ಎಚ್ಡಿಕೆಗೆ ಬೆಂಬಿಡದ ಫೋನ್ ಟ್ಯಾಪಿಂಗ್ ಭೂತ: ಆದಿಚುಂಚನ ಶ್ರೀಗಳ ಹೆಸರು ಸ್ಮಗ್ಲರ್ ಲಿಸ್ಟ್ ನಲ್ಲಿ ಬಂದಿದ್ದು ಹೀಗೆ?
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಡೆದ ಟೆಲಿಫೋನ್ ಕದ್ದಾಲಿಕೆ ಪ್ರಕರಣ, ದಿನಕ್ಕೊಂದು ಆಯಾಮ, ತಿರುವನ್ನು ಪಡೆಯುತ್ತಿದೆ. ಸಿಬಿಐ ಒಬ್ಬರ ಮೇಲೆ ಒಬ್ಬರಿಗೆ ಬುಲಾವ್ ಕಳುಹಿಸುತ್ತಿದೆ. ಸದ್ಯಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿರುವ ಸಿಬಿಐ, ರಾಜಕಾರಣಿಗಳನ್ನು ಕರೆಯುವ ದಿನದೂರವಿಲ್ಲ.
ಈ ಪೋನ್ ಕದ್ದಾಲಿಕೆ ಪ್ರಕರಣಕ್ಕೆ 'ಜಾತಿ ಲೇಪನ'ತಟ್ಟಿರುವುದರಿಂದ ವಿಷಯ ಗಂಭೀರತೆಯನ್ನು ಪಡೆದುಕೊಂಡಿದೆ. ಒಕ್ಕಲಿಗ ಸಮುದಾಯದ ಪೀಠಾಧಿಪತಿ, ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಶ್ರೀಗಳ ದೂರವಾಣಿ ಕರೆಗಳನ್ನು ಸ್ಮಗ್ಲರ್ ಗಳ ಹೆಸರಿನಲ್ಲಿ ಟ್ಯಾಪ್ ಮಾಡಲಾಗಿದೆ ಎನ್ನುವ ಸುದ್ದಿ ಭಾರೀ ಸಂಚಲನವನ್ನು ಮೂಡಿಸಿದೆ.
ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ: ಎಚ್ಡಿಕೆ ಏನಂದ್ರು?
ನಭೂತೋ ನಭವಿಷ್ಯತಿಃ ಎನ್ನುವ ರೀತಿಯಲ್ಲಿ ಸಮುದಾಯದ ನಾಯಕರಾಗಿದ್ದ ದೇವೇಗೌಡ್ರ ಕುಟುಂಬದ ಜೊತೆ ಈ ಪ್ರಕರಣ ತುಳುಕು ಹಾಕುತ್ತಿದೆ. ಸ್ಪಷ್ಟೀಕರಣದ ಮೇಲೆ ಸ್ಪಷ್ಟೀಕರಣವನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ. "ತಪ್ಪು ಮಾಡದಿದ್ದರೆ ಯಾಕೆ ಭಯ ಪಡುತ್ತೀರಾ"ಎಂದು ಸಚಿವ ಆರ್. ಅಶೋಕ್ ಪ್ರಶ್ನಿಸುತ್ತಿದ್ದಾರೆ.
