ಪೊಲೀಸರ ಸಭೆಯಲ್ಲಿ ಮಂಗಳೂರು ಸಮಸ್ಯೆಗೆ ಸಿಎಂ 'ಸಂಧಾನ ಸೂತ್ರ'
ಸಭೆಯಲ್ಲಿ ಮಂಗಳೂರು ಗಲಭೆ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಯಿತು. ಈ ಸಂದರ್ಭ ಪೊಲೀಸರಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿಗಳು "ಸರ್ಕಾರ ನಿಮ್ಮೊಂದಿಗೆ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರ ಬಂದಾಗ ಕಠಿಣ ನಿಲುವು ತೆಗೆದುಕೊಳ್ಳಿ," ಎಂದು ತಾಕೀತು ಮಾಡಿದರು. ಮಾತ್ರವಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿಗೆ ತೆರಳಿ ಸಂಘಟನೆಗಳ ಮುಖಂಡರ ಜತೆ ಸಂಧಾನ ನಡೆಸಿ ಎಂದು ಹೇಳಿದರು.
ಆರೆಸ್ಸೆಸ್ ಶರತ್ ಮಡಿವಾಳ ಶವ ಯಾತ್ರೆಯ ಗ್ರೌಂಡ್ ರಿಪೋರ್ಟ್
"ಕಾನೂನು ಸುವ್ಯವಸ್ಥೆ ಸದಾ ನಿಯಂತ್ರಣದಲ್ಲಿರಬೇಕಾದುದು ಸದಾ ಮುಖ್ಯ. ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಇದು ಅನಿವಾರ್ಯ. ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಜತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ," ಎಂದು ಕಿವಿಮಾತು ಹೇಳಿದರು.
ಕೋಮು ಭಾವನೆಯನ್ನು ಕೆರಳಿಸುವ ಸಂಘಟನೆಗಳಿಗೆ ಬೆಂಬಲವಿಲ್ಲ
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಮು ಭಾವನೆಯನ್ನು ಕೆರಳಿಸುವ ಯಾವುದೇ ಸಂಘಟನೆಗೆ ಸರ್ಕಾರ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. 'ಇದು ಚುನಾವಣೆಯ ವರ್ಷ. ಹೀಗಾಗಿ ಕೋಮುವಾದಿ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕುತ್ತವೆ. ಗಲಭೆಗಳು ಉಂಟಾದಾಗ ರಾಜಕೀಯ ಪಕ್ಷಗಳು ಅದನ್ನು ಲಾಭವಾಗಿ ಪರಿವರ್ತನೆ ಮಾಡಿಕೊಳ್ಳಲು ಮುಂದಾಗುತ್ತವೆ. ಈ ಬಗ್ಗೆ ಎಚ್ಚರವಹಿಸಿ ಎಂದರು.
ಸಂಧಾನ ಪರಿಹಾರ
"ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ಮಂಗಳೂರಿಗೆ ತೆರಳಿ ವಿವಿಧ ಸಂಘಟನೆಗಳ ಮುಖಂಡರನ್ನು ಕರೆದು ಸಭೆ ನಡೆಸಿ. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಿ," ಎಂದ ಮುಖ್ಯಮಂತ್ರಿಗಳು ಮಂಗಳೂರು ಸಮಸ್ಯೆಗೆ ಸಂಧಾನ ಸೂತ್ರ ಮುಂದಿಟ್ಟರು.
ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ
"ಮೊದಲಿನಿಂದಲೂ ಶಾಂತಿ ಮತ್ತು ಸುವ್ಯವಸ್ಥೆಗೆ ಹೆಸರಾದ ರಾಜ್ಯ ಕರ್ನಾಟಕ. ಯಾರೇ ಆಗಲಿ ಸಮಾಜದ ಶಾಂತಿ ಕದಡುವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ," ಎಂದು ಸಿಎಂ ಆದೇಶ ನೀಡಿದರು.
ಚುನಾವಣೆ ವರೆಗೆ ಈ ವಿಚಾರದಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಒಂದೊಮ್ಮೆ ಅಧಿಕಾರಿಗಳು ತಪ್ಪು ಮಾಡಿದರೂ ಅವರ ವಿರುದ್ಧವೂ ಕ್ರಮ ಜರುಗಿಸಬೇಕಾಗುತ್ತದೆ. ಮನುಷ್ಯನ ಜೀವ ಅಮೂಲ್ಯವಾದದ್ದು. ಅದನ್ನು ರಾಜಕೀಯಕ್ಕೆ ಬಲಿಯಾಗಲು ಬಿಡಬಾರದು ಎಂದರು.
