ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ?
Recommended Video
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಎಲ್ಲರ ಗಮನ ಹೆಚ್ಚಾಗಿ ಸೆಳೆಯುತ್ತಿರುವುದು ನಾಲ್ಕು ಕ್ಷೇತ್ರಗಳ ಮೇಲೆ. ಈ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆಯೇ, ದೇಶದ ಇತರ ಕಡೆ ಎಲ್ಲೂ ಇಲೆಕ್ಷನ್ ನಡೆಯುತ್ತಿಲ್ಲವೇ ಎಂದು ಮುಖ್ಯಮಂತ್ರಿಗಳು ಕೇಳುವಷ್ಟರ ಮಟ್ಟಿಗೆ ಪ್ರಚಾರವೂ ಸಿಗುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ನಾಲ್ಕು ಕ್ಷೇತ್ರಗಳು ಯಾಕೆ ಇಷ್ಟು ಕುತೂಹಲ ಹುಟ್ಟುಹಾಕಿದೆ ಎನ್ನುವುದಕ್ಕೆ ಕಾರಣ ಸ್ಪಷ್ಟ. ಮೂರು ಕಡೆ ದೇವೇಗೌಡರ ಕುಟುಂಬ ಮತ್ತೊಂದು ಕಡೆ, ಸಿದ್ದರಾಮಯ್ಯ ಹಠ ಹಿಡಿದು ಮತ್ತು ಸ್ವಯಂ ಪ್ರತಿಷ್ಥೆಗಾಗಿ ಕಾಂಗ್ರೆಸ್ಸಿಗೆ ಉಳಿಸಿಕೊಂಡ ಕ್ಷೇತ್ರ.
ಈ ನಾಲ್ಕೂ ಕ್ಷೇತ್ರಗಳಲ್ಲಿ ದೇವೇಗೌಡರು ಮತ್ತು ಅವರ ಮೊಮ್ಮಕ್ಕಳು ಸ್ಪರ್ಧಿಸಿದ್ದಾರೆಂದೋ ಅಥವಾ ಸಿದ್ದರಾಮಯ್ಯನವರ ರಾಜಕೀಯ ಕರ್ಮಭೂಮಿಯೆಂದೋ, ಚುನಾವಣಾ ರಂಗ ಏಕಾಭಿಮುಖವಾಗಿರದೇ, ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವುದೇ, ಇಷ್ಟು ಕುತೂಹಲಕ್ಕೆ ಕಾರಣವಾಗಿರುವುದು.
ಪ್ರಧಾನಿ ಮೋದಿ ಸೋಲಿಸುವುದು ಸುಲಭದ ಮಾತಲ್ಲ: ದೇವೇಗೌಡ
ಮಂಡ್ಯ, ಮೈಸೂರು, ಹಾಸನ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಮೊದಲ ಹಂತದಲ್ಲಿ (ಏ 18) ನಡೆಯಲಿದೆ. ಈ ನಾಲ್ಕು ಕ್ಷೇತ್ರಗಳಲ್ಲಿ ಸದ್ಯದ ರಾಜಕೀಯ ಚಿತ್ರಣ ಹೇಗಿದೆ, ಯಾರ ಮೇಲುಗೈ ಗೋಚರಿಸುತ್ತಿದೆ, ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಇನ್ನೂ ನಾನೊಂದು ತೀರಾ.. ನೀನೊಂದು ತೀರಾ ಎಂದು ಮುನಿಸಿಕೊಂಡಿದ್ದಾರಾ ಎನ್ನುವುದರ ರೌಂಡ್ ಅಪ್..
