ಜನಸ್ನೇಹಿ ಸ್ಪಂದನೆಯ ಮೂಲಕ ಭಾರತ ವಿಶ್ವಗುರು ಆಗಲಿದೆ: ಸಚಿವ ಭಗವಂತ್ ಖೂಬಾ
ಬೆಂಗಳೂರು, ಸೆ. 07: "ಜನಸ್ನೇಹಿ ಸ್ಪಂದನೆಯ ಮೂಲಕ ಭಾರತ ವಿಶ್ವಗುರು ಆಗಲು ಸಾಧ್ಯವಿದೆ ಎಂದು ಕಳೆದ 7 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಈ ದೇಶದ ಜನರಿಗೆ ವಿಶ್ವಾಸವನ್ನು ಕೊಟ್ಟಿದೆ. ಪಕ್ಷವು ಕ್ರಿಯಾಶೀಲ ಕಾರ್ಯಕರ್ತರಿಗೆ ಉನ್ನತ ಜವಾಬ್ದಾರಿಯನ್ನು ನೀಡುತ್ತಲೇ ಬಂದಿದೆ" ಎಂದು ಕೇಂದ್ರ ನವೀನ ಮತ್ತು ನವೀಕರಿಸಬಲ್ಲ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, "ಪಕ್ಷಕ್ಕಾಗಿ 15 ವರ್ಷ ಕೆಲಸ ಮಾಡಿದರೂ ಚುನಾವಣೆಗೆ ಸ್ಪರ್ಧಿಸಲು ನಿಮಗೆ ಟಿಕೆಟ್ ಸಿಕ್ಕಿಲ್ಲ ಎಂದು ಕಾರ್ಯಕರ್ತರು ನನ್ನಲ್ಲಿ ಬೇಸರದಿಂದ ಹೇಳಿದ್ದರು. ಆದರೆ, ನಾನು ನಿರಾಶನಾಗಲಿಲ್ಲ. 2014ರಲ್ಲಿ ಬಿಜೆಪಿ, ನನ್ನನ್ನು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಿತು. ಇದೇ ಬಿಜೆಪಿ ವೈಶಿಷ್ಟ್ಯ" ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದಲ್ಲಿ ಸಂಸದನಾಗಿರುವುದು 7 ಜನ್ಮಗಳ ಪುಣ್ಯ ಎಂದೇ ತಿಳಿಸುತ್ತಿದ್ದೆ. ಅವರು ಯಾವತ್ತೂ 'ಲಾಬಿ'ಗೆ ಮಣಿದವರಲ್ಲ. ಅವರ ಸಂಪುಟದಲ್ಲಿ ಅವಕಾಶ ಲಭಿಸಿರುವುದು ಅನಂತ ಜನ್ಮಗಳ ಪುಣ್ಯ ಎಂದು ಭಗವಂತ ಖೂಬಾ ಹೇಳಿದರು.
ಬೇರೆ ಪಕ್ಷಗಳ ಉದ್ದೇಶ ಮತ್ತು ರಾಜಕಾರಣದ ಗುರಿ ದೇಶಸೇವೆ ಅಲ್ಲ. ಅದರಿಂದಾಗಿ ನರೇಂದ್ರ ಮೋದಿ, ಶ್ಯಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರಂಥ ಮೇರು ದೇಶಭಕ್ತರನ್ನು ಆ ಪಕ್ಷಗಳಲ್ಲಿ ಕಾಣಲು ಸಾಧ್ಯ ಇಲ್ಲ ಎಂದು ಖೂಬಾ ವಿವರಿಸಿದರು.
Recommended Video
ರಾಜ್ಯದ ಭವಿಷ್ಯದ ಯೋಜನೆಗಳ ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳ ತಂಡದ ಜೊತೆ ಚರ್ಚಿಸಿದ್ದೇನೆ. ನನ್ನ ಇಲಾಖೆಯಿಂದ ರಾಜ್ಯಕ್ಕೆ ಸಾಧ್ಯ ಆಗುವ ಎಲ್ಲ ಕಾರ್ಯಕ್ರಮಗಳನ್ನು ಕೊಡಲು ಬದ್ಧನಿದ್ದೇನೆ ಎಂದು ಖೂಬಾ ಇದೆ ವೇಳೆ ಹೇಳಿದರು.