ಮೋದಿಯನ್ನು ಭೇಟಿ ಮಾಡಿದ ಉಕ್ರೇನ್ನಲ್ಲಿ ಮೃತಪಟ್ಟ ವೈದ್ಯ ವಿದ್ಯಾರ್ಥಿ ನವೀನ್ ಕುಟಂಬ
ಬೆಂಗಳೂರು, ಜೂ. 20: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವೇಳೆ ಪ್ರಾಣಬಿಟ್ಟ ಕನ್ನಡಿಗ ವೈದ್ಯ ವಿದ್ಯಾರ್ಥಿ ನವೀನ್ ಅವರ ತಂದೆ, ತಾಯಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ನವೀನ್ ತಂದೆ ಶೇಖರಪ್ಪ ಹಾಗೂ ತಾಯಿ ವಿಜಯಲಕ್ಷ್ಮೀ, ಸಹೋದರ ಹರ್ಷ ಅವರು ಸಿಎಂ ಬೊಮ್ಮಾಯಿ ಜತೆಗೆ ಪ್ರಧಾನಿ ಅವರನ್ನು ಭೇಟಿ ಮಾಡಿದರು. ಶೇಖರಪ್ಪ ಅವರ ಮಾತು ಆಲಿಸಿದ ಪ್ರಧಾನಿಗಳು ಸಾಂತ್ವನ ಹೇಳಿ ಭರವಸೆ ಮಾತನ್ನಾಡಿದ್ದಾರೆ.
ಉಕ್ರೇನ್ ನಿಂದ ಬಂದಿರುವ ಕರ್ನಾಟಕದ ಮೆಡಿಕಲ್ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎದುರಾಗಿರುವ ತೊಡಕು ನಿವಾರಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡುವಂತೆ ನವೀನ್ ತಂದೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿದ್ದಾರೆ. ವಿದ್ಯಾರ್ಥಿಗಳ ಡೋಲಾಯಮಾನ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಅವರ ಗಮನಕ್ಕೆ ತಂದಿದ್ದು, ಅದ ನಮಗೂ ಫೋನ್ ಮಾಡಿ ಆರೋಗ್ಯ ವಿಚಾರಿಸುವ ನವೀನ್ ಸ್ನೇಹಿತರು ವಿದ್ಯಾಭ್ಯಾಸ ಡೋಲಾಯಮಾನ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ಧೈರ್ಯ ಹೇಳುವ ಜೊತೆಗೆ ವಿದ್ಯಾಭ್ಯಾಸಕ್ಕೆ ಅನುವು ಮಾಡುವಂತೆ ನವೀನ್ ತಂದೆ ಅವರು ಇಟ್ಟ ಮನವಿಗೆ ಸ್ಪಂದಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯದಿಂದಲೇ ನವೀನ್ ಅವರ ಪೋಷಕರಿಗೆ ಕರೆ ಬಂದಿತ್ತು. ಇದರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖುದ್ದು ಶೇಖರಪ್ಪ ಅವರಿಗೆ ಪೋನ್ ಮಾಡಿ ಶೇಖರಪ್ಪ ಗ್ಯಾನಗೌಡರನ್ನು ಬೆಂಗಳೂರಿಗೆ ಬರುವಂತೆ ಮನವಿ ಮಾಡಿದ್ದರು. ದಾವಣಗೆರೆಯ ಚಳಗೇರಿ ನಿವಾಸಿ ಶೇಖರಪ್ಪ ಗ್ಯಾನಗೌಡ ಮತ್ತು ವಿಜಯಲಕ್ಷ್ಮೀ ದಂಪತಿ ತಮ್ಮ ಮತ್ತೊಬ್ಬ ಪುತ್ರ ಹರ್ಷ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.
ಉಕ್ರೇನ್ ನಲ್ಲಿ ವೈದ್ಯಕೀಯ ಪದವಿ ಓದುತ್ತಿದ್ದ ಶೇಖರಪ್ಪ ಗ್ಯಾನಗೌಡ ಅವರ ಪುತ್ರ ನವೀನ್ ಮಾ. 21 ರಂದು ರಷ್ಯಾ ಉಕ್ರೇನ್ ಯುದ್ಧದ ವೇಳೆ ಸಾವನ್ನಪ್ಪಿದ್ದರು. ಆ ಬಳಿಕ 21 ದಿನಗಳ ಬಳಿಕ ನವೀನ್ ಮೃತದೇಹವನ್ನು ಕರ್ನಾಟಕಕ್ಕೆ ತರಿಸಲಾಗಿತ್ತು. ನವೀನ್ ಸಾವಿಗೆ ಕಂಬನಿ ಮಿಡಿದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಶೇಖರಪ್ಪ ಅವರಿಗೆ ಸ್ವತಃ ಕರೆ ಮಾಡಿ ಸಾಂತ್ವನ ಹೇಳಿದ್ದರು. ಮೃತದೇಹ ವಾಪಸು ತರುವುದಾಗಿ ಹೇಳಿದ್ದರು. ಅದರಂತೆ ಪ್ರಧಾನಿ ಮೋದಿ ನವೀನ್ ಮೃತದೇಹವನ್ನು ಭಾರತಕ್ಕೆ ತರಿಸುವಲ್ಲಿ ಯಶಸ್ವಿಯಾಗಿದ್ದರು.