24ಗಂಟೆಗೆ ಮುನ್ನ, ನಡೆಯುವ ನಿರ್ಣಾಯಕ ಆಫ್ ದಿ ರೆಕಾರ್ಡ್ ರಾಜಕೀಯವೇ ಬೇರೆ
ಚುನಾವಣೆಗೆ ಇನ್ನೂ ಹತ್ತೆನ್ನರಡು ದಿನ ಇರುವುದರಿಂದ, ಪೂರ್ಣ ಪ್ರಮಾಣದ ಪ್ರಚಾರ ಕಾವೇರಲು ಸ್ವಲ್ಪದಿನಗಳಾಗಬಹುದು. ಅಭ್ಯರ್ಥಿಗಳು ಹಳ್ಳಿಹಳ್ಳಿಗೂ ಹೋಗಿ ಪ್ರಚಾರ ನಡೆಸುತ್ತಿದ್ದರೆ, ಪ್ರಮುಖ ನಾಯಕರು ಇನ್ನೂ ಕ್ಷೇತ್ರದಲ್ಲಿ ಠಿಕಾಣಿ ಹೂಡಬೇಕಷ್ಟೇ.. ಚುನಾವಣೆಗೆ ಒಂದು ವಾರದ ಮುನ್ನ ಪ್ರಚಾರದ ಭರಾಟೆ ಏರಲಿದೆ. ಇದಾದ ನಂತರ ಚುನಾವಣೆಗೆ 24ಗಂಟೆಗೆ ಮುನ್ನ, ನಡೆಯುವ ನಿರ್ಣಾಯಕ ಆಫ್ ದಿ ರೆಕಾರ್ಡ್ ರಾಜಕೀಯವೇ ಬೇರೆ. ಇಲ್ಲಿ ಯಾರು ಮೇಲಗೈ ಸಾಧಿಸಲಿದ್ದಾರೆ ಎನ್ನುವುದು ಬಹಳ ಮುಖ್ಯ.
ನಾಲ್ಕು ಸುತ್ತು ಕೇಸರಿ ಕೋಟೆ: ಮಲ್ಲಿಕಾರ್ಜುನ ಖರ್ಗೆಗೆ ಗೆಲುವು ಸುಲಭದ ತುತ್ತಲ್ಲ
ಎರಡೂ ಪಕ್ಷದ ಮುಖಂಡರು, ಇನ್ನೂ ಮಾತುಕತೆಯನ್ನು ಮುಂದುವರಿಸಿದ್ದಾರೆ
ತುಮಕೂರು, ಮಂಡ್ಯ, ಮೈಸೂರು ಮತ್ತು ಹಾಸನದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಗೊಂದಲ ಇನ್ನೂ ಶಮನವಾಗದ ಹಿನ್ನಲೆಯಲ್ಲಿ, ಎರಡೂ ಪಕ್ಷದ ಮುಖಂಡರು, ಇನ್ನೂ ಮಾತುಕತೆಯನ್ನು ಮುಂದುವರಿಸಿದ್ದಾರೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಜೆಡಿಎಸ್ - ಕಾಂಗ್ರೆಸ್ ಪ್ರಬಲವಾಗಿರುವುದರಿಂದ, ಒಬ್ಬರು ಇನ್ನೊಬ್ಬರ ಜೊತೆ ಹೊಂದಿಕೊಳ್ಳಲು ಮುಂದಾಗದಿರುವುದು, ಬಿಜೆಪಿಗೆ ಅನುಕೂಲದ ವಾತಾವರಣ ನಿರ್ಮಿಸಿದೆ.
ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?
ಕಲ್ಪತರು ನಾಡಿನಲ್ಲಿ ದೇವೇಗೌಡ್ರ ಉಮೇದುವಾರಿಕೆ
ಬೆಂಗಳೂರು ಉತ್ತರವೋ, ತುಮಕೂರೋ ಎನ್ನುವ ಗೊಂದಲಕ್ಕೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರು ತೆರೆ ಎಳೆದು ಕಲ್ಪತರು ನಾಡಿನಲ್ಲಿ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಹಿಂಪಡೆಯುವ ತನಕ, ಮುದ್ದಹನುಮೇಗೌಡ್ರು ಮತ್ತು ಕೆ ಎನ್ ರಾಜಣ್ಣ, ಯಾವ ರೀತಿ ಎರಡೂ ಪಕ್ಷದ ಪ್ರಮುಖರಿಗೆ ಬಿಸಿಮುಟ್ಟಿಸಿದರು ಎನ್ನುವುದನ್ನು ಇನ್ನೊಮ್ಮೆ ಹೇಳಬೇಕಾಗಿಲ್ಲ.
