ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲು: ಅಂತರಂಗ ಬಿಚ್ಚಿಟ್ಟ ಎಚ್. ಸಿ.ಮಹದೇವಪ್ಪ
ಬೆಂಗಳೂರು, ನ 11: ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (2018) ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸೋಲಿಗೆ ಕಾರಣವಾದ ಅಂಶಗಳಾವುವು ಎನ್ನುವುದರ ಬಗ್ಗೆ ಮಾಜಿ ಲೋಕೋಪಯೋಗಿ ಸಚಿವ ಮತ್ತು ಸಿದ್ದರಾಮಯ್ಯ ಅವರ ಪರಮಾಪ್ತ ಡಾ.ಎಚ್.ಸಿ.ಮಹದೇವಪ್ಪ ಮನಬಿಚ್ಚಿ ಮಾತನಾಡಿದ್ದಾರೆ.
'ಒನ್ ಇಂಡಿಯಾ' ಕಚೇರಿಗೆ ಆಗಮಿಸಿದ್ದ 'ರಸ್ತೆರಾಜ' ಎಂದೇ ಹೆಸರು ಪಡೆದಿದ್ದ ಮಹದೇವಪ್ಪ, ಫೇಸ್ ಬುಕ್ ಲೈವ್ ಮತ್ತು ಸಂದರ್ಶನದಲ್ಲಿ ಕಾಂಗ್ರೆಸ್ ಸೋಲಲು, 'ಜಾತಿ ರಾಜಕೀಯ' ಮುಖ್ಯ ಅಂಶವಾಯಿತು ಎನ್ನುವ ಮಾತನ್ನು ಹೇಳಿದ್ದಾರೆ. ಅವರು ಹೇಳಿದಿಷ್ಟು:
ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲಿಸುವ ಹೊಣೆ ಮಹದೇವಪ್ಪ ಹೆಗಲಿಗೆ
ಕಳೆದ ಅಸೆಂಬ್ಲಿ ಚುನಾವಣೆಯ ನಂತರ, ರಾಜ್ಯ ರಾಜಕಾರಣದಲ್ಲಿನ ಬದಲಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಮಹದೇವಪ್ಪ, "ಅಸೆಂಬ್ಲಿ ಚುನಾವಣೆ ಮುಗಿದು ಹದಿನಾರು ತಿಂಗಳು ಕಳೆದಿದೆ. ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯನವರ ಸರಕಾರದಲ್ಲಿ ನಡೆದ ಅಭಿವೃದ್ದಿ ಕೆಲಸವನ್ನು, ನಾವು ಸೋತರೂ ಜನ ನೆನೆಸಿಕೊಂಡಿದ್ದಾರೆ" ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
"ಆ ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ದಿಗೆ ಮಾನ್ಯತೆ ಸಿಗದೇ ಇದ್ದಿದ್ದಕ್ಕೆ ಮೂಲ ಕಾರಣ, ಜಾತಿ ಸಮೀಕರಣ. ಇದೇ ಮುಖ್ಯ ವಿಚಾರವಾದಾಗ ಅಭಿವೃದ್ದಿ ವಿಚಾರ ಮೂಲೆಗುಂಪಾಯಿತು. ಇದೇ ಸಿದ್ದರಾಮಯ್ಯನವರ ಮತ್ತು ಕಾಂಗ್ರೆಸ್ ಸೋಲಿಗೆ ಕಾರಣವಾಯಿತು" ಎಂದು ಮಾಜಿ ಸಚಿವ ಮಹದೇವಪ್ಪ ಹೇಳಿದರು.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಆದೇಶಕ್ಕೆ ನಾವು ತಲೆಬಾಗಬೇಕಾಗುತ್ತದೆ. ನಮ್ಮಿಂದಾದ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳುವ ಕೆಲಸವೂ ಆಗಬೇಕು" ಎಂದು ಮಹದೇವಪ್ಪ, ಸಂದರ್ಶನದ ವೇಳೆ ಅಭಿಪ್ರಾಯ ಪಟ್ಟಿದ್ದಾರೆ.
"ಸಿದ್ದರಾಮಯ್ಯನವರ ಸರಕಾರದಲ್ಲಾದ ಅಭಿವೃದ್ದಿಯ ಬಗ್ಗೆ ಜನ ಈಗ ಮಾತನಾಡಿಕೊಳ್ಳುತ್ತಿದ್ದಾರೆ. ಜನರ ಮನಸ್ಸು ಬದಲಾವಣೆಯಾಗಿದೆ. ಜನ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ಸರಕಾರದ ಕೆಲಸವನ್ನು ಮೆಲುಕು ಹಾಕುತ್ತಿದ್ದಾರೆ" ಎಂದು ಮಹದೇವಪ್ಪ ಹೇಳಿದರು.