ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಪ್ರಮುಖ ಅಂಶಗಳು
ಬೆಂಗಳೂರು, ಮೇ.11: ನೊವೆಲ್ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಭಾರತ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೇ ಎಂಬುದರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿಯ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕೇಂದ್ರ ಸಚಿವರುಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಡಾ.ಹರ್ಷವರ್ಧನ್, ರಾಜನಾಥ್ ಸಿಂಗ್ ಸಹ ಉಪಸ್ಥಿತಿ ವಹಿಸಿದ್ದರು. ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಸಿಎಂಗಳಿಗೆ ಸಲಹೆ ನೀಡಲಾಯಿತು.
ಮುಖ್ಯಮಂತ್ರಿಗಳ ಸಭೆಯಲ್ಲೇ ಮೋದಿಗೆ ತಿರುಗೇಟು ನೀಡಿದ ಮಮತಾ
ರಾಜ್ಯದಲ್ಲಿ ಕೊವಿಡ್19 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಾಲ್ಕು T ಗಳು (ಟ್ರೇಸಿಂಗ್, ಟ್ರಾಕಿಂಗ್, ಟೆಸ್ಟಿಂಗ್ ಅಂಡ್ ಟ್ರೀಟಿಂಗ್) ಪ್ರಮುಖ ಪಾತ್ರ ವಹಿಸಿವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದರು. ಇದೇ ವೇಳೆ ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಅಗತ್ಯ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರದ ಎದುರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ 60,000 ಲ್ಯಾಬ್ ಗಳನ್ನು ತೆರೆಯುವ ಗುರಿ
ರಾಜ್ಯದಲ್ಲಿ ಪ್ರಸ್ತುತ 35 ಪ್ರಯೋಗಾಲಯಗಳಲ್ಲಿ ದಿನಕ್ಕೆ 6000 ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ 60 ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ವತಿಯಿಂದ 93,723 ಆರೋಗ್ಯ ಕಾರ್ಯಕರ್ತರಿಗೆ ಆನ್ ಲೈನ್ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ 58 ಲಕ್ಷಕ್ಕೂ ಹೆಚ್ಚು ಜನರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯ
ರಾಜ್ಯದಲ್ಲಿ ಜನರನ್ನು ಹೊಸ ಜೀವನ ಶೈಲಿ ಅಳವಡಿಸಲು ಜಾಗೃತಿ ಮೂಡಿಸಿ, ಮನವೊಲಿಸಬೇಕು. ಕೊರೊನಾ ವೈರಸ್ ಕುರಿತು ಜನರ ಪೂರ್ವಾಗ್ರಹಗಳನ್ನು ತೊಡೆಯಲು ಇದು ಜ್ವರದಂತೆ ಒಂದು ವೈರಲ್ ಸೋಂಕಾಗಿದೆ. ಇದರಿಂದ ಇತರೆ ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಪಾಯ ಎಂಬ ಅರಿವು ಮೂಡಿಸಬೇಕಿದೆ.
ಲಾಕ್ ಡೌನ್ ಭಾರತದಲ್ಲಿ ದುಗ್ಗಾಣಿ ಇಲ್ಲದೇ ದಕ್ಕಿದ್ದು ದುಃಖ ಮಾತ್ರ!
ಕೇಂದ್ರ ಸರ್ಕಾರದಿಂದ ವಲಯಗಳ ವಿಂಗಡನೆಗೆ ರಾಜ್ಯದ ವಿರೋಧ
ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಾರದು. ಕಂಟೇನ್ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಕ್ಲಸ್ಟರುಗಳ ಸುತ್ತಲಿನ 50 ರಿಂದ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಬೇಕು. ಇತರೆ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಬೇಕು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸಾಧ್ಯವಾಗುವುದಲ್ಲದೆ, ರಾಜ್ಯಗಳು ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಸಿಎಂ ಕೇಂದ್ರಕ್ಕೆ ಮನವರಿಕೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣ ಆರಂಭಿಸದಿರಲು ಮನವಿ
ಕನಿಷ್ಠ ಮೇ ತಿಂಗಳ ಅಂತ್ಯದವರೆಗೂ ದೇಶದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಗಳನ್ನು ಪ್ರಾರಂಭಿಸಬಾರದು. ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಬೇಕು. ಅಂತರರಾಜ್ಯ ಪ್ರಯಾಣಿಕರನ್ನು ಸಹ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮತ್ತು ಪರೀಕ್ಷೆಗೆ ಒಳಪಡಿಸಬೇಕು. ಅಂತರರಾಜ್ಯ ಪ್ರಯಾಣಿಕರು ತಾವು ಹೊರಡುವ ಸ್ಥಳದಲ್ಲಿ ಆರೋಗ್ಯ ಪ್ರಮಾಣ ಪತ್ರವನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು. ಆರೋಗ್ಯ ಪ್ರಮಾಣ ಪತ್ರ ಹೊಂದಿಲ್ಲದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಿಸಬೇಕು ಎಂದು ತಿಳಿಸಿದ್ದಾರೆ.
