ನಾಯಕರ ಕಸರತ್ತು ಏನೇ ಇರಲಿ, ಅಂತಿಮ ತೀರ್ಮಾನ ಮತದಾರರದ್ದೇ!
ಬೆಂಗಳೂರು, ಆಗಸ್ಟ್ 05; ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವುದರಿಂದ ರಾಜ್ಯಮಟ್ಟದಲ್ಲಿ ರಾಜಕೀಯ ಪಕ್ಷಗಳ ನಾಯಕರು ನಮ್ಮ ಪಕ್ಷದ ಮುಂದಿನ ಗೆಲುವು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.
ಇತ್ತ ಕ್ಷೇತ್ರಗಳಲ್ಲಿರುವ ಒಂದಷ್ಟು ನಾಯಕರು ಕಣಕ್ಕಿಳಿಯಲು ಟಿಕೆಟ್ಗಾಗಿ ಈಗಿನಿಂದಲೇ ಕಸರತ್ತು ನಡೆಸುತ್ತಿದ್ದಾರೆ. ಆದರೆ ಕಸರತ್ತು, ತಂತ್ರ ಮಾಡಿ ಕಣಕ್ಕಿಳಿದರೂ ಕೂಡ ಅಂತಿಮವಾಗಿ ಯಾರನ್ನು ಗೆಲ್ಲಿಸಬೇಕೆಂದು ತೀರ್ಮಾನ ಮಾಡುವವರು ಮತದಾರರೇ.
ಮಂಡ್ಯ ಮೇಲೆ ಬಿಜೆಪಿ ಕಣ್ಣು; ಆಪರೇಷನ್ ಕಮಲಕ್ಕೆ ಮುಹೂರ್ತ ಫಿಕ್ಸ್?
ವಿಧಾನಸಭಾ ಚುನಾವಣೆಗೆ ಕೇವಲ ಎಂಟು ತಿಂಗಳಷ್ಟೆ ಬಾಕಿಯಿದೆ. ಎಂಟು ತಿಂಗಳಲ್ಲಿ ರಾಜಕೀಯ ಬೆಳವಣಿಗೆಗಳು ಹೇಗೆ ಬೇಕಾದರೂ ತಿರುವು ಪಡೆದುಕೊಳ್ಳಬಹುದು. ಆದ್ದರಿಂದ ಅಧಿಕಾರ ಮತ್ತು ಸ್ಥಾನಮಾನಕ್ಕಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಬಹಳಷ್ಟು ನಾಯಕರು ಕೊನೆಗಳಿಗೆಯಲ್ಲಿ ತಮ್ಮ ಪಕ್ಷ ನಿಷ್ಠೆ ಬದಲಾಯಿಸುವ ಸಾಧ್ಯತೆಯೂ ಹೆಚ್ಚಿದೆ.
ಸಮೀಕ್ಷೆಯಲ್ಲಿ ಪಾಸ್ ಆದ್ರೇ ಮಾತ್ರ ವಿಧಾನಸಭೆ ಟಿಕೆಟ್?
ಈ ರೀತಿ ಪಕ್ಷ ಬದಲಾಯಿಸುವ ನಾಯಕರು ಪ್ರಭಾವಿಗಳು ಮತ್ತು ವೈಯಕ್ತಿಕ ವರ್ಚಸ್ಸು ಹೊಂದಿರುವ ಕಾರಣದಿಂದ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ನಾಯಕರಾಗಿರುತ್ತಾರೆ. ಇಂತಹ ಕೆಲವು ನಾಯಕರಿಂದ ಪಕ್ಷದಲ್ಲಿ ತಳಮಟ್ಟದಿಂದ ದುಡಿದು ಮೇಲೆ ಬಂದ ಅಥವಾ ಈಗಾಗಲೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾಯಕರಿಗೆ ಅನ್ಯಾಯವಾಗುತ್ತಿದೆ.
ಮೈಸೂರು ಬಿಟ್ಟು ದಾವಣಗೆರೆಯಲ್ಲಿ ಹುಟ್ಟುಹಬ್ಬ ಏಕೆ? ಸಿದ್ದರಾಮಯ್ಯರನ್ನು ಕಾಡಿದ ಆ ನೋವು ಯಾವುದು?
