ರಾಮದಾಸ್ ಜತೆ ಮೋದಿ ಸಲುಗೆಯ ಮಾತು: ಸಂಸದೆ ಸುಮಲತಾ ಕುಶಲೋಪಹರಿ ವಿಚಾರ
ಬೆಂಗಳೂರು, ಜೂ. 20: ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಭೇಟಿ ವೇಳೆ ಸಂಸದ ಪ್ರತಾಪ ಸಿಂಹ ಅವರಿಗಿಂತಲೂ ಅವರ ಎದುರಾಳಿಗಳೇ ಸಾರ್ವಜನಿಕ ವೇದಿಕೆಯಲ್ಲಿ ಮೋದಿ ಪ್ರೀತಿಗೆ ಪಾತ್ರರಾಗಿದ್ದಾರೆ. ಮೈಸೂರು - ಮಂಡ್ಯ ರಾಜಕೀಯ ವಲಯದಲ್ಲಿ ಈ ವಿಷಯ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಆರಂಭದಿಂದಲೂ ಮೈಸೂರು ಸಂಸದ ಪ್ರತಾಪ ಸಿಂಹ ಹಾವು -ಮುಂಗುಸಿ ಮಾದರಿ ಕಿತ್ತಾಡಿಕೊಳ್ಳುತ್ತಲೇ ಇದ್ದಾರೆ. ಅದರಲ್ಲೂ ಬೆಂಗಳೂರು- ಮೈಸೂರು ದಶಪಥ ರಸ್ತೆ ವಿಚಾರದಲ್ಲಿ ಇವರ ಕಾಗಳ ಬೀದಿಗೆ ಬಂದಿತ್ತು. ಸುಮಲತಾ ಕೆಲಸಕ್ಕೆ ಬರದ ಸಂಸದೆ ಎಂದು ಪ್ರತಾಪ ಸಿಂಹ ಜರಿದಿದ್ದರು. ಇದಕ್ಕೆ ಪ್ರತಿಯಾಗಿ ಸುಮಲತಾ ಕೂಡ ಟಾಂಗ್ ಕೊಟ್ಟಿದ್ದರು. ದಶಪಥ ರಸ್ತೆ ವಿಚಾರದಲ್ಲಂತೂ ಸುಮಲತಾ ಮತ್ತು ಪ್ರತಾಪ ಸಿಂಹ ನಡುವೆ ಮಾತಿನ ಸಮರ ನಡೆದಿತ್ತು. ಸುಮಲತಾ ಅವರ ಗೆಲುವಿನ ಅಸ್ಮಿತೆಯನ್ನೇ ಪ್ರತಾಪ ಸಿಂಹ ಪ್ರಶ್ನಿಸಿದ್ದರು.
ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದರೂ ಸಂಸದೆ ಸಮಲತಾ ಅವರು ಬಿಜೆಪಿ ಸೇರುವ ಪ್ರಯತ್ನಗಳು ನಡೆಯುತ್ತಿವೆ. ಮಿಗಿಲಾಗಿ ತನ್ನ ವೈಯಕ್ತಿಕ ವರ್ಚಸ್ಸಿನಿಂದಲೇ ದೆಹಲಿ ನಾಯಕರ ಜತೆ ರಾಜಕೀಯವಾಗಿ ಉತ್ತಮ ಬಾಂಧವ್ಯ ಗಳಿಸಿದ್ದಾರೆ. ಆದರೆ ಸಂಸದ ಪ್ರತಾಪ ಸಿಂಹ ಹಾಗೂ ಸುಮಲತಾ ಅವರಿಗೆ ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗೆ ಆಗುವುದಿಲ್ಲ. ಅಭಿವೃದ್ಧಿ ವಿಚಾರ, ರಾಜಕೀಯ ವಿಚಾರವಾಗಿಯೂ ಇಬ್ಬರೂ ಮುನಿಸಿಕೊಂಡಿದ್ದಾರೆ.
