VIDEO: ಬಿಜೆಪಿ ಹೈಕಮಾಂಡ್ ಎದುರು ಬಲಗೊಳ್ಳುತ್ತಿದೆಯಾ ಮುಖ್ಯಮಂತ್ರಿ ಯಡಿಯೂರಪ್ಪ 'ಕೈ'?
ಬೆಂಗಳೂರು, ಜು. 20: "ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಸೋದು ಬೇಡ" ಎಂದು ಪಕ್ಷದಲ್ಲಿನ ವಿರೋಧಿಗಳಿಗೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು,"ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿ ಮಾತ್ರ ಗಮನಿಸಿದ್ದೇನೆಯೇ ಹೊರತು ಬೇರೆ ಯಾವ ಮಾಹಿತಿ ಇಲ್ಲ. ಯಡಿಯೂರಪ್ಪ ಜನಪ್ರಿಯ ನಾಯಕರು. ಅವರು ಕೇವಲ ವೀರಶೈವ ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ." ಎಂದಿದ್ದಾರೆ.
ಜೊತೆಗೆ ಚಿತ್ರದುರ್ಗದ ಮುರುಘಾ ಶರಣರು ಹಾಗೂ ಕ್ರೀಡಾ ಸಚಿವ ಡಾ. ಕೆ. ಸಿ. ನಾರಾಯಣಗೌಡ ಅವರು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ವಿಚಾರದ ಕುರಿತು ಮಾತನಾಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಬದಲಾವಣೆಗೆ ಮುಂದಾಗಿರುವ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಯಡಿಯೂರಪ್ಪ ಅವರ ಸುತ್ತಲೂ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಮಾಹಿತಿ ಇಲ್ಲಿದೆ!
ಸಹಿ ಸಂಗ್ರಹದ ಬಗ್ಗೆ ಸ್ಪಷ್ಟನೆ!
"ಮುಖ್ಯಮಂತ್ರಿ ಯಡಿಯೂರಪ್ಪ ಪರ ನಾನು ಹಾಗೂ 66 ಶಾಸಕರ ಸಹಿ ಮಾಡಿಸಿದ್ದೆ. ಆದರೆ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆ ನೀಡಿ ಸಹಿ ಸಂಗ್ರಹ ಮಾಡದಂತೆ ಸೂಚಿಸಿದ್ದರು. ಹಾಗಾಗಿ ನಾನು ಅಂದೇ ಸಹಿ ಸಂಗ್ರಹ ನಿಲ್ಲಿಸಿದೆ. ಈಗ ಆ ಬಗ್ಗೆ ಚರ್ಚೆ ಅನಗತ್ಯ. ಯಾಕೆಂದರೆ ಎಲ್ಲ ಶಾಸಕರು, ಸಂಸದರು ಯಡಿಯೂರಪ್ಪ ಪರವಾಗಿದ್ದಾರೆ." ಎಂದು ಸಹಿ ಸಂಗ್ರಹದಿಂದ ಹೊರಕ್ಕೆ ಸರಿದಿರುವುದಕ್ಕೆ ಕಾರಣ ಕೊಟ್ಟಿದ್ದಾರೆ.
ಜೊತೆಗೆ ಸಿಎಂ ಯಡಿಯೂರಪ್ಪ ಅವರ ಬದಲಾವಣೆ ಕುರಿತು ಮತ್ತೊಂದು ಸ್ಪೋಟಕ ವಿಚಾರವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಂಚಿಕೊಂಡಿದ್ದಾರೆ.
JDS ಜೊತೆಗಿನ ಮೈತ್ರಿ ಸಂದರ್ಭದಲ್ಲಿ ಏನಾಗಿತ್ತು?
"ಸಿಎಂ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ" ಎಂದು ರೇಣುಕಾಚಾರ್ಯ ಅವರು ಹೇಳಿರುವುದರ ಹಿಂದೆ ನಿಗೂಢ ಅರ್ಥವಿದೆ ಎನ್ನಲಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ವೀರಶೈವ ಸಮಾಜದ ಮುಖಂಡರಾಗಿ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿದ್ದಾರೆ. ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಈ ಹಿಂದೆ ಯಡಿಯೂರಪ್ಪನವರಿಗೆ ಮಾಜಿ ಪ್ರಧಾನಿ ದೇವೆಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೋಸ ಮಾಡಿದ್ದರು. ಆಗ ಬಿಜೆಪಿಗೆ ಪಕ್ಷಕ್ಕೆ ಎಲ್ಲ ಸಮುದಾಯದವರು ಬೆಂಬಲ ಕೊಟ್ಟಿದ್ದರು" ಎಂದಿದ್ದಾರೆ.
ಆ ಮೂಲಕ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾದಲ್ಲಿ ಅಂಥದ್ದೆ ಸ್ಥಿತಿ ಈಗಲೂ ನಿರ್ಮಾಣವಾಗಲಿದೆ ಎಂದು ಪರೋಕ್ಷವಾಗಿ ರೇಣುಕಾಚಾರ್ಯ ಹೇಳಿದ್ದಾರೆ.
