ಉಪಚುನಾವಣೆ ಬಹಿಷ್ಕರಿಸುವುದಾಗಿ ಪೊಲೀಸರಿಂದ ಸಿಎಂ ಗೆ ಪತ್ರ
ಬೆಂಗಳೂರು, ನವೆಂಬರ್ 19: ವೇತನ ತಾರತಮ್ಯದಿಂದ ರೋಸಿಹೋಗಿರುವ ಪೊಲೀಸರು ಪರೋಕ್ಷ ಒತ್ತಡವನ್ನು ಸರ್ಕಾರಗಳ ಮೇಲೆ ಹೇರುತ್ತಲೇ ಬಂದಿದ್ದು, ಇದೀಗ ಮತ್ತೊಂದು ಪ್ರಯತ್ನ ಮಾಡುತ್ತಿದ್ದಾರೆ.
ವೇತನ ತಾರತಮ್ಯವನ್ನು ನಿವಾರಿಸದೇ ಇದ್ದರೆ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪೊಲೀಸರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಪೊಲೀಸರ ವೇತನ ತಾರತಮ್ಯವನ್ನು ಶೀಘ್ರವಾಗಿ ನಿವಾರಿಸದಿದ್ದರೆ ಉಪಚುನಾವಣೆಯಲ್ಲಿ ಮತ ಚಲಾವಣೆಯಿಂದ ದೂರ ಉಳಿಯುವುದಾಗಿ ಪೊಲೀಸರು ಪತ್ರ ಬರೆದಿದ್ದು, ರಾಘವೇಂದ್ರ ಔರಾದ್ಕರ್ ವರದಿಯಲ್ಲಿನ ಲೋಪದೋಷಗಳನ್ನು ಪರೀಷ್ಕರಿಸಬೇಕು, ಸೇವಾ ಹಿರಿತನಕ್ಕೆ ಸೂಕ್ತ ಗೌರವ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಉಪಚುನಾವಣೆ ಭದ್ರತೆಯಲ್ಲಿ ಭಾಗವಹಿಸಲು ಪೊಲೀಸರು ನಿರಾಕರಿಸದೇ ಇರುವುದು ಸಿಎಂ ಹಾಗೂ ಗೃಹ ಇಲಾಖೆಗೆ ನೆಮ್ಮದಿ ತಂದಿದ್ದರೂ ಸಹ ಪೊಲೀಸರು ಉಪಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲವೆಂದು ಹೇಳಿರುವುದು ಆತಂಕ ತಂದಿದೆ.
ಸಿಎಂ ಯಡಿಯೂರಪ್ಪ ಹಾಗೂ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರುಗಳು ಪೊಲೀಸರೊಂದಿಗೆ ಮಾತುಕತೆ ನಡೆಸಿ ಅವರನ್ನು ಮತಚಲಾವಣೆಗೆ ಒಪ್ಪಿಸುವ ಸಾಧ್ಯತೆ ಇದೆ.
ರಾಘವೇಂದ್ರ ಔರಾದ್ಕರ್ ವರದಿಯ ಮರು ಅನುಷ್ಠಾನ ಸೇರಿದಂತೆ, ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ನಾಲ್ಕನೇ ಶನಿವಾರದ ರಜೆಯನ್ನು ಪೊಲೀಸರಿಗೂ ವಿಸ್ತರಿಸುವುದು, 10 ಕ್ಕೆ ಇಳಿಸಲಾಗಿರುವ ಸಾಂಧರ್ಭಿಕ ರಜೆಯನ್ನು 15 ಕ್ಕೆ ಹೆಚ್ಚಿಸುವುದು ಸೇರಿ ಇನ್ನೂ ಕೆಲವು ಬೇಡಿಕೆಗಳನ್ನು ಪೊಲೀಸರು ಇರಿಸಿದ್ದಾರೆ.