ಆದರೂ, ಇಬ್ಬರು ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ ಇರುವುದು ಗೌಡ್ರಿಗೆ ದೊಡ್ಡ ಚಿಂತೆಯ ವಿಷಯವಾಗಿದೆ. ಇತ್ತ, ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಡಿಎಸ್ - ಕಾಂಗ್ರೆಸ್ ಕೂಡಾ ಜಂಟಿ ಪ್ರಚಾರ ನಡೆಸುತ್ತಿದ್ದರೂ, ಸದ್ಯದ ಮಟ್ಟಿಗೆ ಮೋದಿ ಹವಾ ಒಂದು ಕೈಮೇಲಿದೆ. ಆದರೆ, ದೇವೇಗೌಡ್ರು, ಮಾಜಿ ಪ್ರಧಾನಿ, ಒಕ್ಕಲಿಗ ಸಮುದಾಯ, ಹಿರಿಯ ಮುಖಂಡರು ಎನ್ನುವ ಅಂಶ ಲಾಭವಾಗಿ ಪರಿಣಮಿಸಬಹುದು ಅಥವಾ ಹೇಮಾವತಿ ನದಿನೀರು ಅಂಶ ಇವರ ವಿರುದ್ದವಾಗಿಯೂ ಸಾಗಬಹುದು.
ಬಿಜೆಪಿಯವರು ವ್ಯವಸ್ಥಿತ ಪ್ರಚಾರ, ಈಗಿನ ಮೈಸೂರು ಚಿತ್ರಣ ಬಿಜೆಪಿಗೆ ಪೂರಕವಾಗಿದೆ
ಸಿದ್ದರಾಮಯ್ಯ ಹಠ ಹಿಡಿದು ಪಡೆದುಕೊಂಡಂತಹ ಕ್ಷೇತ್ರ ಮೈಸೂರು. ಬಿಜೆಪಿಯ ಪ್ರತಾಪ್ ಸಿಂಹ ಎದುರಿಗೆ ಕಾಂಗ್ರೆಸ್-ಬಿಜೆಪಿ ನಡುವೆ ಈ ಹಿಂದೆ ಪರ್ಯಟನೆ ನಡೆಸಿದ್ದ ಸಿ ಎಚ್ ವಿಜಯಶಂಕರ್ ಕೈ ಪಕ್ಷದ ಅಭ್ಯರ್ಥಿ. ಮೈಸೂರಿನಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಇನ್ನೂ ಒಬ್ಬರಿಗೊಬ್ಬರು ಒಗ್ಗಿಕೊಳ್ಳುತ್ತಿಲ್ಲ ಎನ್ನುವುದು ವಾಸ್ತವತೆ.
ಜೊತೆಗೆ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಮತ್ತು ಸಚಿವ ಸಾ.ರಾ. ಮಹೇಶ್ ನಡುವೆ ಏನೋ ಸರಿಯಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಎಲ್ಲದರ ನಡುವೆ, ಮೋದಿ ಮತ್ತೊಮ್ಮೆ ಎಂದು ಬಿಜೆಪಿಯವರು ವ್ಯವಸ್ಥಿತ ಪ್ರಚಾರ ನಡೆಸುತ್ತಿದ್ದಾರೆ. ಈಗಿನ ಮೈಸೂರು ಚಿತ್ರಣ ಬಿಜೆಪಿಗೆ ಪೂರಕವಾಗಿದೆ.
ಪ್ರಜ್ವಲ್ ರೇವಣ್ಣ ವ್ಯವಸ್ಥಿತ ಪ್ರಚಾರ ಪಕ್ಷಕ್ಕೆ ಲಾಭ ತಂದು ಕೊಡಬಹುದು
ಮೊಮ್ಮಗನಿಗಾಗಿ ದೇವೇಗೌಡ್ರು ಬಿಟ್ಟುಕೊಟ್ಟ ಕ್ಷೇತ್ರ ಹಾಸನ. ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಇವರಿಗೆ ಎದುರಾಳಿ ಕಾಂಗ್ರೆಸ್ಸಿನಲ್ಲಿದ್ದ, ಸಿದ್ರಾಮಣ್ಣ ಆಪ್ತ ಎ ಮಂಜು ಬಿಜೆಪಿಯಿಂದ. ಹಾಸನದಲ್ಲಿ ಏನೇ ಮಾಡಿದರೂ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗುತ್ತಿಲ್ಲ.