ಅದು ಕಟೀಲ್ ಮಾತನಾಡಿದ್ದಲ್ಲ
ಇನ್ನು ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದ್ದಾರೆ ಎನ್ನಲಾದ ಅಡಿಯೋ ಕುರಿತೂ ಶಾಸಕ ರೇಣುಕಾಚಾರ್ಯ ಮತ್ತೊಮ್ಮೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಕಟೀಲ್ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿ ಅವರ ಹೆಸರಿನಲ್ಲಿ ನಕಲಿ ಆಡಿಯೋ ಬಿಡುಗಡೆ ಮಾಡಲಾಗಿದೆ" ಎಂದು ಹೇಳಿದ್ದಾರೆ. ಜೊತೆಗೆ "ಅಡಿಯೋ ಹಿಂದೆ ಬಹುದೊಡ್ಡ ಷಡ್ಯಂತ್ರ ಇದೆ. ಈ ಬಗ್ಗೆ ತನಿಖೆಗೆ ಕಟೀಲ್ ಅವರೇ ಆಗ್ರಹ ಮಾಡಿದ್ದಾರೆ. ನಾನು ಹೋರಾಟದ ರಾಜಕಾರಣದ ಮೂಲಕ ಶಾಸಕನಾಗಿದ್ದೇನೆ. ಯಡಿಯೂರಪ್ಪ ನಮ್ಮ ನಾಯಕರು. ನಾನೇ ಮುಖ್ಯಮಂತ್ರಿ ಎಂದು ಯಾರು ಬೇಕಾದರೂ ಹೇಳಿಕೊಳ್ಳುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ" ಎಂದು ರೇಣುಕಾರ್ಯ ನಾಯಕತ್ವ ಬದಲಾವಣೆ ಬಗ್ಗೆ ಹೇಳಿದ್ದಾರೆ.
ಯಡಿಯೂರಪ್ಪ ಮೇಲೆ ವಿಶ್ವಾಸವಿಟ್ಟು ಬಂದವರು ನಾವು
ಇದೇ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮಾತನಾಡಿರುವ ಕ್ರೀಡಾ ಸಚಿವ ನಾರಾಯಣಗೌಡ ಅವರು ಮಹತ್ವದ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನಾವು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಟ್ಟು ಬಂದವರು. ಮುಖ್ಯಮಂತ್ರಿಯಾಗಿ ಅವರು ಮುಂದುವರೆಯುವುದರಲ್ಲಿ ಯಾವುದೇ ಅಡಚಣೆ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ವಿಚಾರ ಸತ್ಯಕ್ಕೆ ದೂರವಾದದ್ದು. ಯಾವುದೇ ತೊಂದರೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ." ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆ ಮೂಲಕ ಹೈಕಮಾಂಡ್ ಬದಲಾವಣೆಗೆ ಮುಂದಾದರೆ ನಮ್ಮ ದಾರಿ ನಮಗೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾದಂತಾಗಿದೆ.
ಈ ಬಗ್ಗೆ ಮುರುಘಾ ಶರಣರ ಅಭಿಪ್ರಾಯ!
ಯಡಿಯೂರಪ್ಪ ಅವರ ಬದಲಾವಣೆ ಕುರಿತು ಚಿತ್ರದುರ್ಗದ ಮುರುಘಾ ಶರಣರು ಕಿವಿಮಾತು ಹೇಳುವ ರೂಪದಲ್ಲಿ ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. "ತಳಮಟ್ಟದಿಂದ ಬಿಜೆಪಿ ಕಟ್ಟಿದವರು ಯಡಿಯೂರಪ್ಪ ಅವರು. ಬಿಜೆಪಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆ ಅವರದ್ದು. ಈ ವರೆಗೆ ಪ್ರತಿ ಚುನಾವಣೆ ಅವರ ನೇತೃತ್ವದಲ್ಲೇ ಆಗಿದೆ. ಅವರು ಬಿಜೆಪಿ ಪಕ್ಷಕ್ಕಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಜೊತೆಗೆ ರಾಜ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂತಹ ಮೇಧಾವಿ ಮುತ್ಸದ್ದಿಯನ್ನು ಅಲಕ್ಷಿಸಬೇಡಿ. ಆಲಕ್ಷಿಸುವುದರಿಂದ ಬಾರಿ ನಷ್ಟ ಅನುಭವಿಸ ಬೇಕಾಗುತ್ತದೆ. ಅವರನ್ನು ಗೌರವದಿಂದ ನಡೆಸಿಕೊಳ್ಳಿ. ಈ ಹಂತದಲ್ಲಿ ನಾಯಕತ್ವ ಬದಲಾವಣೆ ಬೇಡ" ಎಂದು ಬಿಜೆಪಿ ಹೈಕಮಾಂಡ್ಗೆ ಮುರುಘಾ ಶರಣರು ಎಚ್ಚರಿದ್ದಾರೆ.
ನಿರ್ಧಾರ ಬದಲಿಸುತ್ತಾ ಬಿಜೆಪಿ ಹೈಕಮಾಂಡ್!
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ಬಿಜೆಪಿ ಹೈಕಮಾಂಡ್ಗೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಇದೇ ಜುಲೈ 26ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬಂದು ಎರಡು ವರ್ಷಗಳನ್ನು ಪೂರೈಸುತ್ತಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಬದಲಾವಣೆ ಮಾಡಲು ಹೈಕಮಾಂಡ್ ನಿರ್ಧಾರ ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿತ್ತು. ರಾಜಕೀಯ ನಾಯಕರ ಜೊತೆಗೆ ಧಾರ್ಮಿಕ ಕ್ಷೇತ್ರದ ಪ್ರಮುಖರೂ ಇದೀಗ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಹೀಗಾಗಿ ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಡುವ ಬಿಜೆಪಿ ಹೈಕಮಾಂಡ್ ಈಗ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ. ಒಟ್ಟಾರೆ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯದಲ್ಲಿ ಬಿಜೆಪಿ ಭವಿಷ್ಯ ನಿಂತಿದೆ ಎಂಬ ಚರ್ಚೆಗಳು ಇದೀಗ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿವೆ.