ಸರ್ಕಾರಿ ಎಸಿ ಬಸ್ಗಳಲ್ಲಿ ಸಾಕು ಪ್ರಾಣಿಗಳನ್ನು ಒಯ್ಯುವಂತಿಲ್ಲ!
ಬೆಂಗಳೂರು, ಜು.14: ಇತ್ತೀಚೆಗಷ್ಟೇ ಕೆಎಸ್ಆರ್ಟಿಸಿ ಬಸ್ನಲ್ಲಿ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಸೂಚನೆ ನೀಡಿತ್ತು, ಆದರೆ ಹವಾನಿಯಂತ್ರಿತ ಬಸ್ಗಳಲ್ಲಿ ಸಾಕು ಪ್ರಾಣಿಯನ್ನು ಕೊಂಡೊಯ್ಯುವಂತಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.
ಕೆಎಸ್ಆರ್ಟಿಸಿ ಪ್ರತಿ ಐದು ವರ್ಷಕ್ಕೊಮ್ಮೆ ದರ ಪರಿಷ್ರಣೆ ಮಾಡುತ್ತದೆ, ಸಾಕು ನಾಯಿ, ಮೊಲ, ಬೆಕ್ಕು ಮತ್ತು ಗಿಳಿಗಳಿಗೆ ಈ ವರ್ಷ ಫೆಬ್ರವರಿಯಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು, ಸಾಕು ನಾಯಿಗಳನ್ನು ತಮ್ಮ ಜೊತೆ ಬಸ್ಗಳಲ್ಲಿ ಕರೆದೊಯ್ಯಬೇಕಿದ್ದರೆ ಒಬ್ಬ ವ್ಯಕ್ತಿಯ ಸರಿಸಮನಾದ ಪ್ರಯಾಣ ದರವನ್ನು ನೀಡಬೇಕಾಗುತ್ತದೆ.
ಬಸ್ನಲ್ಲಿ ಕೋಳಿ ಸಾಗಿಸಿದರೆ ಹಾಫ್ ಟಿಕೆಟ್ ತೆಗೆದುಕೊಳ್ಳಲೇ ಬೇಕು!
ಇತ್ತೀಚೆಗೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಬಸ್ ಕಂಡಕ್ಟರ್ ಒಬ್ಬರು ಪ್ರಯಾಣಿಕರೊಬ್ಬರಿಂದ ಎರಡು ಹುಂಜಗಳನ್ನು ಕೊಂಡೊಯ್ಯುತ್ತಿದ್ದುದಕ್ಕೆ ಅರ್ಧ ಟಿಕೆಟ್ ನೀಡಿದ್ದು ಸುದ್ದಿಯಾಗಿತ್ತು. ಇದೀಗ ಕೆಎಸ್ಆರ್ ಟಿಸಿ ಹವಾನಿಯಂತ್ರಿತ ಬಸ್ಸುಗಳಲ್ಲಿ ಸಾಕುಪ್ರಾಣಿಗಳನ್ನು ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಿದೆ.
ಈ ಬಗ್ಗೆ ಕೆಎಸ್ ಆರ್ ಟಿಸಿಯ ಎಲ್ಲಾ 15 ವಿಭಾಗಗಳಲ್ಲಿ ಸದ್ಯದಲ್ಲಿಯೇ ಸುತ್ತೋಲೆ ಹೊರಡಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದಕ್ಕೆ ಪ್ರಾಣಿದಯಾ ಕಾರ್ಯಕರ್ತರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿದೆ.
ಇದಕ್ಕೆ ಮುಖ್ಯ ಕಾರಣ ಪ್ರಯಾಣಿಕರಿಂದ ಬರುತ್ತಿರುವ ದೂರುಗಳು ಮತ್ತು ಬಸ್ ಸಿಬ್ಬಂದಿಯ ಅಭಿಪ್ರಾಯಗಳು ಎನ್ನುತ್ತಾರೆ ಕೆಎಸ್ಆರ್ ಟಿಸಿ ಅಧಿಕಾರಿಗಳು. ಹವಾನಿಯಂತ್ರಿತ ಬಸ್ಸುಗಳಲ್ಲಿ ಕಿಟಕಿ ಬಾಗಿಲುಗಳನ್ನು ತೆರೆಯದಿರುವುದರಿಂದ ಹೊರಗಿನ ಗಾಳಿಯಿಲ್ಲದಿರುವುದರಿಂದ ಸಾಕು ಪ್ರಾಣಿಗಳನ್ನು ಕರೆದೊಯ್ಯುವುದು ಅಪಾಯಕಾರಿಯಾಗಿದೆ.
ಇದರಿಂದ ಪ್ರಯಾಣಿಕರಿಗೆ ವಾಸನೆ ಬರುತ್ತದೆ, ಹೀಗಾಗಿ ಪ್ರಯಾಣಿಕರು ದೂರುತ್ತಾರೆ, ಬಸ್ಸಿನಲ್ಲಿ ಸಾಕುಪ್ರಾಣಿಗಳನ್ನು ಕರೆದೊಯ್ದರೆ ಇತರ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಹ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.