ರಮೇಶ್ ಸಾವು ಅಸಹಜ, ಮೊಬೈಲ್ ಕರೆ ಜಾಡು ಹಿಡಿದ ಪೊಲೀಸರು
ಬೆಂಗಳೂರು, ಅಕ್ಟೋಬರ್ 14 : ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪಿಎ ರಮೇಶ್ ಸಾವು ಅಸಹಜ ಎಂದು ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಸಾವಿನ ತನಿಖೆಗೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.
Recommended Video
ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಮೇಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಮೇಶ್ ಸಹೋದರ ಸತೀಶ್ ನೀಡಿದ ದೂರಿನ ಅನ್ವಯ ಪೊಲೀಸರು ಅಸಹಜ ಸಾವು ಎಂದು ಎಫ್ ದಾಖಲು ಮಾಡಿದ್ದಾರೆ.
ರಮೇಶ್ ಆತ್ಮಹತ್ಯೆ ಪ್ರಕರಣ; ಇಬ್ಬರು ಎಸಿಪಿಗಳಿಂದ ತನಿಖೆ
ಭಾನುವಾರ ರಮೇಶ್ ಅಂತ್ಯಕ್ರಿಯೆ ರಾಮನಗರದ ಮೆಳೇಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. ಪುತ್ರ ಮೋಹಿತ್ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದರು. ಡಾ. ಜಿ. ಪರಮೇಶ್ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಸಿಸಿಟಿವಿಯಲ್ಲಿ ರಮೇಶ್ ಸಾವಿನ ಮುಂಚಿನ ಕ್ಷಣಗಳು ದಾಖಲು
"ಆದಾಯ ತೆರಿಗೆ ದಾಳಿ ನಡೆದ ದಿನದಿಂದ ರಮೇಶ್ ನನ್ನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ. ಈ ಬಗ್ಗೆ ದೂರು ದಾಖಲಿಸುತ್ತೇನೆ" ಎಂದು ಸಹೋದರ ಸತೀಶ್ ಹೇಳಿದ್ದಾರೆ.
'ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಐಟಿ ಅಧಿಕಾರಿಗಳ ಬಳಿಯೇ ಹೇಳಿದ್ದರು'
ಎರಡು ತಂಡಗಳ ರಚನೆ
ರಮೇಶ್ ಸಾವಿನ ಕುರಿತು ತನಿಖೆ ನಡೆಸಲು ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಮಂಜುನಾಥ್ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಧರ್ಮೇಂದ್ರ ನೇತೃತ್ವದ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರು ಚಾಲಕನ ವಿಚಾರಣೆ
ರಮೇಶ್ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಡಾ. ಜಿ. ಪರಮೇಶ್ವರ ಕಾರು ಚಾಲಕ ಅನಿಲ್ ವಿಚಾರಣೆ ನಡೆಸಿದರು. ಅನಿಲ್ ಮತ್ತು ರಮೇಶ್ ಹೆಚ್ಚು ಒಡನಾಟ ಹೊಂದಿದ್ದರು. ಪರಮೇಶ್ವರ ಮನೆಯಿಂದ ಹೊರಟ ರಮೇಶ್ ಅನಿಲ್ ಜೊತೆ ಮಾತುಕತೆ ನಡೆಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ವಿಚಾರಣೆ ನಡೆಸಿದ್ದಾರೆ.
ಕೈ ಬರಹ ಪರಿಶೀಲನೆ
ಬೆಂಗಳೂರು ವಿವಿಯ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಶನಿವಾರ ರಮೇಶ್ ಶವ ಪತ್ತೆಯಾಗಿತ್ತು. ಕ್ಯಾಂಪಸ್ ಆವರಣದಲ್ಲಿಯೇ ಇದ್ದ ರಮೇಶ್ ಕಾರಿನಲ್ಲಿ ಡೆತ್ ನೋಟ್ ಸಿಕ್ಕಿತ್ತು. ಇದನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಡೆತ್ ನೋಟ್ನಲ್ಲಿರುವ ಕೈ ಬರಹ ರಮೇಶ್ ಅವರದ್ದೇ? ಎಂದು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಯಲಿದೆ.
ಮೊಬೈಲ್ ಕರೆ ಪರಿಶೀಲನೆ
ಶನಿವಾರ ಬೆಳಗ್ಗೆ ಕೆಲವು ಸ್ನೇಹಿತರಿಗೆ ರಮೇಶ್ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದ್ದರಿಂದ, ಪೊಲೀಸರು ರಮೇಶ್ ಮೊಬೈಲ್ ಕರೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ತಂಡಗಳನ್ನು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದು, ಅಗತ್ಯ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದಾರೆ.
ಐಟಿ ಅಧಿಕಾರಿಗಳ ವಿಚಾರಣೆ?
ರಮೇಶ್ ಸಾವಿರ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಸಾವಿನ ಕುರಿತು ಹಲವು ಆಯಾಮಗಳಲ್ಲಿ ತನಿಖೆ ನಡೆಸುವ ಪೊಲೀಸರು ಐಟಿ ಅಧಿಕಾರಿಗಳ ವಿಚಾರಣೆ ನಡೆಸಲಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿದೆ.