ಪುನೀತ್ ಜನ್ಮದಿನದಂದು 'ಅಪ್ಪು ಸ್ಮರಣೆ' ಮಾಡಿದ ರಾಜಕೀಯ ನಾಯಕರುಗಳು
ಬೆಂಗಳೂರು, ಮಾರ್ಚ್ 17: ನಟ ದಿವಂಗತ ಪುನೀತ್ ರಾಜ್ಕುಮಾರ್ ಹುಟ್ಟಹಬ್ಬದ ಸಂಭ್ರಮವು ಕರ್ನಾಟಕದಲ್ಲಿ ಇಂದು ಮನೆ ಮಾಡಿದೆ. ರಾಜ್ಯದಲ್ಲಿ ಹಲವಾರು ಮಂದಿ ಪುನೀತ್ ಹುಟ್ಟು ಹಬ್ಬದಂದು ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ. ಕರ್ನಾಟಕ ರಾಜಕೀಯ ನಾಯಕರುಗಳು ಕೂಡಾ ಪುನೀತ್ರನ್ನು ನೆನಪಿಸಿಕೊಂಡಿದ್ದಾರೆ.
ಈ ನಡುವೆ ಇಂದು ರಾಜ್ಯದಾದ್ಯಂತ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ತೆರೆ ಕಾಣಲಿದೆ. ಪುನೀತ್ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ರಾಜ್ಯದ ಹಲವಾರು ಸಚಿವರುಗಳು, ರಾಜಕೀಯ ನಾಯಕರುಗಳು ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿದ್ದಾರೆ.
ಪುನೀತ್ ಹುಟ್ಟುಹಬ್ಬ: ಗ್ರಾಮಗ್ರಾಮಗಳಲ್ಲೂ ಸಂಭ್ರಮ, ಟ್ವಿಟರ್ನಲ್ಲಿ ಟ್ರೆಂಡ್
ಪುನೀತ್ ಜನ್ಮದಿನದ ಹಿನ್ನೆಲೆ ಕೂ ಮಾಡಿರುವ ಸಚಿವ ಮುರುಗೇಶ್ ನಿರಾಣಿ, "ಕನ್ನಡದ ಧ್ರುವ ತಾರೆಯೊಂದು ಮಿಂಚಿ ನಮ್ಮಿಂದ ಮರೆಯಾಗಿದೆ. ಆ ತಾರೆ ಬೆಳ್ಳಿ ಪರದೆ ಮೇಲೆ 'ಜೇಮ್ಸ್' ಮೂಲಕ ಮತ್ತೆ ಅಬ್ಬರಿಸಲಿದೆ. ಗೋಲ್ಡನ್ ಹಾರ್ಟ್, ಪವರ್ ಸ್ಟಾರ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು," ಎಂದು ಹೇಳಿದ್ದಾರೆ.
ಗೌರವ ಸಲ್ಲಿಸಿದ ಸಚಿವ ಬಿ ಶ್ರೀರಾಮುಲು
"ಕನ್ನಡ ಚಿತ್ರರಂಗದ ಶ್ರೇಷ್ಠ ನಾಯಕ ನಟ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಅಭಿಮಾನಿಗಳ ಅಭಿಮಾನಿ, ನಟ ಸಾರ್ವಭೌಮ, ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮಜಯಂತಿಯಂದು ನನ್ನ ಗೌರವ ನಮನಗಳು. ಅವರ ಸೇವೆಯ ಗುಣದಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ," ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು ಕೂ ಮಾಡಿದ್ದಾರೆ.
