ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಹೈಕೋರ್ಟಿನಲ್ಲಿ PIL
ಬೆಂಗಳೂರು, ಫೆಬ್ರವರಿ 19: ''ಕಾನೂನು ಪ್ರಕಾರ ನನ್ನ ಮೇಲಿರುವ ಆರೋಪಗಳು, ಪ್ರಕರಣಗಳ ವಿವರಗಳನ್ನು ಅಫಿಡವಿಟ್ ಮೂಲಕ ಸಲ್ಲಿಸಿದ್ದೇನೆ. ನನ್ನ ಮೇಲೆ ದಾಖಲಾಗಿರುವ್ಚ ದೂರಿನಲ್ಲಿ ಅರಣ್ಯ ಒತ್ತುವರಿ ಬಗ್ಗೆ ಮಾಹಿತಿ ಇದ್ದರೆ ತಿಳಿಸಲಿ, ಜನತೆ ಬಯಸಿದರೆ, ಬಿಎಸ್ವೈ ಹೇಳಿದರೆ ನನ್ನ ಖಾತೆ ಬದಲಾಯಿಸಲಿ'' ಎಂದು ಆನಂದ್ ಸಿಂಗ್ ಹೇಳಿದ್ದಾರೆ. ಆದರೆ, ಖಾತೆ ಬದಲಾವಣೆ ಬಗ್ಗೆ ಸುದ್ದಿಯಿಲ್ಲ. ಬದಲಿಗೆ ಆನಂದ್ ಸಿಂಗ್ ವಿರುದ್ಧ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ.
ವಿಪಕ್ಷ ಮುಖಂಡರು ನನ್ನ ಮೇಲೆ ಆರೋಪ ಮಾಡುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡ ಬಯಸುತ್ತೇನೆ. ನನ್ನ ಮೇಲೆ 15 ಕ್ರಿಮಿನಲ್ ಕೇಸ್ ಗಳಿವೆ ನಿಜ, ಈ ಪೈಕಿ 12 ಕೇಸ್ ಗಳಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. 3 ಪ್ರಕರಣಗಳು ಮಾತ್ರ ವಿಚಾರಣೆ ಹಂತದಲ್ಲಿವೆ ಎಂದಿದ್ದಾರೆ. ವಿಪಕ್ಷದಲ್ಲಿ ಅನೇಕರು ವಕೀಲರಿದ್ದಾರೆ, ನನ್ನ ವಿರುದ್ಧ ಇರುವ ಚಾರ್ಜ್ ಶೀಟ್ ಒಮ್ಮೆ ಪರಿಶೀಲಿಸಲಿ, ನನ್ನ ಮೇಲೆ ನೇರ ದೋಷಾರೋಪ ಸಲ್ಲಿಕೆಯಾಗಿದ್ದರೆ ನಂತರ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಆನಂದ್ ಸಿಂಗ್ ವಿರುದ್ಧ ವಕೀಲ ವಿಜಯ್ ಕುಮಾರ್ ಎಂಬುವರು ಪಿಐಎಲ್ ಹಾಕಿದ್ದಾರೆ. ಆನಂದ್ ಸಿಂಗ್ ವಿರುದ್ಧ ಕ್ರಿಮಿನಲ್ ಕೇಸ್ ಗಳಿದ್ದು, ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಆನಂದ್ ಸಿಂಗ್ ಕುಟುಂಬ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಆನಂದ್ ಸಿಂಗ್ ಗೆ ನೀಡಿದ ಖಾತೆ ಬದಲಾಯಿಸಬೇಕಿದೆ ಎಂದು ವಕೀಲರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಕ್ರಿಮಿನಲ್ ಕೇಸ್, ಪದತ್ಯಾಗ ಬಗ್ಗೆ ಆನಂದ್ ಮಹತ್ವದ ಹೇಳಿಕೆ
ಅರಣ್ಯ ಸಚಿವ ಆನಂದ್ ಸಿಂಗ್ ಅವರ ಖಾತೆ ಬದಲಾವಣೆ ಬಗ್ಗೆ ಒತ್ತಡ ಹೆಚ್ಚಿದ್ದರೂ ಸದ್ಯಕ್ಕೆ ಖಾತೆ ಬದಲಾವಣೆ ಸಾಧ್ಯತೆ ಕಡಿಮೆ ಎಂದು ಮೂಲಗಳಿಂದ ತಿಳಿದು ಬಂದಿದೆ. "ನಾನು ಅರಣ್ಯ ಖಾತೆ ಕೇಳಿರಲಿಲ್ಲ, ನೀವೇ ಕೊಟ್ಟಿದ್ದು, ಈಗ ನೀವೆ ಹಿಂಪಡೆದರೆ ತಪ್ಪು ಸಂದೇಶ ಹೊರಡಿಸಿದ್ದಂತಾಗುತ್ತದೆ" ಎಂದು ಯಡಿಯೂರಪ್ಪ ಅವರಿಗೆ ಪ್ರಶ್ನೆ ಎಸೆದಿರುವ ಆನಂದ್ ಸಿಂಗ್ ಅವರು ತಮ್ಮ ಖಾತೆ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.