ಚಿಕ್ಕಪೇಟೆಯಿಂದ ಕಣಕ್ಕಿಳಿಯಲಿದ್ದಾರೆ ಪಿ.ಜಿ.ಆರ್.ಸಿಂಧ್ಯಾ?
ಬೆಂಗಳೂರು, ಜನವರಿ 12 : ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ?. ಹೌದು, ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ.
ಬೆಂಗಳೂರು ನಗರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ತಂತ್ರ ರೂಪಿಸಿರುವ ಜೆಡಿಎಸ್ ಪಿ.ಜಿ.ಆರ್.ಸಿಂಧ್ಯಾ ಅವರನ್ನು ಬೆಂಗಳೂರು ನಗರದಿಂದ ಕಣಕ್ಕಿಳಿಸಲು ಮುಂದಾಗಿದೆ. ಸದ್ಯ, ಕ್ಷೇತ್ರ ಕಾಂಗ್ರೆಸ್ ವಶದಲ್ಲಿದೆ.
'ಟಿಕೆಟ್ ಕೊಡುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು. ಪಕ್ಷ ಬಯಸಿದರೆ ನಾನು ಕಣಕ್ಕಿಳಿಯುತ್ತೇನೆ. ಜನರು ಬದಲಾವಣೆ ಬಯಸಿದ್ದಾರೆ' ಎಂದು ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ. ಆದರೆ, ಕುಮಾರಸ್ವಾಮಿ ಅಥವ ದೇವೇಗೌಡರು ಸಿಂಧ್ಯಾ ಅವರ ಸ್ಪರ್ಧೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2013ರ ಚುನಾವಣೆಯಲ್ಲಿ ಪಿ.ಜಿ.ಆರ್.ಸಿಂಧ್ಯಾ ಅವರು ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದರು. 68,583 ಮತಗಳನ್ನು ಪಡೆದು ಸೋಲು ಕಂಡಿದ್ದರು. ನಂತರ ರಾಜಕೀಯದಿಂದ ದೂರವುಳಿದಿದ್ದ ಅವರು ಕೆಲವು ತಿಂಗಳುಗಳಿಂದ ಸಕ್ರಿಯರಾಗಿದ್ದಾರೆ.
ಪಿ.ಜಿ.ಆರ್.ಸಿಂಧ್ಯಾ ಹೇಳುವುದೇನು?
'ಎಚ್.ಡಿ.ದೇವೇಗೌಡರ ಅನುಭವವನ್ನು ಉಪಯೋಗಿಸಿಕೊಂಡು ಪಕ್ಷ ಉತ್ತಮ ಆಡಳಿತ ನೀಡಲು ಮುಂದಾಗಿದೆ. ಜನರು ಪಕ್ಷಕ್ಕೆ ಅವಕಾಶ ಕೊಟ್ಟರೆ ಉತ್ತಮ ಆಡಳಿತ ನೀಡುತ್ತೇವೆ. ಹೈಕಮಾಂಡ್ ನಿರ್ಧರಿಸಿದರೆ ನಾನು ಕಣಕ್ಕಿಳಿಯುವೆ' ಎಂದು ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ.
ಪಕ್ಷಕ್ಕೆ ಮರಳಿದ್ದಾರೆ
2013ರ ಚುನಾವಣೆ ಸೋಲಿನ ಬಳಿಕ ಪಿ.ಜಿ.ಆರ್.ಸಿಂಧ್ಯಾ ಪಕ್ಷದ ಚಟುವಟಿಕೆಗಳಿಂದ ದೂರವುಳಿದಿದ್ದರು. ಕೆಲವು ತಿಂಗಳ ಹಿಂದೆ ಪಕ್ಷಕ್ಕೆ ಮರಳಿದ್ದರು. ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಡಿ.ಕೆ.ಶಿವಕುಮಾರ್ ವಿರುದ್ಧ ಸೋಲು
2013ರ ಚುನಾವಣೆಯಲ್ಲಿ ಪಿ.ಜಿ.ಆರ್.ಸಿಂಧ್ಯಾ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಡಿ.ಕೆ.ಶಿವಕುಮಾರ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಅವರು ಚಿಕ್ಕಪೇಟೆಯಿಂದ ಸ್ಪರ್ಧಿಸಿದರೆ ಕ್ಷೇತ್ರ ಬದಲಾವಣೆ ಮಾಡಿದಂತಾಗುತ್ತದೆ.
ಆರ್.ವಿ.ದೇವರಾಜ್ ಕ್ಷೇತ್ರದ ಶಾಸಕರು
ಚಿಕ್ಕಪೇಟೆ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಆರ್.ವಿ.ದೇವರಾಜ್. 2013ರ ಚುನಾವಣೆಯಲ್ಲಿ 44,714 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಸಿ.ನಾರಾಯಣ ಗೌಡ ಸ್ಪರ್ಧಿಸಿದ್ದರು.
ಯುವರಾಜ್ ಕಣಕ್ಕೆ
ಈ ಬಾರಿ ಆರ್.ವಿ.ದೇವರಾಜ್ ಅವರು ಚುನಾವಣೆ ಸ್ಪರ್ಧೆ ಮಾಡುವ ಕುರಿತು ಹಲವು ಅನುಮಾನಗಳಿವೆ. ಪುತ್ರ, ಸುಧಾಮನಗರ ವಾರ್ಡ್ ಬಿಬಿಎಂಪಿ ಸದಸ್ಯ ಆರ್.ವಿ.ಯುವರಾಜ್ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂಬ ಸುದ್ದಿಗಳಿವೆ.