ವರ್ಗಾವಣೆ ನೀತಿ
ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ನೀತಿಯೊಂದನ್ನು ಜಾರಿಗೆ ತರಲು ಸರಕಾರ ಮುಂದಾಗಿದ್ದನ್ನು ಸಿಎಂ ಸಭೆಯ ಗಮನಕ್ಕೆ ತಂದರು. ಪೊಲೀಸ್ ಅಧಿಕಾರಿಗಳು ಇನ್ನು ಮುಂದೆ ಒಂದು ಹುದ್ದೆಯಲ್ಲಿ ಎರಡು ವರ್ಷ ಇರುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ವರ್ಗಾವಣೆ ನೀತಿ ಜಾರಿಗೆ ತರಲಾಗುವುದು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ," ಎಂದು ಮುಖ್ಯಮಂತ್ರಿಯವರು ಸೂಚಿಸಿದರು.
ಜನರಲ್ಲಿ ವಿಶ್ವಾಸ ಮೂಡಿಸಿ
"ಪೊಲೀಸ್ ಅಧಿಕಾರಿಗಳು ಅತ್ಯಂತ ಪ್ರಾಮಾಣಿಕವಾಗಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಅಧಿಕಾರಿಗಳ ನಿರ್ಲಕ್ಷ್ಯತನ, ಬೇಜವಾಬ್ದಾರಿಯಿಂದ ತಪ್ಪುಗಳಾಗಬಾರದು. ಯಾವುದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವುದರ ಜೊತೆಗೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ," ಎಂದು ಎಚ್ಚರಿಕೆ ನೀಡಿದರು.
12,000ಪೊಲೀಸರಿಗೆ ಭಡ್ತಿ
ಸರ್ಕಾರ ಬಹುತೇಕ ಸೌಲಭ್ಯಗಳನ್ನು ಪೊಲೀಸರಿಗೆ ನೀಡಿದ್ದು ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಿದೆ. ಹಿಂದಿನ ಯಾವುದೇ ಸರ್ಕಾರಗಳು ಈ ಪ್ರಮಾಣದಲ್ಲಿ ಇಲಾಖೆಗೆ ಸೌಕರ್ಯಗಳನ್ನು ನೀಡಿರಲಿಲ್ಲ. 12 ಸಾವಿರ ಪೊಲೀಸರಿಗೆ ಏಕ ಕಾಲಕ್ಕೆ ಬಡ್ತಿ ನೀಡಿದ್ದೇವೆ. ಸಿಬ್ಬಂದಿ ನೇಮಕ, ಪೊಲೀಸರ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಗಮನ ಹರಿಸುವುದು, ಕ್ಯಾಂಟೀನ್ ಸೌಲಭ್ಯ, ಭತ್ಯೆ ಹೆಚ್ಚಳ, ವಾಹನ ಸೌಲಭ್ಯ, ಇದೇ ಮೊದಲಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಸಿಬ್ಬಂದಿಗಳ ಕಷ್ಟ ಸುಖ ವಿಚಾರಿಸಿ
"ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರೌಡಿಗಳ ಚಟುವಟಿಕೆಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಬೇಕು. ಹಿರಿಯ ಅಧಿಕಾರಿಗಳು ಆಗಾಗ್ಗೆ ಠಾಣೆಗಳಿಗೆ ಭೇಟಿ ನೀಡಿ ಕೆಳಹಂತದ ಸಿಬ್ಬಂದಿಗೆ ತಮ್ಮ ಅನುಭವ ಧಾರೆ ಎರೆಯುವ ಕೆಲಸ ಮಾಡಬೇಕು. ಕೆಳಹಂತದ ಸಿಬ್ಬಂದಿಯ ಕಷ್ಟ, ಸುಖ ವಿಚಾರಿಸುವುದು ಹಿರಿಯ ಪೊಲೀಸ್ ಅಧಿಕಾರಿಗಳ ಕರ್ತವ್ಯ," ಎಂದು ಸಿದ್ದರಾಮಯ್ಯ ಹೇಳಿದರು.
ಸಭೆಯಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಭಾಗವಹಿಸಿದ್ದರು.