ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ 6 ರಿಂದ 8 ಲಕ್ಷಕ್ಕೆ ಸೇಲ್ ಆಯ್ತು
ಬೆಂಗಳೂರು, ನವೆಂಬರ್ 27 : ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಕಿಂಗ್ಪಿನ್ ಶಿವಕುಮಾರ್ನನ್ನು ಸಿಸಿಬಿ ಕಸ್ಟಡಿ ನೀಡಲಾಗಿದೆ. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿಯೂ ಈತನೇ ಕಿಂಗ್ ಪಿನ್.
ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಮಂಗಳವಾರ ಶಿವಕುಮಾರ್ನನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿತು. ಪ್ರಶ್ನೆ ಪತ್ರಿಕೆ ಖರೀದಿ ಮಾಡಿದ್ದ ಉಳಿದ 115 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಆರೋಪಿ ಬಂಧನ
ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಿಂಗ್ಪಿನ್ ಶಿವಕುಮಾರ್ ಜೊತೆಗೆ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಸಹ ಭಾಗಿಯಾಗಿರುವ ಕುರಿತು ಸಿಸಿಬಿಗೆ ಮಾಹಿತಿ ಸಿಕ್ಕಿದೆ. ಆದ್ದರಿಂದ, ಶಿವಕುಮಾರ್ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಲಿದ್ದಾರೆ.
ಕಾನ್ ಸ್ಟೇಬಲ್ ಪ್ರಶ್ನೆ ಪತ್ರಿಕೆ ಸೋರಿಕೆ; ನ. 25ರ ಪರೀಕ್ಷೆ ಮುಂದೂಡಿಕೆ
ಪಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ನವೆಂಬರ್ 25ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದುಗೊಳಿಸಿ ನೇಮಕಾತಿ ವಿಭಾಗದ ಎಡಿಜಿಪಿ ಆದೇಶ ಹೊರಡಿಸಿದ್ದರು. ಪರೀಕ್ಷೆ ನಡೆಯುವ ಮುಂದಿನ ದಿನಾಂಕ ಇನ್ನೂ ಘೋಷಣೆಯಾಗಿಲ್ಲ....
ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ : ಎಎಸ್ಐಗಳ ಕೈಗೆ ರಿವಾಲ್ವಾರ್!
ಪ್ರಶ್ನೆ ಪತ್ರಿಕೆ ಮಾರಾಟ
ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್ಪಿನ್ ಶಿವಕುಮಾರ್ ಕೊಡಗು ಮತ್ತು ಹಾಸನ ಗಡಿ ಭಾಗದಲ್ಲಿ ಅದನ್ನು ಮಾರಾಟ ಮಾಡುತ್ತಿದ್ದೇನೆ ಎಂಬ ಮಾಹಿತಿಯೂ ಸಿಕ್ಕಿತ್ತು. ಸಿಸಿಬಿ ಎಸಿಪಿ ವೇಣುಗೋಪಾಲ್ ದಾಳಿ ನಡೆಸಿದ್ದರು.
116 ಜನರ ಬಂಧನ
ಕಲ್ಮಠದ ಶ್ರೀ ನಂಜುಡೇಶ್ವರ ವಿದ್ಯಾಮಂದಿರದ ಬಳಿ ಉತ್ತರ ಕರ್ನಾಟಕದಿಂದ ಬಂದ ನೂರಾರು ಮಂದಿ ಜಮಾಯಿಸಿದ್ದಾರೆ ಎಂಬ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆಗ ಪ್ರಮುಖ ಆರೋಪಿ ಶಿವಕುಮಾರ್ ಮತ್ತು ಬಸವರಾಜು ಎಂಬುವವರು ಉತ್ತರ ಕರ್ನಾಟಕದಿಂದ ಆಗಮಿಸಿದ್ದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡುವುದು ಪತ್ತೆಯಾಗಿತ್ತು.
ಪ್ರಶ್ನೆ ಪತ್ರಿಕೆಗಳು ವಶಕ್ಕೆ
ಸಿಸಿಬಿ ಪೊಲೀಸರು ಶಿವಕುಮಾರ್ ಮತ್ತು ಆತನಿಂದ ಪ್ರಶ್ನೆ ಪತ್ರಿಕೆ ಖರೀದಿ ಮಾಡುತ್ತಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು. ಶಿವಕುಮಾರ್ ಬಳಿ ಇದ್ದ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳ ಝೆರಾಕ್ಸ್ ಪ್ರತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಕಲೇಶಪುರದಿಂದ ಎಲ್ಲಾ 116 ಆರೋಪಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು.
6 ರಿಂದ 8 ಲಕ್ಷ ರೂ.ಗೆ ಮಾರಾಟ
ಪ್ರಾಥಮಿಕ ತನಿಖೆಯ ಮೂಲಕ ತಿಳಿಯುವ ಮಾಹಿತಿ ಪ್ರಕಾರ ಶಿವಕುಮಾರ್ 6 ರಿಂದ 8 ಲಕ್ಷಕ್ಕೆ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡುತ್ತಿದ್ದ. ಈ ಹಗರಣಕ್ಕೆ ಸಂಬಂಧಿಸಿದಂತೆ 4 ಮಿನಿ ಬಸ್ ಚಾಲಕರು, ಇನ್ನೋವಾ ಕಾರು ಚಾಲಕ ಮತ್ತು ಲಾರಿ ಕ್ಲೀನರ್ಗಳನ್ನು ವಿಚಾರಣೆ ನಡೆಸಲಾಗಿದೆ.