ಏಪ್ರಿಲ್ 18ರಂದು ಮತದಾನ : ಜಿದ್ದಾಜಿದ್ದಿನ 6 ಕ್ಷೇತ್ರಗಳು
Recommended Video
ಬೆಂಗಳೂರು, ಮಾರ್ಚ್ 27 : ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯವಾಗಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ.
ಮಂಗಳವಾರ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ. 14 ಕ್ಷೇತ್ರಗಳಿಗೆ 340 ಅಭ್ಯರ್ಥಿಗಳು 452 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಮಾರ್ಚ್ 29ರಂದು ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ
14 ಕ್ಷೇತ್ರಗಳ ಪೈಕಿ ಮಾಜಿ ಪ್ರಧಾನಿ, ಮುಖ್ಯಮಂತ್ರಿಗಳ ಪುತ್ರ, ರಾಜ್ಯದ ಸಚಿವರು, ಸಚಿವರ ಪುತ್ರ ಹೀಗೆ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿವಿಧ ಕಾರಣಗಳಿಗಾಗಿ 6 ಕ್ಷೇತ್ರಗಳು ರಾಜ್ಯದ ಗಮನವನ್ನು ಸೆಳೆದಿವೆ. ಈ ಕ್ಷೇತ್ರದಲ್ಲಿ ಗೆಲುವು ಯಾರಿಗೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ನೀತಿ ಸಂಹಿತೆ : ನಟರ ಚಲನಚಿತ್ರ ಪ್ರದರ್ಶನಕ್ಕೆ ಸ್ಪಷ್ಟನೆ
ಅಭ್ಯರ್ಥಿಗಳು ಬೇಸಿಗೆಯ ಬಿಸಿಲನ್ನು ಲೆಕ್ಕಿಸದೇ ಬಿರುಸಿನಿಂದ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಏಪ್ರಿಲ್ 18ರಂದು ಜನರು ಮತ ಚಲಾವಣೆ ಮಾಡಿದರೂ ಯಾರಿಗೆ ಗೆಲುವು ಎಂಬುದನ್ನು ತಿಳಿದುಕೊಳ್ಳಲು ಮೇ 23ರ ತನಕ ಕಾಯಬೇಕಾಗಿದೆ.
ಮಂಡ್ಯ : ರಾಷ್ಟ್ರದ ಗಮನ ಸೆಳೆದಿದೆ
ಮಂಡ್ಯ ಲೋಕಸಭಾ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಇಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ. ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಮಲತಾ ಅವರಿಗೆ ಬೆಂಬಲ ನೀಡಿದೆ. ಮಂಡ್ಯದಲ್ಲಿ ಯಾರಿಗೆ ಗೆಲುವು ಎಂದು ಬೆಟ್ಟಿಂಗ್ ಸಹ ನಡೆಯುತ್ತಿದೆ.
ತುಮಕೂರು : ಮಾಜಿ ಪ್ರಧಾನಿ ಅಭ್ಯರ್ಥಿ
ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದರೆ, ಕಾಂಗ್ರೆಸ್ ನಾಯಕ, ಹಾಲಿ ಸಂಸದ ಮುದ್ದಹನುಮೇಗೌಡ ಅವರು ಸಹ ನಾಮಪತ್ರ ಸಲ್ಲಿಸಿದ್ದು ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿಯಿಂದ ಜಿ.ಎಸ್.ಬಸವರಾಜು ಅವರು ಅಭ್ಯರ್ಥಿ.
ಹಾಸನ : ಪ್ರಜ್ವಲ್ ರೇವಣ್ಣ ಅಭ್ಯರ್ಥಿ
ಹಾಸನ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ. ಬಿಜೆಪಿಯಿಂದ ಎ.ಮಂಜು ಕಣದಲ್ಲಿದ್ದಾರೆ. ಹಾಸನದ ಹಾಲಿ ಸಂಸದ ಎಚ್.ಡಿ.ದೇವೇಗೌಡರು ಮೊಮ್ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟು ತುಮಕೂರಿನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ನಲ್ಲಿದ್ದ ಎ.ಮಂಜು ಬಿಜೆಪಿ ಸೇರಿ ಚುನಾವಣೆಗೆ ನಿಂತಿದ್ದಾರೆ.
ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಹಾಲಿ ಸಂಸದರಿಂದಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲು ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೇ ಅವರಿಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರು ಕಣದಲ್ಲಿದ್ದಾರೆ.
ದಕ್ಷಿಣ ಕನ್ನಡ : ನಳೀನ್ ಕುಮಾರ್ ಕಟೀಲ್
ದಕ್ಷಿಣ ಕನ್ನಡ ಕ್ಷೇತ್ರವೂ ಸಹ ಹಾಲಿ ಸಂಸದರಿಂದಲೇ ಕುತೂಹಲಕ್ಕೆ ಕಾರಣವಾಗಿದೆ. ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ಭಾರಿ ಪ್ರಚಾರ ನಡೆದಿತ್ತು. ಆದರೆ, ಅಂತಿಮವಾಗಿ ಅವರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಿಥುನ್ ರೈ ಕಣದಲ್ಲಿದ್ದಾರೆ.
ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ
ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ರಾಜ್ಯ ಸಚಿವ ಕೃಷ್ಣ ಬೈರೇಗೌಡ ಮುಖಾಮುಖಿಯಾಗಿದ್ದಾರೆ. ಸದಾನಂದ ಗೌಡರು ಮರು ಆಯ್ಕೆ ಬಯಸಿದ್ದಾರೆ. ಆದರೆ, 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಮಂದಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಶಾಸಕರಿದ್ದಾರೆ. ಇದು ಯಾರಿಗೆ ಗೆಲುವು? ಎಂಬ ಕುತೂಹಲ ಮೂಡಿಸಿದೆ.