25 ಸಾವಿರ ರೂಪಾಯಿ ಹಣ ದೋಚಿದ ಪೊಲೀಸ್ ಪೇದೆ
ಚಾಮರಾಜನಗರ,ಮಾರ್ಚ್,14: ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ಪೊಲೀಸ್ ಪೇದೆಯೊಬ್ಬ ಪಾನಮತ್ತನಾಗಿ ಬಟ್ಟೆ ವ್ಯಾಪಾರಿ ಮೇಲೆ ಹಲ್ಲೆ ನಡೆಸಿ ಆತನಿಂದ 25 ಸಾವಿರ ರೂಪಾಯಿ ಹಣ ದೋಚಿ ಆತನೇ ಆರೋಪಿಯ ಸ್ಥಾನದಲ್ಲಿ ನಿಂತಿದ್ದಾನೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೌದಳ್ಳಿ ಗ್ರಾಮದ ವೆಂಕಟಾಚಲ ಎಂಬ ಬಟ್ಟೆ ವ್ಯಾಪಾರಿ ಮೇಲೆ ಕುಡಿದ ಮತ್ತಿನಲ್ಲಿದ್ದ ರಾಮಾಪುರ ಪೊಲೀಸ್ ಠಾಣೆಯ ಪೇದೆ ವಿನಯ್ ಹಲ್ಲೆ ನಡೆಸಿ ವ್ಯಾಪಾರಿ ಬಳಿ ಇದ್ದ ನಗದನ್ನು ಕಸಿದುಕೊಂಡಿದ್ದಾನೆ.[ವಿದ್ಯಾರ್ಥಿನಿ ಬೆನ್ನುಬಿದ್ದ ಪೇದೆಗೆ ಬಿತ್ತು ಭರ್ತಿ ಒದೆ!]
'ನನ್ನ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್ ಪೇದೆ ಮೇಲೆ ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಹಲ್ಲೆಗೊಳಗಾದ ಬಟ್ಟೆ ವ್ಯಾಪಾರಿ ವೆಂಕಟಾಚಲ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.[ಮಂಡ್ಯ : ಸಿಗರೇಟ್ ಸೇದಿದ ಪೇದೆಗೆ ಅಮಾನತು ಶಿಕ್ಷೆ!]
ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಬಟ್ಟೆ ವ್ಯಾಪಾರಿ ವೆಂಕಟಾಚಲ ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತನ ಮೇಲೆ ಹಲ್ಲೆ ನಡೆಸುವಾಗ ಪೊಲೀಸ್ ಪೇದೆಯೊಂದಿಗೆ ಇಬ್ಬರು ಹೋಂಗಾರ್ಡ್ನ ಸಿಬ್ಬಂದಿಗಳಿದ್ದರು ಎಂದು ಗಾಯಾಳು ವೆಂಕಟಾಚಲ ತಿಳಿಸಿದ್ದಾರೆ.