ರಾಜ್ಯದಲ್ಲಿ 33 ಸಾವಿರ ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ
ಬೆಂಗಳೂರು, ಜೂ. 20: ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿರುವ 33 ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳು ಪೂರ್ಣಗೊಂಡರೆ, ಕರ್ನಾಕಟದ ಜಿಡಿಪಿ ಶೇ. 2 ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ- ಪೆನುಕೊಂಡ ಜೋಡಿ ರೈಲು ಮಾರ್ಗ, ಬೆಂಗಳೂರು ಉಪ ನಗರ ಯೋಜನೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು.
ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಷ್ಟು ಮಹತ್ವದ ಯೋಜನೆ ಇದಾಗಿದೆ. ನಮ್ಮೆಲ್ಲರ ಬಹಳ ದಿನಗಳ ಕನಸು ಸಬ್ ಅರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಪ್ರಧಾನಮಂತ್ರಿ ಕೇಂದ್ರದ ಸಹಾಯವನ್ನು ನೀಡಿ ಯೋಜನೆ ಇಂದು ನೆರವೇರಿಸಿದ್ದಾರೆ. ನಾಲ್ಕು ದಿಕ್ಕಿನಲ್ಲಿ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕ ಮಾಡುವ ಅದ್ಭುತವಾದ ಯೋಜನೆ ಪ್ರಾರಂಭವಾಗಿದೆ.
ಯಲಹಂಕದಿಂದ- ಹೈದರಾಬಾದ್ ವರೆಗೆ ಡಬ್ಲಿಂಗ್ ಲೈನ್, ಅರಸೀಕೆರೆಯಿಂದ ತುಮಕೂರು ನಡುವೆ ವಿದ್ಯುದೀಕರಣ, ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ತುಮಕೂರಿನ ಬಳಿ ಬರಲಿದೆ. ಐದು ರಾಜ್ಯಗಳನ್ನು ಇದು ಸಂಪರ್ಕಿಸುತ್ತದೆ. ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ, ದೂರದೃಷ್ಟಿಯ ಫಲವಾಗಿ ಈ ಯೋಜನೆಗಳಾಗಿವೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವಲ್ಲಿ ಈ ಯೋಜನೆ ನೆರವಾಗಲಿದೆ. ನಾಲ್ಕು ಸ್ಯಾಟಿಲೈಟ್ ಟೌನ್ಗಳಿಗೆ ಸಂಪರ್ಕ ಸಿಗಲಿದೆ ಎಂದು ಸಿಎಂ ತಿಳಿಸಿದರು.
ದೇಶದ ಅಮೃತ ಮಹೋತ್ಸವಕ್ಕೆ ಶಕ್ತಿ :
ಈ ದೇಶವನ್ನು ಮೋದಿಯವರು ಆಳುತ್ತಿರುವ ಸಂದರ್ಭದಲ್ಲಿ ಅವರ ದೂರದೃಷ್ಟಿಯಿಂದ ಈ ಯೋಜನೆಗಳೂ ಕೇಂದ್ರ ಸರ್ಕಾರದ ನೆರವಿನ ಸಹಾಯಹಸ್ತದಿಂದ ಜಾರಿಯಾಗಿವೆ. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ದೇಶಕ್ಕೆ 75 ವರ್ಷ ಬಂದಾಗ ಅಮೃತಮಹೋತ್ಸವಕ್ಕೆ ಒಂದು ಹೊಸ ಶಕ್ತಿ ತುಂಬಿದ್ದಾರೆ. 2047 ರ ಸಂದರ್ಭದಲ್ಲಿ ಅವರು ಅಮೃತ ಕಾಲವನ್ನು ಘೋಷಿಸಿ, ವಿವಿಧ ಯೋಜನೆಗಳನ್ನು ರೂಪಸಿದ್ದಾರೆ. 2047 ರ ವೇಳೆಗೆ ಭಾರತ ಇಡೀ ವಿಶ್ವದಲ್ಲಿ ಅತ್ಯಂತ ಶ್ರೇಷ್ಠವಾದ, ನಂಬರ್ ಒನ್ ರಾಷ್ಟ್ರವಾಗುವ ನಿಟ್ಟಿನಲ್ಲಿ ಚಿಂತನೆಯಲ್ಲ, ಕಾರ್ಯಸೂಚಿ, ದಿಕ್ಸೂಚಿ ಹಾಗೂ ಗತಿ ಶಕ್ತಿಯನ್ನು ನೀಡಿದ್ದಾರೆ. ದೇಶವನ್ನು ಮುನ್ನಡೆಸುವ ಮೋದಿಯವರ ಮಾರ್ಗಸೂಚಿಯ ಪ್ರಕಾರ ಕರ್ನಾಟಕ ಇಂದು ಮುಂದುವರೆದಿದೆ. ಎಂದು ಮೋದಿಯನ್ನು ಕೊಂಡಾಡಿದರು.
