ಕುಮಾರಣ್ಣನ ಗ್ರಾಮ ವಾಸ್ತವ್ಯದ ನೆಪದಲ್ಲಿ ಮತ್ತೆ ನೆನಪಾಗುತ್ತಿದೆ ಪಿಕೆ ನಾಗನೂರು
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸುತ್ತಾರಂತೆ. ಈ ಹಿಂದೆ ಬಿಜೆಪಿ ಜತೆ ಸೇರಿ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರನ್ನು ಕೀರ್ತಿ ಶಿಖರಕ್ಕೆ ಏರಿಸಿದ್ದು ಈ ಗ್ರಾಮ ವಾಸ್ತವ್ಯ. ಆಗಿನ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಮೊದಲ ಗ್ರಾಮವಾಸ್ತವ್ಯ ಅಥಣಿ ತಾಲೂಕಿನ ಪಿ.ಕೆ.ನಾಗನೂರೆಂಬ ಹಳ್ಳಿಯಿಂದ ಆರಂಭವಾಯಿತು.
ಕೃಷ್ಣೆಯಲ್ಲಿ ಪ್ರವಾಹ ಬಂದಾಗ ಪರಿಸ್ಥಿತಿ ಅವಲೋಕಿಸಲು ತೆರಳಿದ ಮುಖ್ಯಮಂತ್ರಿಗಳಿಗೆ ಸಂಜೆ ಆರು ಗಂಟೆಗೆ ಬೆಳಗಾವಿಗೆ ಹೊರಡಲು ಹೆಲಿಕಾಪ್ಟರ್ ಹೊರಡಿಸಿ, ಎಂದು ಬೆಳಗಾವಿ ಜಿಲ್ಲಾಧಿಕಾರಿ ಅವಸರ ಮಾಡುತ್ತಿದ್ದರು. ಏಕೆ ಹೀಗೆ ಅವಸರ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಾರಣ ಕೇಳಿದಾಗ, ಇಲ್ಲೆಲ್ಲೂ ತಂಗಲು ಸ್ಥಳವಿಲ್ಲ. ಆದ್ದರಿಂದ ಬೆಳಗಾವಿಗೆ ಹೊರಡುವುದು ಅನಿವಾರ್ಯ ಎಂದರು.
ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ
ಆಗ ಮುಖ್ಯಮಂತ್ರಿಗಳು, ಇಲ್ಲೇ ಹತ್ತಿರ ಯಾರ ಮನೆಯಲ್ಲಾದರೂ ತಂಗುವ ಎಂದು ಪ್ರತಿಕ್ರಿಯಿಸಿದರು. ಸ್ಥಳದಲ್ಲೇ ಉಪಸ್ಥಿತರಿದ್ದ ಶಾಸಕರು ನಾಗನೂರಿನಲ್ಲೊಂದು ಮಠದಲ್ಲಿ ತಂಗಲು ಅವಕಾಶ ಇರುವುದಾಗಿ ಹೇಳಿದರು. ಬಳಿಕ ನೆರೆ ಬಂದ ಕೃಷ್ಣೆಯನ್ನು ಮೂರು ಟ್ರ್ಯಾಕ್ಟರ್ ಗಳಲ್ಲಿ ದಾಟಿ ನಾಗನೂರಿಗೆ ಬಂದು, ಮಠದಲ್ಲಿ ವಾಸ್ತವ್ಯ ಮಾಡಿದ್ದು ಮುಖ್ಯಮಂತ್ರಿಗಳ ಮೊದಲ ಗ್ರಾಮ ವಾಸ್ತವ್ಯ.
ಅಂದು ಊರ ಜನರೊಂದಿಗೆ ಇದ್ದು, ಅಲ್ಲಿನವರೊಂದಿಗೆ ಬೆರೆತು, ಜನರ ಕಷ್ಟಸುಖಗಳ ಪರಿಚಯವನ್ನು ಮುಖ್ಯಮಂತ್ರಿಗಳು ಮಾಡಿಕೊಂಡದ್ದು ಇತಿಹಾಸ. ತಮ್ಮ 20 ತಿಂಗಳ ಆಡಳಿತಾವಧಿಯಲ್ಲಿ 47 ಗ್ರಾಮ ವಾಸ್ತವ್ಯ ಮಾಡಿದ್ದಾರೆ.
ರಿಚರ್ಡ್ ಗೇರ್ ನಿಂದ ಮೆಚ್ಚುಗೆ
ಆ ನಂತರದ ದಿನಗಳಲ್ಲಿ ವಿಜಯಪುರದ ಎಚ್ ಐವಿ ಪೀಡಿತರೊಬ್ಬರ ಮನೆಯನ್ನು ಆರಿಸಿಕೊಂಡು, ಎಚ್ ಐವಿ ಪೀಡಿತರ ಕುರಿತ ಸಮಾಜದ ತಪ್ಪು ನಂಬಿಕೆಗಳನ್ನು ದೂರ ಮಾಡಿದರು. ಈ ಘಟನೆಯನ್ನು ಓದಿದ ಹಾಲಿವುಡ್ ನಟ, ಎಚ್ ಐವಿ ಜಾಗೃತಿ ಮೂಡಿಸುವ ರಾಯಭಾರಿಯೂ ಆಗಿದ್ದ ರಿಚರ್ಡ್ ಗೇರ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಗ್ರಾಮವಾಸ್ತವ್ಯದ ಅಪರೂಪದ ಅನುಭವಗಳಲ್ಲೊಂದಾಗಿ ದಾಖಲಾಯಿತು.