ಇತರೆ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರದಂತೆ ಎಚ್ಚರಿಕೆ
ಕೊರೊನಾ ವೈರಸ್ ಅಟ್ಟಹಾಸದಿಂದಾಗಿ ಇತರೆ ವೈದ್ಯಕೀಯ ಚಿಕಿತ್ಸೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ನಾನ್ ಕೊವಿಡ್19 ರೋಗಿಗಳ ಚಿಕಿತ್ಸೆಗಾಗಿ ಕಾರ್ಯ ನಿರ್ವಹಿಸುವ ಕುರಿತು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಈ ಕುರಿತು ಒಂದು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಪ್ರತಿ 10 ಲಕ್ಷಕ್ಕೆ ಕನಿಷ್ಠ ಎಷ್ಟು ಪರೀಕ್ಷೆ ನಡೆಸಬೇಕು ಎಂದು ಈ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಬೇಕು. ಕೇವಲ ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಹೊಂದಿರುವವರಿಗೆ ಮಾತ್ರ ಪರೀಕ್ಷೆ ನಡೆಸಬೇಕು. ಈ ಸೋಂಕಿಗೆ ಚಿಕಿತ್ಸೆ ನೀಡಲು ಟೆಲಿ-ಮೆಡಿಸಿನ್ ಅನ್ನು ವ್ಯಾಪಕವಾಗಿ ಬಳಸಬೇಕು. ತೀವ್ರ ರೋಗ ಲಕ್ಷಣ ಹೊಂದಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು ಎಂದು ಉಲ್ಲೇಖಿಸಲಾಯಿತು.
ಪ್ರಧಾನಿ ಮೋದಿ ಜೊತೆಗಿನ ಕಾನ್ಫರೆನ್ಸ್ ನಲ್ಲಿ ಪ್ರಸ್ತಾಪವಾದ ಅಂಶಗಳು
ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಕೈತೊಳೆಯವುದು, ವೈಯಕ್ತಿಕ ಮತ್ತು ಸಾಮುದಾಯಿಕ ಶುಚಿತ್ವ ಕಾಪಾಡಿಕೊಳ್ಳುವುದು ಮೊದಲಾದ ಅಭ್ಯಾಸಗಳ ಮೂಲಕ ಹೊಸ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು.
ರೋಗದ ಲಕ್ಷಣಗಳಿಲ್ಲದ ಅಥವಾ ತೀವ್ರವಲ್ಲದ ಪ್ರಕರಣಗಳಲ್ಲಿ ಮನೆಯಲ್ಲಿಯೇ ಕಟ್ಟುನಿಟ್ಟಿನ ಐಸೋಲೇಷನ್ ನಲ್ಲಿ ಇರಿಸುವ ಮೂಲಕ ಹಾಗೂ ಟೆಲಿ ಮೆಡಿಸಿನ್ ಮೂಲಕ ಚಿಕಿತ್ಸೆ ಪಡೆಯಲು ಸಲಹೆ ನೀಡಬಹುದು. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನವರು ಮನೆಯೊಳಗೆ ಸುರಕ್ಷಿತವಾಗಿರುವಂತೆ ಸಲಹೆ ನೀಡಬೇಕು ಎಂಬ ಅಂಶಗಳನ್ನು ಕಾನ್ಫರೆನ್ಸ್ ನಲ್ಲಿ ಪ್ರಸ್ತಾಪಿಸಲಾಯಿತು.