ಟಿಕೆಟ್ ಪಡೆಯಲು ನಾನಾ ಕಸರತ್ತು
ರಾಜಕೀಯದಲ್ಲಿ ಪಕ್ಷದ ಗೆಲುವು ಮತ್ತು ಅಧಿಕಾರಕ್ಕೆ ಬರಲು ಮ್ಯಾಜಿಕ್ ಸಂಖ್ಯೆ ಅಗತ್ಯವಾಗಿರುವುದರಿಂದ ಕೊನೆಗಳಿಗೆಯಲ್ಲಿ ಅಧಿಕಾರದ ಮುಂದೆ ಸಿದ್ಧಾಂತಗಳನ್ನೆಲ್ಲ ಬದಿಗೆ ಸರಿಸಿ ಗೆಲ್ಲುವ ಕುದುರೆಯ ಬಾಲ ಹಿಡಿಯುವ ಪ್ರವೃತ್ತಿ ಜಾಸ್ತಿ. ಈ ಕಾರಣದಿಂದಾಗಿ ತಳಮಟ್ಟದಲ್ಲಿ ಗುರುತಿಸಿಕೊಂಡು ತಾನು ಕೂಡ ಶಾಸಕನಾಗಬೇಕೆಂದು ಕನಸು ಕಾಣುವ ಬಹುತೇಕ ನಾಯಕರ ಬಯಕೆಗಳು ಈಡೇರುವುದು ಕಷ್ಟಸಾಧ್ಯವಾಗಿದೆ.
ಆದರೂ ಒಂದಷ್ಟು ನಾಯಕರು ರಾಜಕೀಯ ದೃಷ್ಟಿಯಿಂದಲೇ ಹೆಚ್ಚು, ಹೆಚ್ಚಾಗಿ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಜನರ ನಡುವೆ ಹೋಗುತ್ತಿದ್ದಾರೆ. ಮತ್ತೊಂದಷ್ಟು ನಾಯಕರು ಕೊರೊನಾ ಸಮಯದಲ್ಲಿ ಜನರಿಗೆ ಊಟ, ದಿನಸಿ ಸಾಮಗ್ರಿಗಳು, ಇನ್ನಿತರ ಪದಾರ್ಥಗಳನ್ನು ನೀಡುವ ಮೂಲಕ ಜನನಾಯಕನಾಗುವ ಕಸರತ್ತು ಮಾಡಿದ್ದರು. ಆದರೆ ಕ್ಷೇತ್ರದಲ್ಲಿರುವ ನಾಯಕರು ಏನೇ ಸಮಾಜ ಸೇವೆ ಮಾಡಿ ಜನರಿಗೆ ಹತ್ತಿರವಾಗಿದ್ದರೂ ಅಂತಿಮವಾಗಿ ಸ್ಪರ್ಧೆಗೆ ಟಿಕೆಟ್ ನೀಡುವವರು ಪಕ್ಷದ ರಾಜ್ಯಮಟ್ಟದ ನಾಯಕರಾಗಿದ್ದಾರೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ? ಎಂಬುದು ಕೂಡ ಮುಖ್ಯವಾಗುತ್ತದೆ.
