ಭ್ರೂಣಲಿಂಗ ಪತ್ತೆ ಕಾಯ್ದೆ ಉಲ್ಲಂಘನೆ:ಸೂಕ್ತ ಪ್ರಾಧಿಕಾರಗಳಿಗೆ ಮಾತ್ರ ಕೇಸು ದಾಖಲಿಸಲು ಅವಕಾಶ
ಬೆಂಗಳೂರು.ಮಾ.2; ಭ್ರೂಣ ಲಿಂಗ ಪತ್ತೆ ನಿಷೇಧಿಸುವ ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯ್ದೆ 1994ರಡಿ ಸೂಕ್ತ ಪ್ರಾಧಿಕಾರ (ಅಧಿಕಾರಿ)ಗಳಿಗೆ ಮಾತ್ರ ಕೇಸುಗಳನ್ನು ದಾಖಲಿಸಲು ಅವಕಾಶವಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತಂತೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದ್ದು, ಬೆಳಗಾವಿ ಜಿಲ್ಲೆಯ ಗೋಕಾದ ಧೋಂಡಿಭಾ ಅನ್ನ ಜಾದವ್ ಸ್ಮಾರಕ ಆಸ್ಪತ್ರೆ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
ಕಾಯಿದೆಯ ನಿಯಮಗಳ ಪ್ರಕಾರ ಆರೋಗ್ಯ ಇಲಾಖೆಯ ಎಲ್ಲರಿಗೂ ನಿಯಮ ಉಲ್ಲಂಘಿಸಿದ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಕಾಯಿದೆಯ ಸೆಕ್ಷನ್ 17ರ ಪ್ರಕಾರ ಕಾಯ್ದೆ ಮತ್ತು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಕೆಲವು ಅಧಿಕಾರಿಗಳಿಗೆ ಅಂತಹ ಅಧಿಕಾರವನ್ನು ನಿಯೋಜಿಸಲಾಗಿರುತ್ತದೆ. ಅವರು ಮಾತ್ರ ಕೇಸುಗಳನ್ನು ದಾಖಲಿಸಬಹುದೇ ಹೊರತು ಎಲ್ಲ ಅಧಿಕಾರಿಗಳಲ್ಲ ''ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಸರ್ಕಾರ 2011ರಲ್ಲಿ ಜಿಲ್ಲಾ ಮಟ್ಟದಲ್ಲಿ ಅಯಾ ಉಪ ವಿಭಾಗಗಳಲ್ಲಿ ಉಪವಿಭಾಗಾಧಿಕಾರಿ (ಎಸಿ)ಗಳನ್ನು ಸೂಕ್ತ ಪ್ರಾಧಿಕಾರಿಗಳೆಂದು ನಿಯೋಜಿಸಿದೆ. ಅದರಂತೆ ಅವರು ಮಾತ್ರ ಪ್ರಕರಣಗಳನ್ನು ದಾಖಲಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಆದೇಶದ ಪ್ರಕಾರ ಯಾವ ಅಧಿಕಾರಿಗಳನ್ನು ಸೂಕ್ತ ಪ್ರಾಧಿಕಾರಗಳೆಂದು ಘೋಷಿಸಲಾಗಿದೆಯೋ ಅವರು ಸಲ್ಲಿಸಿರುವ ದೂರನ್ನು ಮಾತ್ರ ಮ್ಯಾಜಿಸ್ಟ್ರೇಟ್ ಪರಿಗಣಿಸಿ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಕಯ, ತಾಲೂಕು ಆರೋಗ್ಯಾಧಿಕಾರಿ ಸಲ್ಲಿಸಿದ್ದ ದೂರನ್ನು ರದ್ದುಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಗೋಕಾಕದ ಗೋಪಾಲ್ ಅವರು 2016ರಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ಬಳಿಕ ಅವರು ಪಿಎನ್ ಡಿಟಿ ಕಾಯ್ದೆ ಸೆಕ್ಷನ್ 28ರ ಪ್ರಕಾರ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದರು.
ಮ್ಯಾಜಿಸ್ಟ್ರೇಟ್ ದೂರಿನ ಮೇರೆಗೆ ಕಾಗ್ನಿಜೆನ್ಸ್ ಪಡೆದುಕೊಂಡು ಆಸ್ಪತ್ರೆಗೆ ವಿರುದ್ಧ ತನಿಖೆಗೆ ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಆಸ್ಪತ್ರೆ, ನಿಯಮದಂತೆ ಉಪ ವಿಭಾಗಾಧಿಕಾರಿ (ಎಸಿ)ಗೆ ಮಾತ್ರ ಪಿಎನ್ ಡಿಸಿ ಕಾಯ್ದೆ ಉಲ್ಲಂಘನೆ ಬಗ್ಗೆ ಕ್ರಿಮಿನಲ್ ದೂರು ಸಲ್ಲಿಸುವ ಸಕ್ಷಮ ಪ್ರಾಧಿಕಾರವಾಗಿದ್ದಾರೆ. ಆದರೆ ತಾಲೂಕು ಆರೋಗ್ಯಾಧಿಕಾರಿ ಸಲ್ಲಿಸಿರುವ ದೂರನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್ ಕ್ರಮ ಕೈಗೊಂಡಿದ್ದು, ಆ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
Recommended Video