ತಮ್ಮ ಆಡಳಿತಾವಧಿಯ ಅತ್ಯುತ್ತಮ ಅನುಭವಗಳು ಗ್ರಾಮ ವಾಸ್ತವ್ಯದಿಂದ ದೊರೆಯಿತು. ಅಲ್ಲದೆ ಹಲವು ಯೋಜನೆಗಳನ್ನು ರೂಪಿಸಲು ಪ್ರೇರಣೆಯೂ ದೊರೆತಿದ್ದು ಗ್ರಾಮ ವಾಸ್ತವ್ಯದಿಂದಲೇ ಎಂಬುದು ಮುಖ್ಯಮಂತ್ರಿಗಳ ಅನುಭವ. ಗ್ರಾಮ ವಾಸ್ತವ್ಯದಿಂದಾಗಿ ಸುಮಾರು ಸಾವಿರದಷ್ಟು ಪ್ರೌಢಶಾಲೆಗಳು, ಸುಮಾರು 500ರಷ್ಟು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಕಾರಣವಾಯಿತು.
ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಅಂಗವಿಕಲರಿಗೆ ಮಾಸಾಶನ ಸೌಲಭ್ಯಗಳು ಗ್ರಾಮವಾಸ್ತವ್ಯದ ಕೊಡುಗೆಗಳು.
ಈ ಬಾರಿಯ ಗ್ರಾಮ ವಾಸ್ತವ್ಯದ ಸ್ವರೂಪ ಹೇಗಿರುತ್ತದೆ?
ಈ ಬಾರಿಯ ಗ್ರಾಮವಾಸ್ತವ್ಯ ಕಳೆದ ಸಾಲಿನ ಗ್ರಾಮ ವಾಸ್ತವ್ಯಕ್ಕಿಂತ ಭಿನ್ನವಾಗಿ ಆಯೋಜನೆ ಆಗಲಿದ್ದು, ಮುಖ್ಯಮಂತ್ರಿಗಳು ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡುವರು.
ರೈತರು ಕಾರ್ಯಕ್ರಮದ ಆದ್ಯತಾ ವಲಯದಲ್ಲಿರುತ್ತಾರೆ. ರೈತರ ಹಿತವನ್ನು ಗಮನದಲ್ಲಿರಿಸಿ, ಈವರೆಗಿನ ರೈತಪರ ಕಾರ್ಯಕ್ರಮಗಳಿಂದ ಕಂಡುಕೊಂಡ ಉತ್ತಮ ಅಂಶಗಳನ್ನು ರೈತರಿಗೆ ಹೇಳುವ ಮತ್ತು ಆಧುನಿಕ ಕೃಷಿ ಪದ್ಧತಿಗೆ ಪೂರಕ, ಯಾಂತ್ರೀಕೃತ ಕೃಷಿಗೆ ನೆರವು ಹಾಗೂ ರೈತ ಮಾಹಿತಿಗಳು ಗ್ರಾಮವಾಸ್ತವ್ಯ ಕಾರ್ಯಕ್ರಮದ ಆದ್ಯತೆಯಾಗಲಿವೆ.
ಮುಖ್ಯಮಂತ್ರಿಗಳು ಭೇಟಿ ನೀಡುವ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಭೇಟಿ ನೀಡುವ ಮತ್ತು ಸುತ್ತಮುತ್ತಲ ಗ್ರಾಮಗಳ ಜನರ ಸಮಸ್ಯೆಗಳು, ಬೇಡಿಕೆ ಹಾಗೂ ನೆರವು ನೀಡಲು ಪೂರಕ ಸಮಗ್ರ ವರದಿಯನ್ನು ತಯಾರಿಸುವರು. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ವೇಳೆ ಸ್ಥಳದಲ್ಲೇ ಹಲವು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ನೀತಿ ನಿರೂಪಣೆಗೂ ಇದು ಸಹಕಾರಿಯಾಗಲಿದೆ ಎನ್ನುವುದು ಮುಖ್ಯಮಂತ್ರಿಗಳ ನಂಬಿಕೆ.
ತಾವು ಉಳಿದುಕೊಂಡ ಗ್ರಾಮಕ್ಕೆ, ಜಿಲ್ಲೆಗೆ ಏನು ಬೇಕು, ಯಾವ ಇಲಾಖೆಯಿಂದ ಕೆಲಸ- ಕಾರ್ಯಗಳು ಬಾಕಿ ಉಳಿದಿವೆ ಎಂಬುದನ್ನು ಮನಗಂಡು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆನ್ನುವುದು ಅವರ ಅಭಿಲಾಷೆ.