ಮೋದಿ ಉಜ್ವಲ ಯೋಜನೆಯಿಂದ 34 ಲಕ್ಷ ಮನೆ ಎಂದ ಬೊಮ್ಮಾಯಿ:
ಮಾನವ ಸಂಪನ್ಮೂಲವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಮೋದಿ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಸ್ವಚ್ಛ ಭಾರತ, ಆಯುಷ್ಮಾನ್ ಯೋಜನೆ, ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳನ್ನು ರೂಪಿಸಿದ್ದಾರೆ. ವಿರೋಧ ಪಕ್ಷದವರು ಈ ಎಲ್ಲಾ ಯೋಜನೆಗಳ ಪ್ರಯೋಜನವೇನೆಂದು ಕೇಳುತ್ತಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನವನ್ನು ರಾಜ್ಯದ 53.83 ಲಕ್ಷ ರೈತರು ಪಡೆದಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 34 ಲಕ್ಷ ಮನೆಗಳಿಗೆ ವಿದ್ಯುದೀಕರಣ ಮಾಡಲಾಗಿದೆ. ಜಲ್ ಜೀವನ್ ಯೋಜನೆಯಡಿ 43 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗಿದೆ. ನರೇಂದ್ರ ಮೋದಿಯವರು ಸಂಕಲ್ಪ ಮಾಡಿ ಗ್ರಾಮೀಣ ಮನೆಗಳಿಗೆ ಜಲ್ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೋದಿ ಸಾಧನೆಯ ಲೆಕ್ಕ ಕೊಟ್ಟ ಬೊಮ್ಮಾಯಿ
ಇಡೀ ದೇಶದಲ್ಲಿ ಮೊದಲು 1 ಕಿ.ಮೀ ಆಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಈಗ ಪ್ರತಿದಿನ 16-17 ಕಿಮಿ ರಸ್ತೆಯಾಗುತ್ತಿವೆ. 415 ಹೊಸ ಮಾರ್ಗಗಳ 67 ವಿಮಾನ ನಿಲ್ದಾಣಗಳನ್ನು 8 ವರ್ಷದಲ್ಲಿ ನಿರ್ಮಾಣ ಮಾಡಲಾಗಿದೆ. 5 ನಗರಗಳಿಗೆ ಮೆಟ್ರೋ ವಿಸ್ತರಣೆ, ಸಾಗರ್ ಮಾಲಾ ಯೋಜನೆಯಡಿ 194 ಯೋಜನೆಗಳಿಗೆ ಅನುಮೋದನೆ, 596 ಹೊಸ ವೈದ್ಯಕೀಯ ಕಾಲೇಜುಗಳನ್ನು ನರೇಂದ್ರ ಮೋದಿಯವರು ನೀಡಿದ್ದು, ರಾಜ್ಯಕ್ಕೆ 4 ವೈದ್ಯಕೀಯ ಕಾಲೇಜುಗಳು ಬಂದಿವೆ. ಅವರ ಮಾರ್ಗದರ್ಶನದಲ್ಲಿ ಅವರ ಯೋಜನೆಗಳಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಕರ್ನಾಟಕ ಮುನ್ನಡೆಯುತ್ತಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಐದು ಹೊಸ ವಿಮಾನ ನಿಲ್ದಾಣ:
ಪ್ರಧಾನಮಂತ್ರಿಗಳ ಕನಸಾದ 5 ಟ್ರಿಲಿಯನ್ ಆರ್ಥಿಕತೆಗೆ ಕನಿಷ್ಠ 1.2 ಟ್ರಿಲಿಯನ್ ಡಾಲರ್ ಗಳನ್ನು ಕರ್ನಾಟಕದಿಂದ ಭಾರತಕ್ಕೆ ಕೊಡುಗೆ ನೀಡಬೇಕು. ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ. ಕೃಷಿ, ಉತ್ಪಾದನಾ ತಂತ್ರಜ್ಞಾನ ವಲಯದಲ್ಲಿ ಮುಂಚೂಣಿಯಲ್ಲಿದೆ. ಅತಿ ಹೆಚ್ಚಿನ ಎಫ್ಡಿಐ ರಾಜ್ಯಕ್ಕೆ ಬಂದಿದೆ. ಅತಿ ಹೆಚ್ಚಿನ ಕೃಷಿ ಉತ್ಪನ್ನ ಕರ್ನಾಟಕದಲ್ಲಿ ಆಗುತ್ತಿದೆ. ರಾಜ್ಯ ಹೆದ್ದಾರಿಗಳು, 5 ಹೊಸ ವಿಮಾನ ನಿಲ್ದಾಣಗಳು, ಮೂರು ಬಂದರುಗಳು, ಇವೆಲ್ಲವನ್ನೂ ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ. ಮೋದಿಯವರ ಕಲ್ಪನೆಯ ನವ ಭಾರತಕ್ಕೆ ನವ ಕರ್ನಾಟಕ ಜೊತೆ ನೀಡಲಿದೆ. ನವ ಕರ್ನಾಟಕದ ನಿರ್ಮಾಣದ ಕನಸನ್ನು ನಾವು ನನಸು ಮಾಡುತ್ತೇವೆ ಎಂದರು ಬೊಮ್ಮಾಯಿ.
Recommended Video