ನಿಷೇಧಾಜ್ಞೆ ಉಲ್ಲಂಘಿಸಿದ ಸಿದ್ಧರಾಮಯ್ಯ ಮತ್ತು ಡಿಕೆಶಿ ವಿರುದ್ಧ ಎಫ್ಐಆರ್?
ಬೆಂಗಳೂರು, ಸೆ. 13: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ. ! ವಿಧಾನಸೌಧದಲ್ಲಿ ಇಂದಿನಿಂದ ಸೆ. 24 ರ ವರೆಗೆ ನಡೆಯಲಿರುವ ವಿಧಾನಸಭೆ ಕಲಾಪ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ನಿಷೇಧಾಜ್ಞೆ (crpc 144 ) ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ ಭಾರತೀಯ ತಂಡ ಸಂಹಿತೆ ಸೆಕ್ಷನ್ 188 ಅಡಿ ಪೊಲೀಸರು ಕೇಸು ದಾಖಲಿಸುವ ಸಾಧ್ಯತೆಯಿದೆ. ಸುಗಮ ಕಲಾಪಕ್ಕೆ ಅಡ್ಡಿ ಪಡಿಸಿದ ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನ ಗಾಡಿ ಓಡಿಸುವಾಗ ಕೋಲು ಹಿಡಿದುಕೊಂಡಿದ್ದು ಕೂಡ ನಿಯಮ ಉಲ್ಲಂಘನೆಗೆ ಕಾರಣವಾಗಿದೆ.
ನಿಷೇಧಾಜ್ಞೆ ಹೊರಡಿಸಿದ್ದ ಕಮಲಪಂತ್: ವಿಧಾನಸಭೆ ಕಲಾಪ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವಿಧಾನಸೌಧ ಸುತ್ತಮುತ್ತ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸೆ. 13 ರಿಂದ ಸೆ. 24 ರ ವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ಹೊರಡಿಸಿದ್ದರು. ಈ ಆದೇಶದ ಪ್ರಕಾರ ಕಾನೂನಿಗೆ ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ., ಶಸ್ತ್ರಾಸ್ತ್ರ, ದೊಣ್ಣೆ, ಈಟಿ, ಕತ್ತಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಇತರೆ ವಸ್ತುಗಳನ್ನು ದೈಹಿಕ ಹಿಂಸೆ ಮಾಡುವ ವಸ್ತು ಒಯ್ಯುವಂತಿಲ್ಲ. ಯಾವುದೇ ಸ್ಫೋಟಕ ವಸ್ತು ಸಿಡಿಸುವುದು, ಕಲ್ಲು ಕ್ಷಿಪಣಿಗಳನ್ನು ಎಸೆಯುವ ಸಾಧನಗಳನ್ನು ಒಯ್ಯುವಂತಿಲ್ಲ. ವ್ಯಕ್ತಿಗಳ ಅಥವಾ ಪ್ರತಿಕೃತಿ ದಹನ ಮಾಡುವುದು, ಬಹಿರಂಗ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ಚಿತ್ರಗಳನ್ನು ಮತ್ತು ಸಂಕೇತಗಳನ್ನು ಭಿತ್ತಿಪತ್ರಗಳನ್ನು ಪ್ರದರ್ಶಿಸಸುವುದು ಕಾನೂನು ಬಾಹಿರ.
