ಆರ್ಥಿಕ ಅವ್ಯವಹಾರ: ಸಾಕ್ಷಿ ಸಂಗ್ರಹಿಸದ ಸಿಬಿಐ, ಡಿಕೆಶಿಗೆ ಸದ್ಯಕ್ಕೆ ರಿಲೀಫ್
ಬೆಂಗಳೂರು, ನವೆಂಬರ್ 06: ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿ ದೆಹಲಿಯ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿಗೆ ರಿಟರ್ನ್ ಆಗಿ ದೇಗುಲ ದರ್ಶನದಲ್ಲಿ ನಿರತರಾಗಿದ್ದಾರೆ. ಈ ನಡುವೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ನಂತರ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುವ ಯಾವುದೇ ಪ್ರಕ್ರಿಯೆಗೆ ತ್ವರಿತಗತಿಯಲ್ಲಿ ಚಾಲನೆ ಸಿಕ್ಕಿಲ್ಲ.
ಬೇನಾಮಿ ಆಸ್ತಿ, ಅಕ್ರಮ ಹಣ ಸಂಗ್ರಹ ಸೇರಿದಂತೆ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷಿ ಸಂಗ್ರಹಿಸುವಲ್ಲಿ ಕೇಂದ್ರ ತನಿಖಾ ತಂಡ ಸಿಬಿಐ ವಿಫಲವಾಗಿದ್ದು, ಸದ್ಯಕ್ಕೆ ಡಿಕೆಶಿಗೆ ರಿಲೀಫ್ ಸಿಕ್ಕಂತಾಗಿದೆ.
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಮತ್ತೆ ಇ.ಡಿ ಸಮನ್ಸ್
ದೆಹಲಿ ಕೋರ್ಟಿನಿಂದ ಜಾಮೀನು ಪಡೆದು ಹೊರಬಂದ ಡಿಕೆ ಶಿವಕುಮಾರ್ ವಿರುದ್ಧ ಸಾಕ್ಷ್ಯ ಸಂಗ್ರಹಣೆಗೆ ಸಿಬಿಐ ಮುಂದಾಗಿತ್ತು. ತನಿಖಾ ಸಂಸ್ಥೆಗಳು 2017ರ ಐಟಿ ದಾಳಿ ಪ್ರಕರಣ ತನಿಖೆಯನ್ನು ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿ, ತನಿಖೆ ಮುಂದುವರೆಸಿ ವಿಚಾರಣೆ ಮಾಡಿದ್ದು, ಕಾನೂನು ಹೋರಾಟ ಮುಂದುವರೆದಿದೆ.
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?
ಇದಕ್ಕೆ ಪೂರಕವಾಗಿ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಬ್ಯಾಂಕ್ ಖಾತೆಗಳ ನಡುವಿನ ಹಣ ವರ್ಗಾವಣೆ, ಡಿಕೆಶಿ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ವಿವರ, ಸೌರಶಕ್ತಿ ಸ್ಥಾವರ ನಿರ್ಮಾಣ ಗುತ್ತಿಗೆ ಟೆಂಡರ್ ಹೀಗೆ ವಿವಿಧ ರೀತಿಯಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯ ನಡೆದಿತ್ತು.
ಸಿಬಿಐ ತನಿಖೆಗೆ ತ್ವರಿತವಾಗಿ ವಹಿಸಿದ್ದನ್ನು ಪ್ರಶ್ನಿಸಿದ್ದರು
"ನಾನು ಒಬ್ಬ ಪ್ರಜಾಪ್ರತಿನಿಧಿಯಾಗಿ ಕಾನೂನು ಗೌರವಿಸುತ್ತೇನೆ. ನನ್ನ ಪತ್ನಿ, ಪುತ್ರಿ ಮತ್ತು ತಮ್ಮನ ಅಫಿಡವಿಟ್ ಈಗಾಗಲೇ ಸಲ್ಲಿಸಿದ್ದೇನೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಲೆಕ್ಷನ್ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ.ಯಾರಿಗೂ ಯಾವ ಕಾಲಕ್ಕೂ ದ್ರೋಹ ಮಾಡಿಲ್ಲ. ಯಾರ ಬೆನ್ನಿಗೆ ಚೂರಿ ಹಾಕಿಲ್ಲ" ಎಂದ ಡಿಕೆಶಿ, ಬಂಡೆ ಚೂರು ಚೂರಾಯ್ತು ಎಂದ್ರು, 40 ವರ್ಷಗಳ ರಾಜಕಾರಣ ಮುಗಿಸುವ ಷಡ್ಯಂತ್ರ ಮಾಡಿದ್ರು ಎಲ್ಲಕ್ಕೂ ಉತ್ತರ ನೀಡುತ್ತೇನೆ ಎಂದು ದೆಹಲಿಯಿಂದ ಬಂದ ಬಳಿಕ ಅನೇಕ ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿಬಿಐ ತನಿಖೆಗೆ ತ್ವರಿತವಾಗಿ ವಹಿಸಿದ ಬಿ.ಎಸ್ ಯಡಿಯೂರಪ್ಪ ಅವರನ್ನು ಮಾತಿನ ಮಧ್ಯೆ ಎಳೆ ತಂದಿದ್ದರು. ಇದಾದ ಬಳಿಕ ಮೂಲಗಳ ಪ್ರಕಾರ ರಾಜ್ಯ ಸರ್ಕಾರದಿಂದ ಡಿಕೆಶಿ ಕೇಸ್ ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಸಿಬಿಐ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂಬ ಸುದ್ದಿ ಬಂದಿದೆ. ಹೀಗಾಗಿ, ಸಿಬಿಐ ಕೂಡಾ ಪ್ರಕರಣ ಕೈಗೆತ್ತಿಕೊಂಡರೂ ತಕ್ಷಣಕ್ಕೆ ಸಮನ್ಸ್ ಜಾರಿಗೊಳಿಸುವುದಿಲ್ಲ ಎಂಬ ಮಾಹಿತಿ ಬಂದಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆ ಶಿ
ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ರಾಜಕೀಯ ಮಾರ್ಗದರ್ಶಿ, ಮಾಜಿ ಸಚಿವ ಡಿಕೆ ಶಿವಕುಮಾರ್ ನಡುವೆ 50 ಕೋಟಿ ರೂ. ಗೂ ಅಧಿಕ ಆರ್ಥಿಕ ವ್ಯವಹಾರ ನಡೆದಿದೆ, ಇದಕ್ಕೆ ಸೂಕ್ತ ದಾಖಲೆ ಸಿಕ್ಕಿಲ್ಲ ಎಂಬ ಆರೋಪವಿದೆ. ಈ ವ್ಯವಹಾರದ ಬಗ್ಗೆ ವಿವರ ಸಿಕ್ಕಿದ್ದರೂ ಇದರಲ್ಲಿ ಅವ್ಯವಹಾರ ನಡೆದಿದೆ ಎನ್ನಲು ಯಾವುದೇ ಸಾಕ್ಷ್ಯ ಸಿಗದ ಕಾರಣ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಸಿಬಿಐ ಮುಂದಾಗಿಲ್ಲ ಎಂದು ತಿಳಿದು ಬಂದಿದೆ.
ಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ 'ಇಡಿ' ಗೆ ಆಸ್ತ್ರ
ಸೋಲಾರ್ ಘಟಕ ಸ್ಥಾಪನೆ
ಸೋಲಾರ್ ಪ್ಲಾಂಟ್ ಘಟಕ ಸ್ಥಾಪನೆ ಟೆಂಡರ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೂ ಸೂಕ್ತ ಸಾಕ್ಷ್ಯ ಲಭ್ಯವಾಗಿಲ್ಲ. ಸುಮಾರು 1,500 ಎಕರೆ ಪವರ್ ಪ್ಲಾಂಟ್ ನಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ ಓಪನ್ ಟೆಂಡರ್ ಮಾಡಿದರ ಬಗ್ಗೆ ಸರ್ಕಾರದಲ್ಲಿ ದಾಖಲೆಗಳಿವೆ. ಇದೇ ರೀತಿ ಕಲ್ಲಿದ್ದಲು ಖರೀದಿಯಲ್ಲಿಯೂ ಯಾವುದೇ ಅವ್ಯವಹಾರದ ಬಗ್ಗೆ ಸಾಕ್ಷ್ಯವಿಲ್ಲ ಎಂದು ತಿಳಿದು ಬಂದಿದೆ.
ಸಿಬಿಐ ಮುಂದಿರುವ ಆಯ್ಕೆಗಳೇನು?
ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಲು ಸಿಬಿಐಗೆ ಸೂಕ್ತ ಸಾಕ್ಷಿ ಆಧಾರಗಳ ಅಗತ್ಯವಿದೆ. ಡಿಕೆಶಿ ಹಾಗೂ ಕುಟುಂಬಸ್ಥರ ಆಸ್ತಿ, ದಾಖಲೆ ಪತ್ರಗಳ ಪರಿಶೀಲನೆ ಮಾಡಲಾಗಿದೆ. ಯಾವುದೇ ಅವ್ಯವಹಾರ ಕಂಡು ಬಂದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿ ಎಫ್ಐಆರ್ ಹಾಕಿ, ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಬಹುದು. ವಿಚಾರಣೆ ವೇಳೆ ಸಮರ್ಪಕ ಪ್ರತಿಕ್ರಿಯೆ ದಾಖಲೆಗಳನ್ನು ಒದಗಿಸದಿದ್ದರೆ, ಆರೋಪಿಯನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರಪಡಿಸಿ, ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಬಹುದು.