲಖನ್ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಬಿಜೆಪಿ ಸೇರುವುದಾಗಿ ಅವರು ಹೇಳಿದ್ದಾರೆ.
ಲಖನ್ ಬಿಜೆಪಿ ಸೇರಿ ಯಮನಕರಡಿ ಕ್ಷೇತ್ರದಿಂದ ಕಣಕ್ಕೆ ಇಳಿದರೆ ಸಹೋದರರ ನಡುವಿನ ಸ್ಪರ್ಧೆಯಿಂದಾಗಿ ಕ್ಷೇತ್ರ ಕುತೂಹಲ ಮೂಡಿಸಲಿದೆ. ಲಖನ್ ಬಿಜೆಪಿ ಸೇರಲು ಮಾಜಿ ಸಚಿವ ಉಮೇಶ್ ಕತ್ತಿ ಮಧ್ಯಸ್ಥಿಕೆ ವಹಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಮತ್ತೊಂದು ಕಡೆ ಕಳೆದ ಬಾರಿ ಸತೀಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಮಾರುತಿ ಅಷ್ಟಗಿ ಅವರಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಅವರು ಪಡೆದ ಮತಗಳು 46,376.
ರಮೇಶ್ ಜಾರಕಿಹೊಳಿ ಬೆಂಬಲ
ಲಖನ್ ಜಾರಕಿಹೊಳಿ ಅವರ ರಾಜಕೀಯ ಪ್ರವೇಶಕ್ಕೆ ರಮೇಶ್ ಜಾರಕಿಹೊಳಿ ಬೆಂಬಲವಾಗಿ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು. ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.
ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ಅಸಮಾಧಾನವಿದೆ. ರಮೇಶ್ ಜಾರಕಿಹೊಳಿ ಅವರು ಸಚಿವರಾದ ಬಳಿಕ ಸಹೋದರರ ನಡುವೆ ಅಸಮಾಧಾನ ಹೆಚ್ಚಿದೆ.
ರಾಯಚೂರಿನಿಂದ ಸ್ಪರ್ಧೆ
ಕೆಲವು ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಅವರು. 'ರಾಯಚೂರಿನಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲಾಗುತ್ತದೆ' ಎಂದು ಹೇಳಿದ್ದರು.
ರಮೇಶ್ ಜಾರಕಿಹೊಳಿ ಹೇಳಿಕೆ ಬಳಿಕ ಸಹೋದರರ ನಡುವೆ ಅಸಮಾಧಾನ ಹೆಚ್ಚಿದೆ. 'ನಾನು ಕ್ಷೇತ್ರ ತೊರೆಯಬೇಕು ಎಂದು ಹೇಳಲು ಅವರು ಯಾರು?' ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದರು.
ಕುಟುಂಬದಲ್ಲಿ ಮೂವರು ಶಾಸಕರು
ಜಾರಕಿಹೊಳಿ ಕುಟುಂಬದಲ್ಲಿ ಮೂವರು ಶಾಸಕರಿದ್ದಾರೆ
ರಮೇಶ್ ಜಾರಕಿಹೊಳಿ - ಸಣ್ಣ ಕೈಗಾರಿಕೆ ಸಚಿವರು (ಗೋಕಾಕ ಕ್ಷೇತ್ರದ ಶಾಸಕ)
ಸತೀಶ್ ಜಾರಕಿಹೊಳಿ - ಯಮಕನಮರಡಿ ಕ್ಷೇತ್ರದ ಶಾಸಕ (ಮಾಜಿ ಸಚಿವ)
ಬಾಲಚಂದ್ರ ಜಾರಕಿಹೊಳಿ - ಬಾಲಚಂದ್ರ ಜಾರಕಿಹೊಳಿ (ಬಿಜೆಪಿ ನಾಯಕ, ಅರಭಾವಿ ಕ್ಷೇತ್ರದ ಶಾಸಕ)