ಹಿರಿಯ ನಾಯಕರ ಕೃಪಾಶೀರ್ವಾದ ಅಗತ್ಯ
ರಾಜಕೀಯದಲ್ಲಿ ಕೆಲವರು ಪಕ್ಷಕ್ಕೆ ಕಾರ್ಯಕರ್ತರಾಗಿ ಸೇರಿ ಸಣ್ಣಪುಟ್ಟ ನಾಯಕರಾಗಿ ಬೆಳೆದು ಜನರ ನಡುವೆ ಗುರುತಿಸಿಕೊಂಡು, ಪೊಲೀಸರ ಲಾಠಿ ಏಟು ತಿಂದು ಹೋರಾಟ ಮಾಡಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಮೇಲ್ಮಟ್ಟದ ನಾಯಕರ ಕೃಪಕಟಾಕ್ಷ ಇಲ್ಲದಿದ್ದರೆ ಅವರು ಬೆಳೆಯುವುದು ಕಷ್ಟವೇ. ಹೀಗಾಗಿ ಕೆಲವರು ಪಕ್ಷದಲ್ಲಿ ಕಾರ್ಯಕರ್ತರಾಗಿಯೇ ಕೊನೆತನಕ ಉಳಿದು ಹೋದವರೂ ಅಚ್ಚರಿಪಡಬೇಕಾಗಿಲ್ಲ. ಇನ್ನು ಕೆಲವರು ಗಿಮಿಕ್ ಮಾಡಿ ರಾಜಕೀಯದಲ್ಲಿ ಬೆಳೆದು ಸ್ಥಾನಮಾನ ಗಿಟ್ಟಿಸಿಕೊಂಡು ಬಿಡುತ್ತಾರೆ.
ಗಾಢ್ ಫಾದರ್ ಇಲ್ಲದೇ ಬೆಳೆಯುವುದು ಅಸಾಧ್ಯ
ಕೆಲವರು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಹರಸಾಹಸ ಮಾಡಿ ಹಿರಿಯ ನಾಯಕರ ಕಾಲು ಹಿಡಿದು ಟಿಕೆಟ್ ಪಡೆದು ಹಗಲು ರಾತ್ರಿ ಎನ್ನದೇ, ಮತದಾರರ ಮನೆ ಬಾಗಿಲು ತಟ್ಟಿ ಕೊನೆಗೆ ಕಷ್ಟದಲ್ಲಿಯೇ ಗೆದ್ದು ನಾಯಕರಾದರೆ, ಮತ್ತೆ ಕೆಲವರು ಹಿರಿಯ ನಾಯಕರ ಬೆಂಬಲದಿಂದ ಕ್ಷೇತ್ರದಲ್ಲಿ ಸ್ಪರ್ಧಿಸಿ ನಿರಾಯಾಸವಾಗಿ ಗೆಲುವು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಬಿಡುತ್ತಾರೆ.
ಒಂದೆಡೆ ಜಾತಿ, ಧರ್ಮವನ್ನು ಮೀರಿ ಬೆಳೆಯಬೇಕೆಂಬ ಗಿಣಿಪಾಠವನ್ನು ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳುತ್ತಾ ಹೇಳುತ್ತಾ ಬಂದರೂ ಕೂಡ ರಾಜಕೀಯದಲ್ಲಿ ಸಮುದಾಯದ ಬೆಂಬಲ, ಹಿರಿಯ ನಾಯಕರ ಕೃಪಾಶೀರ್ವಾದ, ಆರ್ಥಿಕ ಬಲ ಇಲ್ಲದೆ ಹೋದರೆ ಬೆಳೆಯುವುದು ಕಷ್ಟವೇ. ಕೆಲವೊಮ್ಮೆ ಕ್ಷೇತ್ರದಲ್ಲಿ ಜನ ಬೆಂಬಲ ಇದ್ದರೂ ಗಾಢ್ ಫಾದರ್ ಇಲ್ಲದೆ ಹೋದರೆ ಮುನ್ನಡೆಯುವುದು ಅಸಾಧ್ಯವೇ.