ಯೋಗಕ್ಷೇಮ ವಿಚಾರಿಸಿದ ಮೋದಿ:
ಮೈಸೂರಿನಲ್ಲಿ ಸೋಮವಾರ ಸಂಜೆ ನಡೆದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸುಮಲತಾ ಅವರನ್ನು ಬಹಿರಂಗ ವೇದಿಕೆಯಲ್ಲಿ ಮಾತನಾಡಿದ್ದಾರೆ. ಮಾತ್ರವಲ್ಲ, ಕುಟುಂಬದ ಯೋಗಕ್ಷೇಮ ವಿಚಾರಿಸಿದ್ದು ಇದೀಗ ಸಾರ್ವಜನಿಕ ಚರ್ಜೆಗೆ ಕಾರಣವಾಗಿದೆ. ಸುಮಲತಾ ಅವರನ್ನು ಮೋದಿಯವರೇ ಖುದ್ದು ಮಾತನಾಡಿಸಿ ಕುಶಲೋಪಹರಿ ವಿಚಾರಿಸಿದ್ದು, ಸುಮಲತಾ ಅವರ ಬೆಂಬಲಿಗರಲ್ಲಿ ಭಾರೀ ಸಂತಸ ಮನೆ ಮಾಡಿದೆ. ಕೆಲಸಕ್ಕೆ ಬರದ ಸಂಸದೆ ಎಂದಿದ್ದ ಪ್ರತಾಪ ಸಿಂಹ ಅವರನ್ನು ಮೋದಿ ಯಾಕೆ ಬಹಿರಂಗ ವೇದಿಕೆಯಲ್ಲಿ ಒಂದು ಮಾತು ಆಡಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ದಶಕಗಳಿಂದ ರಾಜಕಾರಣ ಮಾಡಿದವರನ್ನೇ ಮಾತನಾಡಿಸದ ಮೋದಿ ಅವರು ನಮ್ಮ ಸುಮಕ್ಕ ಅವರನ್ನು ಮಾತನಾಡಿಸಿದ್ರು ಅಂದ್ರೆ ಅವರ ಪವರ್ ಏನಿರಬೇಕು ಎಂದು ಮಂಡ್ಯದ ಜನತೆ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ವಿಪರ್ಯಾಸವೆಂದರೆ ಮೋದಿ ಅವರು ಸೋಮವಾರ ಸಂಜೆ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಮತ್ತು ಸಂಸದ ಪ್ರತಾಪ ಸಿಂಹ ಅವರು ಒಂದೇ ವೇದಿಕೆ ಹಂಚಿಕೊಂಡಿದ್ದರು. ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಇಬ್ಬರೂ ಒಂದೇ ಪರದೆಯ ಸಿಂಹ ಬೆಂಬಲಿಗರಲ್ಲಿ ಬೇಸರ ಮೂಡಿಸಿದೆ. ನಮ್ಮ ಬಾಸನ್ನು ಯಾಕೆ ಪ್ರಧಾನಿಗಳು ಸಾರ್ವಜನಿಕವಾಗಿ ಮಾತನಾಡಿಸಲಿಲ್ಲ ಎಂಬ ಪ್ರಶ್ನೆ ಅವರದ್ದು.
ರಾಮದಾಸ್ ಬೆನ್ನು ಗುದ್ದಿ ಮಾತನಾಡಿದ ಮೋದಿ
ಪ್ರಧಾನಿ ಮೋದಿ ಅವರ ಮೈಸೂರು ಭೇಟಿ ಕಾರ್ಯಕ್ರಮದ ಸಿದ್ಧತೆ ಮುಂದಾಳತ್ವ ವಹಿಸಿದ್ದ ಪ್ರತಾಪ ಸಿಂಹ, ತಾನೇ ಪವರ್ ಫುಲ್ ಎಂಬಂತೆ ಬಿಂಬಿಸಿಕೊಂಡಿದ್ದರು. ಮಾಜಿ ಸಚಿವರಿಗೆ, ಶಾಸಕರಿಗೆ ಯಾರಿಗೂ ವೇದಿಕೆ ಪ್ರವೇಶವಿಲ್ಲ ಎಂದೆಲ್ಲಾ ಹೇಳಿಕೆ ನೀಡಿದ್ದರು. ರಸ್ತೆ ಬದಿ ಹಾಕಿದ್ದ ಬ್ಯಾನರ್ ಗಳನ್ನು ಕಿತ್ತು ಬಿಸಾಡಿದ್ದರು. ಈ ಮೂಲಕ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಇಬ್ಬರೂ ಬಹಿರಂಗವಾಗಿಯೇ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದರು.