ಫೋನ್ ಕದ್ದಾಲಿಕೆ ಪ್ರಕರಣ ಬಹಿರಂಗಗೊಂಡಿದ್ದು ಆ ಒಂದು ಮೊಬೈಲ್ ಸಂಖ್ಯೆಯಿಂದ
ಡಿ.ಕೆ.ಶಿವಕುಮಾರ್ ಬಂಧನವನ್ನು ಪ್ರತಿಭಟಿಸಿ ಬೀದಿಗಿಳಿದಿದ್ದ ಸಮುದಾಯ, ಈಗ ಏನು ಮಾಡುತ್ತಿದೆ ಎಂದು ಸಾಮಾಜಿಕ ತಾಣದಲ್ಲಿ ಪ್ರಶ್ನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಈ ಪ್ರಕರಣಕ್ಕೆ ಸಿಬಿಐ ಹೇಗೆ ತಾರ್ಕಿಕ ಅಂತ್ಯ ಹಾಡುತ್ತೋ ಎನ್ನುವ ಕುತೂಹಲದ ನಡುವೆ, ನಿರ್ಮಲಾನಂದ ಶ್ರೀಗಳ ಹೆಸರು ಯಾಕೆ ಇಲ್ಲಿ ಬರುತ್ತಿದೆ ಎನ್ನುವುದರ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ:
ಸಿದ್ದರಾಮಯ್ಯ ಸೇರಿ ಹಲವು ನಾಯಕರು ಒತ್ತಾಯ
"ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಒತ್ತಾಯ ಮಾಡಿದ್ದರು. ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ"ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಆಗಸ್ಟ್ ಹದಿನೆಂಟರಂದು ಕೇಸನ್ನು ಸಿಬಿಐಗೆ ವರ್ಗಾಯಿಸಿದ್ದರು. 2018ರ ಆಗಸ್ಟ್ 1 ನೇ ತಾರೀಖಿನಿಂದ ಕುಮಾರಸ್ವಾಮಿ ಅವರ ಅವಧಿ ಮುಗಿಯುವವರೆಗೂ ಆಗಿರಬಹುದಾದ ಫೋನ್ ಕದ್ದಾಲಿಕೆಯ ಬಗ್ಗೆ ಸಿಬಿಐ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಅಲೋಕ್ ಕುಮಾರ್ ಸಿಬಿಐ ವಿಚಾರಣೆ
ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ 98803-00007 ಈ ಮೊಬೈಲ್ ಸಂಖ್ಯೆಯಿಂದಲೇ ಪ್ರಕರಣ ಬೆಳಕಿಗೆ ಬಂದಿದ್ದು. ಇದಕ್ಕೆ ಸಂಬಂಧಿಸಿದಂತೆ, ಸಿಬಿಐ ತಂಡ ಈಗಾಗಲೇ ಸೈಬರ್ ಕ್ರೈಂ ತಾಂತ್ರಿಕ ವಿಭಾಗದ ಇನ್ಸ್ಪೆಕ್ಟರ್ಗಳಾದ ಮಿರ್ಜಾ ಅಲಿ, ಮಾಲತೇಶ್, ಸಿಸಿಬಿ ಎಸಿಪಿ ವೇಣುಗೋಪಾಲ್ ಒಳಗೊಂಡಂತೆ ಅನೇಕ ಅಧಿಕಾರಿಗಳನ್ನು ಪ್ರಶ್ನೆ ಮಾಡಿದೆ. ಈ ವಿಚಾರಣೆಯ ವೇಳೆಯೇ ಬಯಲಾಗಿದ್ದು ರಕ್ತಚಂದನ ಸ್ಮಗ್ಲರ್ ಹೆಸರಿನಲ್ಲಿ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳ ಫೋನ್ ಕೂಡಾ ಕದ್ದಾಲಿಕೆಯಾಗಿದೆ ಎನ್ನುವ ಸುದ್ದಿಯಿದೆ.