ಹಿರಿಯಲು ಅಧಿಕಾರ ಬಿಡುತ್ತಿಲ್ಲ, ಕಿರಿಯರಿಗೆ ಸಿಗುತ್ತಿಲ್ಲ
ಈಗಾಗಲೇ ರಾಜಕೀಯ ಪಕ್ಷದ ಉನ್ನತ ಸ್ಥಾನದಲ್ಲಿರುವ ಹಿರಿಯ ನಾಯಕರು ತಮ್ಮ ಮಕ್ಕಳನ್ನು ರಾಜಕೀಯವಾಗಿ ಬೆಳೆಸುತ್ತಿದ್ದಾರೆ. ಜತೆಗೆ ತಾವು ತಮ್ಮ ಸ್ಥಾನವನ್ನು ಯುವ ನಾಯಕರಿಗೆ ಬಿಟ್ಟುಕೊಟ್ಟು ನಿವೃತ್ತಿ ಪಡೆಯುವ ಮಾತನಾಡುತ್ತಿಲ್ಲ. ಇದರಿಂದಾಗಿ ನಾಯಕರು ತಾವು ಮತ್ತು ತಮ್ಮ ಕುಟುಂಬ ವರ್ಗವಷ್ಟೆ ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಬೇರೆಯವರಿಗೆ ಅವಕಾಶವೇ ಇಲ್ಲದಂತಾಗಿದೆ. ಕೆಲವು ನಾಯಕರಂತು ಪಕ್ಷದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಕಳೆದ ಕೆಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅದನ್ನು ಪ್ರಚಾರ ಮಾಡಿ ಪಕ್ಷದ ಹಿರಿಯ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲೂ ಬಹುದು. ಅಲ್ಲದೆ ಪಕ್ಷದ ವತಿಯಿಂದ ಟಿಕೆಟ್ ಸಿಗದೆ ಹೋದರೆ ಅಂತಹವರು ತಿರುಗಿ ಬಿದ್ದು ಚುನಾವಣೆಯಲ್ಲಿ ತಟಸ್ಥರಾಗಿದ್ದು ಬಿಡಬಹುದು. ರಾಜಕೀಯದಲ್ಲಿ ಎಲ್ಲವೂ ಸರಿಯಿದೆ. ಎಲ್ಲರೂ ನಮ್ಮವರೇ ಎನ್ನಲಾಗುವುದಿಲ್ಲ. ಚುನಾವಣೆ ತನಕ ಪಕ್ಷಕ್ಕೆ ನಿಷ್ಠಾವಂತರಾಗಿದ್ದವರು ಕೊನೆಗಳಿಗೆಯಲ್ಲಿ ತಿರುಗಿ ಬಿದ್ದರೂ ಅಚ್ಚರಿಪಡಬೇಕಾಗಿಲ್ಲ. ಆದರೂ ರಾಜಕೀಯದಲ್ಲಿ ಹೀಗೆಯೇ ಆಗುತ್ತದೆ ಎಂಬುದನ್ನು ನಿರೀಕ್ಷೆ ಮಾಡುವುದು ಅಸಾಧ್ಯವೇ.
Recommended Video
ಏನೇ ಆದರೂ ಮತದಾರರ ತೀರ್ಮಾನ ಅಂತಿಮ
ಸದ್ಯಕ್ಕೆ ಎಲ್ಲರ ಮುಂದೆ ಇರುವುದು 2023ರ ವಿಧಾನಸಭಾ ಚುನಾವಣೆಯಾಗಿದೆ. ಈ ಬಾರಿಯ ಚುನಾವಣೆಗೆ ಎಎಪಿ ಪಕ್ಷವೂ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಜತೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದು ಮೂರು ಪಕ್ಷಗಳ ನಾಯಕರು ಕೂಡ ನಮ್ಮದೇ ಗೆಲುವು ಎಂಬ ವಿಶ್ವಾಸದಲ್ಲಿ ಬೀಗುತ್ತಿದ್ದಾರೆ.
ಅದು ಏನೇ ಇರಲಿ ಅಧಿಕಾರದ ವಿಚಾರ ಬಂದಾಗ ಯಾರು ಯಾರಿಗೆ ಮಿತ್ರರಾಗುತ್ತಾರೆ ಎನ್ನುವುದನ್ನು ಹೇಳುವುದೇ ಕಷ್ಟವಾಗಿದೆ. ಆದರೆ ರಾಜಕೀಯ ನಾಯಕರು ಏನೇ ಕಸರತ್ತು ಮಾಡಿದರೂ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಮತದಾರರ ಕೈಯ್ಯಲ್ಲಿದೆ. ಹಾಗಾಗಿ ಅವರ ತೀರ್ಮಾನವೇ ಅಂತಿಮವಾಗಲಿದೆ.