ಎಲ್ಲಾ ನಿಯಮಗಳು ಉಲ್ಲಂಘನೆ: ಬೆಂಗಳೂರು ನಗರ ಪೊಲೀಸ್ ಆಯುಕ್ತರು ತನ್ನ ಪದನಿಮಿತ್ತ ಅಧಿಕಾರ ಚಲಾಯಿಸಿ ಹೊರಡಿಸಿದ್ದ ನಿಷೇಧಾಜ್ಞೆ ಆದೇಶವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಅನೇಕರು ಉಲ್ಲಂಘನೆ ಮಾಡಿದ್ದಾರೆ. ಎತ್ತಿನ ಗಾಡಿಯಲ್ಲಿ ಹಲವರು ಬಂದು ವಿಧಾನಸೌಧದ ಒಳಗೆ ಪ್ರವೇಶ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಶಾಂತಿಯುತ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಮಾತ್ರವಲ್ಲ, ಸಿದ್ದರಾಮಯ್ಯ ಎತ್ತಿನ ಗಾಡಿಯಲ್ಲಿ ಕೂತಿದ್ದ ವೇಳೆ ಎತ್ತುಗಳನ್ನು ಓಡಿಸಲು ಕೋಲು ಹಿಡಿದುಕೊಂಡಿದ್ದು, ಎಲ್ಲವೂ ನಿಷೇಧಾಜ್ಞೆ ಉಲ್ಲಂಘನೆ. ನಿಯಮದ ಪ್ರಕಾರ ಬೆಂಗಳೂರು ಪೊಲೀಸರು ಭಾರತೀಯ ದಂಡ ಸಂಹಿತೆ 188 ಅಡಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಬೇಕಾಗುತ್ತದೆ. ಹೀಗಾಗಿ ನಿಯಮದ ಪ್ರಕಾರ ನೋಡುವುದಾದರೆ ಎಫ್ಐಆರ್ ದಾಖಲಿಸಿ ಕೂಡಲೇ ಅವರನ್ನು ವಶಕ್ಕೆ ಪಡೆಯಬಹುದಿತ್ತು. ಆದರೆ ಟೈಗರ್ ಸಿದ್ದು ವಿರುದ್ಧ ನಿಜವಾಗಿಯೂ ಎಫ್ಐಆರ್ ಹರಿಯುವ ಧೈರ್ಯ ಪೊಲೀಸರು ತೋರುವರೇ ಎಂದು ಕಾದು ನೋಡಬೇಕಿದೆ.
ಅನೇಕ ಪ್ರಕರಣ ದಾಖಲು: ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತ ಪ್ರತಿಭಟನೆ ಮೊದಲಗೊಂಡು, ರೈತರ ಪ್ರತಿಭಟನೆ, ಸಾರಿಗೆ ನೌಕರರ ಪ್ರತಿಭಟನೆ ವೇಳೆ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಬೆಂಗಳೂರು ಪೊಲೀಸರು ಅನೇಕರ ವಿರುದ್ಧ ಕೇಸು ದಾಖಲಿಸಿದ್ದಾರೆ. ವಾಟಾಳ್ ನಾಗರಾಜ್ ವಿರುದ್ಧ ಅದೆಷ್ಟು ಎಫ್ಐಆರ್ ಆಗಿವೆಯೋ ಲೆಕ್ಕವಿಲ್ಲ. ಇತ್ತೀಚೆಗೆ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೂಡ ಪೊಲೀಸರು ಕೇಸು ದಾಖಲಿಸಿದ್ದರು. ಮಾತ್ರವಲ್ಲ ಮುತ್ತಿಗೆ ಹಾಕಲು ಯತ್ನಿಸಿದ ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ಆದರೆ, ಮಾಜಿ ಸಿಎಂ ಸಿದ್ದು ಅವರೇ ಸ್ವತಃ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಎತ್ತಿನ ಗಾಡಿ ಓಡಿಸಿದ್ದಾರೆ. ಅದರಲ್ಲೂ ವಿಧಾನಸೌಧ ಇತ್ತೀಚಿನ ದಿನಗಳಲ್ಲಿ ಎತ್ತಿನಗಾಡಿ ಒಳಗೆ ನುಗ್ಗಿಸಿದ್ದೇ ಇಲ್ಲ. ಅಂತರದರಲ್ಲಿ ಸದಾ ಐಶರಾಮಿ ಕಾರುಗಳು ಹೋಗುವ ಹಾದರಿಯಲ್ಲಿ ಅನ್ನದಾತನ ಆಪ್ತ ರಕ್ಷಕ ಎತ್ತಿನಗಾಡಿಯನ್ನು ಓಡಿಸಿದ್ದಾರೆ. ಅಡ್ಡಿ ಪಡಿಸಲು ಯತ್ನಿಸಿದ ಪೊಲೀಸರು ಒಂದೇ ಅವಾಜ್ ಬಿಟ್ಟು ಕಳುಹಿಸಿದ್ದಾರೆ. ಇನ್ನೇನಾದರೂ ನಿಷೇಧಾಜ್ಞೆ ಉಲ್ಲಂಘನೆ ಹೆಸರಿನಲ್ಲಿ ಸಿದ್ದು ವಿರುದ್ಧ ಎಫ್ಐಆರ್ ದಾಖಲಾದರೆ ಏನಾಗಬಹುದು? ಅಷ್ಟಕ್ಕೂ ಅಷ್ಟು ಧೈರ್ಯ ಪೊಲೀಸರು ತೋರುತ್ತಾರಾ ಕಾದು ನೋಡಬೇಕು .
Recommended Video