ಪುನೀತ್ ಸ್ಮರಿಸಿದ ಅರವಿಂದ್ ಲಿಂಬಾವಳಿ
"ಕನ್ನಡಿಗರ ನೆಚ್ಚಿನ ಧ್ರುವತಾರೆ, ಅಪ್ಪು ಬಾಳಿದ ರೀತಿ ಅದ್ಭುತ ಮತ್ತು ಆದರ್ಶಪ್ರಾಯ. ಅವರು ಸಮಾಜಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ ಅವರ ಜನ್ಮ ಜಯಂತಿಯಂದು ಅವರಿಗೆ ಶ್ರದ್ಧೆಯಿಂದ ನಮಿಸುತ್ತೇನೆ," ಎಂದು ಮಾಜಿ ಸಚಿವ, ಮಹದೇವಪು ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಕೂ ನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಅಸ್ತಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಮರೆಯಲಾಗದ ಆ ತಾರೆಗೆ ನನ್ನ ಭಾವಪೂರ್ಣ ನಮನಗಳು. ಕನ್ನಡಿಗರ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆ ಆಗಿರುವ ಅವರು ನಮ್ಮ ಪಾಲಿಗೆ ಸದಾ ಅಮರ.#ಪುನೀತ್_ರಾಜಕುಮಾರ್ pic.twitter.com/w5xeFZc4rk
— H D Kumaraswamy (@hd_kumaraswamy) March 17, 2022
ಶಾಸಕ ಜಿಟಿ ದೇವೇಗೌಡ ಕೂ ಮೂಲಕ, "ಕರುನಾಡ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರು ಕನ್ನಡಿಗರ ಮನೆ ಮಗನಂತಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ಅನಾಥ ಹೆಣ್ಣು ಮಕ್ಕಳಿಗೆ ಶಕ್ತಿಧಾಮದ ಮೂಲಕ ಆಸರೆಯಾಗಿ, ಗೋವುಗಳ ಸಂರಕ್ಷಣೆ, ಅಶಕ್ತ ಕಲಾವಿದರು ಹಾಗೂ ತನ್ನಲ್ಲಿ ಯಾರೇ ಕಷ್ಟ ಹೇಳಿಕೊಂಡು ಬಂದಾಗಲೂ ಕೊಡುಗೈ ದಾನಿಯಾಗಿ ಸಹಾಯ ಮಾಡಿದ ಮಾನವತಾವಾದಿ ಪುನೀತ್. ಇಂದು ಅವರ ಜನ್ಮದಿನದಂದು ಅವರನ್ನು ನೆನೆಯುತ್ತ ಗೌರವಪೂರ್ವಕವಾಗಿ ನಮಿಸುವೆ," ಎಂದಿದ್ದಾರೆ.
ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ಟ್ವೀಟ್ ಮಾಡಿ, "ಬೆಟ್ಟದ ಹೂವಾಗಿ ಅರಳಿದೆ,ಎರಡು ನಕ್ಷತ್ರಗಳಾಗಿ ಮಿಂಚಿದೆ, ಅರಸುವಾಗಿ ಚಂದನವನದ ಯುವರತ್ನನಾದೆ, ವೀರ ಕನ್ನಡಿಗನಾಗಿ ಪೃಥ್ವಿಯ ಮೈತ್ರಿ ತೊರೆದು ಪರಮಾತ್ಮನ ಮಿಲನವಾದೆ, ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು," ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಟ್ವೀಟ್
"ಕನ್ನಡ ಚಿತ್ರರಂಗದ ಅಸ್ತಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಮರೆಯಲಾಗದ ಆ ತಾರೆಗೆ ನನ್ನ ಭಾವಪೂರ್ಣ ನಮನಗಳು. ಕನ್ನಡಿಗರ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆ ಆಗಿರುವ ಅವರು ನಮ್ಮ ಪಾಲಿಗೆ ಸದಾ ಅಮರ," ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
"ಪುನೀತ್ ರಾಜಕುಮಾರ್ ನಮ್ಮಿಂದ ಕಣ್ಮರೆಯಾಗಿದ್ದರೂ ಸರಳ, ಸಜ್ಜನಿಕೆ, ಪ್ರೀತಿ, ಆತ್ಮವಿಶ್ವಾಸದಿಂದ ಕೂಡಿದ್ದ ಅವರ ಪ್ರತಿಭಾಶಾಲಿ ವ್ಯಕ್ತಿತ್ವ ಪ್ರೇರಕಶಕ್ತಿಯಾಗಿ ಕೋಟ್ಯಂತರ ಹೃದಯದಲ್ಲಿ ಅಜರಾಮರ. ಹುಟ್ಟುಹಬ್ಬದ ದಿನ ಅಪ್ಪುವನ್ನು ಪ್ರೀತಿ ಮತ್ತು ದು:ಖದಿಂದ ಸ್ಮರಿಸುತ್ತೇನೆ," ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
Recommended Video