ಪ್ರತಾಪ್ ಸಿಂಹ ಅವರ ಮತ್ತೊಬ್ಬ ಎದುರಾಳಿ ಮಾಜಿ ಸಚಿವ ಎಸ್. ಎ. ರಾಮದಾಸ್ ಅವರನ್ನು ಸ್ವತಃ ಮೋದಿ ಅವರೇ ಸಮೀಪ ಕರೆಸಿಕೊಂಡು ಬೆನ್ನು ಮೇಲೆ ಪ್ರೀತಿಯಿಂದ ಗುದ್ದಿ ಮಾತನಾಡಿದ್ದಾರೆ. ಅಲ್ಲದೇ ರಾಮದಾಸ್ ಅವರ ತಾಯಿಯನ್ನು ಬಹಿರಂಗ ವೇದಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ. ಒಬ್ಬ ಮಾಜಿ ಸಚಿವರನ್ನು ವೇದಿಕೆಗೆ ಕರಿಸಿಕೊಂಡು ಅತಿ ಪ್ರೀತಿಯಿಂದ ಬೆನ್ನು ಮೇಲೆ ಗುದ್ದಿ ಮಾತನಾಡಿಸಿ ಆಪ್ತತೆ ಮರೆಯುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪ್ರಧಾನಿ ಮೋದಿ ಸ್ಟಂಟ್ ಮಾಸ್ಟರ್ ಅಲ್ಲ! ನೇರ, ನೇರ, ಆತ್ಮ ಗೌರವಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುವುದೂ ಇಲ್ಲ. ಜನರ ಮುಂದೆ ಬಿಂಬಿಸಿಕೊಳ್ಳುವ ಸ್ಟಂಟ್ ಮಾಡಲ್ಲ. ಆದ್ರೆ ರಾಮದಾಸ್ ಅವರನ್ನು ಕರೆಸಿ ಮಾತನಾಡಿಸಿದ ಪರಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ನಮಗೆ ಮೋದಿ ಗೊತ್ತು, ಅಮಿತ್ ಷಾ ಗೊತ್ತು ಎಂದ ರೈಲು ಬಿಡೋ ನಾಯಕರಿಗೆ ಕಡಿಮೆ ಇಲ್ಲ. ಆದರೆ ರಾಮದಾಸ್ ಯಾವತ್ತು ಮೋದಿ ನನಗೆ ಗೊತ್ತು ಅಂತ ಎಲ್ಲೂ ಹೇಳಿಕೊಂಡಿಲ್ಲ. ರಾಮದಾಸ್ ಅವರ ತಾಯಿ, ಅವರ ಕುಟುಂಬದ ಕುಶಲೋಪಹರಿ ಪ್ರಧಾನಿ ಮೋದಿ ಬಹಿರಂಗ ವೇದಿಕೆಯಲ್ಲಿ ವಿಚಾರಿಸಿದ್ದು ಮೈಸೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಮದಾಸ್ ಸ್ವತಃ ಮೋದಿ ಆತ್ಮೀಯತೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರ ಸಂಜೆ ಮೈಸೂರಿನಲ್ಲಿ ನಡೆದ ಸಮಾರಂಭಮದಲ್ಲಿ ಸಂಸದ ಪ್ರತಾಪ ಸಿಂಹ ಅವರಿಗಿಂತಲೂ ಅವರ ಎದುರಾಳಿಗಳು ಮೋದಿ ಪ್ರೀತಿಗೆ ಪಾತ್ರವಾಗಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
Recommended Video