ಸಿದ್ದರಾಮಯ್ಯನವರ ಮುಂದೆ ಆಯ್ತು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇವೆ ಎನ್ನುವ ಕಾಂಗ್ರೆಸ್ ಮುಖಂಡರು, ಸಿದ್ರಾಮಣ್ಣ ಕಾರು ಹತ್ತಿದ ಮೇಲೆ ಮಾಡುವುದು ಇನ್ನೊಂದು. ಬಿಜೆಪಿ ಇಲ್ಲಿ ಭರ್ಜರಿ ಬಲಪ್ರದರ್ಶನ ನಡೆಸುತ್ತಿದ್ದರೂ, ಅಷ್ಟೇ ವ್ಯವಸ್ಥಿತವಾಗಿ ಪ್ರಜ್ವಲ್ ಪ್ರಚಾರ ನಡೆಸುತ್ತಿರುವುದರಿಂದ, ಜೆಡಿಎಸ್ ಈ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು. ಆದರೂ, ಎ ಮಂಜು ಮತ್ತು ಹಾಸನ ಶಾಸಕ ಪ್ರೀತಂ ಗೌಡ ಅವರ ಕೊನೆಯ ಕ್ಷಣದ ಕಾರ್ಯತಂತ್ರವನ್ನು ಪ್ರಜ್ವಲ್ ಹೇಗೆ ಎದುರಿಸಬಲ್ಲರು ಎನ್ನುವುದು ಮುಖ್ಯ. ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕ್ಷೇತ್ರ ಬಿಟ್ಟು ಕದಲುತ್ತಿಲ್ಲ.
ಚುನಾವಣೆಯ ಕಾವು ಫುಲ್ ಗೇರ್ ನಲ್ಲಿರುವ ಕ್ಷೇತ್ರವೆಂದರೆ ಮಂಡ್ಯ
ಚುನಾವಣೆಯ ಕಾವು ಫುಲ್ ಗೇರ್ ನಲ್ಲಿರುವ ಕ್ಷೇತ್ರವೆಂದರೆ ಮಂಡ್ಯ, ಕಾರಣ ಸ್ಪಷ್ಟ.. ಕುಮಾರಣ್ಣನಿಗೆ ಡು ಆರ್ ಡೈ ಆಗಿರುವ, ಪ್ರತಿಷ್ಠೆಯ ಸೀಟ್ ಇದು. ಬಹುಷಃ ಈ ಮಟ್ಟಿನ ಪ್ರತಿರೋಧ ವ್ಯಕ್ತವಾಗಬಹುದು ಎಂದು ಖುದ್ದು ಸಿಎಂ ಅಂದು ಕೊಂಡಿರಲಿಕ್ಕಿಲ್ಲ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನೀಡುತ್ತಿರುವ ಪೈಪೋಟಿ ಜೆಡಿಎಸ್ ವರಿಷ್ಠರ ನಿದ್ದೆಗೆಡಿಸಿರುವುದು ಸ್ಪಷ್ಟ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದಿಯಾಗಿ ಕೆಪಿಸಿಸಿ ಎಷ್ಟೇ ಎಚ್ಚರಿಕೆ ನೀಡಿದರೂ, ಸುಮಲತಾ ಪ್ರಚಾರದಲ್ಲಿ ಕಾಂಗ್ರೆಸ್ ಬಾವುಟ ಹಾರುತ್ತಿದೆ. ಶಿವರಾಮೇಗೌಡ್ರ ಜಾತಿನಿಂದನೆ ಮತ್ತು ಅಸಂಬದ್ದ ಹೇಳಿಕೆಗಳು, ಸುಮಲತಾ ಅವರ ಪರವಾಗಿಯೇ ಸಾಗುತ್ತಿದೆ. ಜೋಡೆತ್ತುಗಳ ಪ್ರಚಾರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯದ ಹವಾ, ಸುಮಲತಾ ಪರವಾಗಿಯೇ ಇದೆ. ಆದರೆ, ಈಗಾಗಲೇ ಹೇಳಿದಂತೆ, ಚುನಾವಣೆಗೆ ಇನ್ನೂ 10-12ದಿನಗಳ ಸಮಯವಿದೆ.