ರಕ್ತಚಂದನದ ಸ್ಮಗ್ಲರ್ ಲಿಸ್ಟ್ ನಲ್ಲಿ ಶ್ರೀಗಳು
ಕೆಲವು ತಿಂಗಳ ಹಿಂದೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಕ್ತಚಂದನದ ಸ್ಮಗ್ಲರ್ ಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು. ಇವರು ನೀಡಿದ ಮಾಹಿತಿಯ ಮೇರೆ ಹೊಸಕೋಟೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಭಾರೀ ಪ್ರಮಾಣದ ಶ್ರೀಗಂಧದ ಮತ್ತು ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಜಾಡನ್ನು ಮುಂದುವರಿಸಿ ಪೊಲೀಸರು ಇನ್ನಷ್ಟು ತನಿಖೆ ನಡೆಸಿದಾಗ ಇದೊಂದು ದೊಡ್ಡ ದಂಧೆ ಎನ್ನುವುದು ಖಾತರಿಯಾಗಿತ್ತು. ಆ ವೇಳೆ, ಈ ಸ್ಮಗ್ಲರ್ ಗಳ ಪಟ್ಟಿಗೆ ಆದಿಚುಂಚನಗಿರಿ ಶ್ರೀಗಳ ದೂರವಾಣಿಯನ್ನೂ ಸೇರಿಸಿ, ಕದ್ದಾಲಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮಂಡ್ಯ ಲೋಕಸಭಾ ಚುನಾವಣೆಯ ವೇಳೆ
ಶ್ರೀಗಳ ಹೆಸರು ಹೇಗೆ ಸ್ಮಗ್ಲರ್ ಗಳ ಪಟ್ಟಿಯಲ್ಲಿ ಸೇರಿರಬಹುದು ಎನ್ನುವುದರ ಜಾಡು ಹಿಡಿದುಹೋದಾಗ ಸಿಬಿಐ ಅಧಿಕಾರಿಗಳಿಗೆ ಸ್ಪೋಟಕ ಮಾಹಿತಿಗಳು ಲಭ್ಯವಾಗುತ್ತಿವೆ ಎಂದು ಹೇಳಲಾಗುತ್ತಿದೆ. ಕಳೆದ ಮಂಡ್ಯ ಲೋಕಸಭಾ ಚುನಾವಣೆಯ ವೇಳೆ, ಉದ್ದೇಶಪೂರ್ವಕವಾಗಿಯೇ ಶ್ರೀಗಳ ಹೆಸರನ್ನು ಕದ್ದಾಲಿಕೆಯ ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಏಳು ಸ್ವಾಮೀಜಿಗಳು ಮತ್ತು ಅವರ ಆತ್ಮೀಯರ ಫೋನ್ ಕದ್ದಾಲಿಕೆ
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ಆದಿಚುಂಚನಗಿರಿ ಶ್ರೀಗಳು ಸೇರಿದಂತೆ, ರಾಜ್ಯದ ಏಳು ಸ್ವಾಮೀಜಿಗಳು ಮತ್ತು ಅವರ ಆತ್ಮೀಯರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎನ್ನುವ ಸುದ್ದಿಯೂ ಇದೆ. ಅಲೋಕ್ ಕುಮಾರ್ ಅವರನ್ನು ಸಿಬಿಐ ವಿಚಾರಣೆ ನಡೆಸಿದ ವೇಳೆ, ನಿರ್ಮಲಾನಂದ ಶ್ರೀಗಳ ಫೋನ್ ಅನ್ನು 720 ಗಂಟೆಗಳ ಕಾಲ ಕದ್ದಾಲಿಕೆ ಮಾಡಿರುವ ವಿಚಾರ ಬಹಿರಂಗಗೊಂಡಿದೆ ಎನ್ನುವ ಸುದ್ದಿಯಿದೆ.
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ
ರಕ್ತಚಂದನ ಸ್ಮಗ್ಲರ್ ಗಳ ಶಂಕಿತರ ಪಟ್ಟಿಯಲ್ಲಿ ನಿರ್ಮಲಾನಂದ ಶ್ರೀಗಳ ದೂರವಾಣಿಯನ್ನು ಸೇರ್ಪಡೆಗೊಳಿಸಿ, ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ. ಈ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಂಡು, ಲೋಕಸಭಾ ಚುನಾವಣೆಯ ವೇಳೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರ ಆಪ್ತ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣ, ಸಮುದಾಯದಲ್ಲಿ ಮತ್ತು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ, ಯಾವ ರೀತಿ ಇದು ಕುಮಾರಸ್ವಾಮಿ ಸುತ್ತ ಸುತ್ತಲಿದೆ ಎನ್ನುವುದು ಸಿಬಿಐ ವರದಿಯಿಂದ ಬಹಿರಂಗಗೊಳ್ಳಲಿದೆ.