ದೀಪ ಬೆಳಗಲು ಮೋದಿ ಕರೆಯ ಹಿಂದಿನ ಮರ್ಮ: ಹೊಸ ಪ್ರಶ್ನೆ ಹುಟ್ಟು ಹಾಕಿದ ಕುಮಾರಸ್ವಾಮಿ ಟ್ವೀಟ್!
ಲಾಕ್ ಡೌನ್ ಘೋಷಣೆಯಾದ ಒಂಬತ್ತನೇ ದಿನವಾದ ಭಾನುವಾರ (ಏ 5) ರಾತ್ರಿ ಒಂಬತ್ತು ಗಂಟೆಗೆ, ಒಂಬತ್ತು ನಿಮಿಷ, ಅವರವರ ಮನೆಯಲ್ಲಿ ದೀಪವೋ, ಕ್ಯಾಂಡಲೋ, ಫ್ಲ್ಯಾಶ್ ಲೈಟೋ ಹಚ್ಚೋಕೆ ಪ್ರಧಾನಿಗಳು ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ನರೇಂದ್ರ ಮೋದಿ ಕೊಟ್ಟ ಹೊಸ ದೀಪಾರಾಧನೆಯ ಟಾಸ್ಕ್ ಅನ್ನು ನಡೆಸಲು ಭಾರತೀಯರು ಸಜ್ಜಾಗಿದ್ದಾರೆ. ಈ ನಡುವೆ, ನಾವು ದೀಪ ಹಚ್ಚುವುದಿಲ್ಲ ಎನ್ನುವ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
ಅಷ್ಟಕ್ಕೂ ಆ ಭಾನುವಾರ ದೀಪ ಹಚ್ಚಿ ಅಂತಾ ಪ್ರಧಾನಿ ಮೋದಿ ಹೇಳಿದ್ದೇಕೆ?
ಕೆಲವು ದಿನಗಳ ಹಿಂದೆ ಜನತಾ ಕರ್ಫ್ಯೂ ದಿನ, ಪ್ರಧಾನಿ ಚಪ್ಪಾಳೆ ತಟ್ಟಲು ಹೇಳಿದ್ದರು. ಆದರೆ, ಎಷ್ಟೋ ಕಡೆ ಜನ ಗುಂಪು ಗುಂಪಾಗಿ ಸೇರಿ, ಸಾಮಾಜಿಕ ಅಂತರ ಕಾಯ್ಡುಕೊಳ್ಳದೇ, ಗಂಟೆ, ಜಾಗಟೆ ಬಾರಿಸಿ ಪ್ರಮಾದ ಎಸಗಿದ್ದರು.
#9pm9minute ದೇಶದ ಜನತೆಗೆ ಮೋದಿಯಿಂದ ಅಲರ್ಟ್
ದೀಪ ಹಚ್ಚುವುದರಿಂದ, ಕೊರೊನಾ ಮಹಾಮಾರಿ ತೊಲಗಬಹುದೇ ಎನ್ನುವ ಪ್ರಶ್ನೆಯ ನಡುವೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್, ಇನ್ನೊಂದು ಆಯಾಮಕ್ಕೆ ಉರುಳುತ್ತಿದೆ. ಎಚ್ಡಿಕೆ ಮಾಡಿದ ಟ್ವೀಟ್ ಹೀಗಿದೆ:
6 ಎಪ್ರಿಲ್, ಬಿಜೆಪಿಯ ಸಂಸ್ಥಾಪನಾ ದಿನ
"ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲು ಕೊರೊನಾ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೇ? 6 ಎಪ್ರಿಲ್ 1980 ಬಿಜೆಪಿ ಸಂಸ್ಥಾಪನಾ ದಿನ. ಇಂದಿನ ದಿನ 5-04-2020ಕ್ಕೆ ಬಿಜೆಪಿಗೆ ನಲವತ್ತು ವರ್ಷ ತುಂಬುತ್ತವೆ" ಇದು ಕುಮಾರಸ್ವಾಮಿ ಮಾಡಿದ ಮೊದಲ ಟ್ವೀಟ್.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್
"ತನ್ನ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಕೊರೊನಾ ಸಂಕಷ್ಟದ ದಿನಗಳಲ್ಲಿ ನೇರಾ ನೇರ ಆಚರಿಸಲು ಹಿಂಜರಿದ ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನತೆಯ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆಯೇ?" ಕುಮಾರಸ್ವಾಮಿಯ ಎರಡನೇ ಟ್ವೀಟ್.
ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟ ಪಡಿಸಬೇಕು
"ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಏಪ್ರಿಲ್ 5ನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟ ಪಡಿಸಬೇಕು.
ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ?" ಕುಮಾರಸ್ವಾಮಿಯ ಮೂರನೇ ಟ್ವೀಟ್.
ಕೊರೊನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭ
"ಜಗತ್ತು ಕೊರೊನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ? ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ.. ಕೈ ಹಿಡಿದು.. ನಡೆಸೆನ್ನನು" ಕುಮಾರಸ್ವಾಮಿಯ ನಾಲ್ಕನೇ ಟ್ವೀಟ್.