ಕವಿತೆಯ ಕೊಲ್ಲುವ ಯತ್ನ: ಮರುಹುಟ್ಟು ಪಡೆಯುತ್ತಲೇ ಇದೆ ಕವಿತೆ
'ಕವಿಯ ಕೊಲ್ಲಬಹುದು, ಕವಿತೆಯ ಕೊಲ್ಲಲಾಗುವುದೇ?', ಸರ್ಕಾರದ ಕಾಲಾಳುಗಳು ಕವಿಯ ಮೇಲೆ ಕೇಸು ದಾಖಲಿಸಿ ಕವಿತೆಯನ್ನು ಕೊಲ್ಲುವ ಯತ್ನ ಮಾಡಿದರು. ಆದರೆ ಕವಿತೆಯನ್ನು 'ಜಪ್ತಿ' ಮಾಡಲು ಸಾಧ್ಯವಾಗಲಿಲ್ಲ. ಕವಿಯ ಕವಿತೆ ಮರುಹುಟ್ಟು ಪಡೆಯುತ್ತಲೇ ಇದೆ.
ಸಿಎಎ-ಎನ್ಆರ್ಸಿ ವಿರುದ್ಧ ಕವಿತೆ ಬರೆದ ಕೊಪ್ಪಳದ ಪರ್ತಕರ್ತ, ಕವಿ ಸಿರಾಜ್ ಬಿಸರಳ್ಳಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಆದರೆ ಸಿರಾಜ್ ಬರೆದಿದ್ದ ಕವಿತೆ ಎರಡೇ ದಿನದಲ್ಲಿ ಹನ್ನೆರಡು ಭಾಷೆಗಳಿಗೆ ತರ್ಜುಮೆಗೊಂಡಿದೆ. ಹೆಚ್ಚು-ಹೆಚ್ಚು ಓದುಗರನ್ನು ತಲುಪುತ್ತಿದೆ. ಕವಿಯ ಉಮೇದು ಪೂರ್ತಿಯಾಗುತ್ತಿದೆ.
ಸಿಎಎ ವಿರುದ್ಧ ಕವಿತೆ: ಕೊಪ್ಪಳ ಪತ್ರಕರ್ತನ ಮೇಲೆ ಎಫ್ಐಆರ್
ಸಿರಾಜ್ ಅವರ 'ನಿನ್ನ ದಾಖಲೆ ಯಾವಾಗ ನೀಡುತ್ತಿ?' ಕವನವನ್ನು ಕಾದಂಬಿನಿಯವರು ಹಿಂದಿಗೆ ಅನುವಾದ ಮಾಡಿದ್ದಾರೆ. ಗುರು ಸುಳ್ಯ ತುಳುವಿಗೆ, ವಿಲ್ಸನ್ ಕಟಿಲ್ ಕೊಂಕಣಿಗೆ, ಪದ್ಮಾ ಕೆ ರಾಜ್ ತೆಲುಗಿಗೆ, ಜಿಶನ್ ಅಲ್ ಸಿದ್ಧಿಕಿ ಉರ್ದುವಿಗೆ, ಉಮ್ಮರ್ ಬೋರ್ಕಳ ಮಲಯಾಳಂ ಗೆ, ಮಿಸ್ರಿಯಾ ಇಸ್ಮತ್ ಪಜೀರ್ ಅವರು ಮಲಾಮೆ ಭಾಷೆಗೆ, ನಾಚಪ್ಪ ಹಣಸೂರು ಕೂರ್ಗಿ ಭಾಷೆಗೆ, ಸುರೇಶ್ ಚೌವ್ಹಾಣ್ ಅವರು ಲಂಬಾಣಿ ಭಾಷೆಗೆ, ಇಸ್ಮತ್ ಪಜೀರ್ ಅವರು ಬ್ಯಾರಿ ಭಾಷೆಗೆ ಅನುವಾದಿಸಿದ್ದಾರೆ. ಇಂಗ್ಲಿಷ್, ತಮಿಳು ಭಾಷೆಗೂ ಕವಿತೆ ಅನುವಾದಗೊಂಡಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ 12 ಭಾಷೆಗಳಿಗೆ ತರ್ಜುಮೆಗೊಂಡಿರುವ 'ನಿನ್ನ ದಾಖಲೆ ಯಾವಾಗ ನೀಡುತ್ತಿ' ಕವಿತೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಿಗೆ ತರ್ಜುಮೆಗೊಳ್ಳುವ ಸಾಧ್ಯತೆ ಇದೆ.
ಆಳುವ ಜನರನ್ನು ಪ್ರಶ್ನಿಸುವ 'ನಿನ್ನ ದಾಖಲೆ ಯಾವಾಗ ನೀಡುತ್ತಿ' ಕವಿತೆಯು 'ದೇಶದ್ರೋಹಿ' ಎಂದು ಕೊಪ್ಪಳದ ಗಂಗಾವತಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕವಿತೆಯ, ಕವಿಯ ವಿರುದ್ಧ ದೂರು ದಾಖಲಿಸಿ 'ನಿಯಂತ್ರಿಸುವ' ಸರ್ಕಾರದ ಕಾಲಾಳುಗಳ ಹುನ್ನಾರದ ವಿರುದ್ಧ ಕವಿಗಳು ಸಾತ್ವಿಕ ಪ್ರತಿಭಟನೆಯಾಗಿ ಕವಿತೆಯನ್ನು ಹೆಚ್ಚು ಭಾಷೆಗಳಿಗೆ ಆ ಮೂಲಕ ಹೆಚ್ಚು ಓದುಗರಿಗೆ ತಲುಪಿಸುತ್ತಿದ್ದಾರೆ.